PRABHAVAA.COM

ಕ್ರಾಸ್ ವೋಟಿಂಗ್ ಮಾಡಿದವರ ವಿರುದ್ಧ ಸಮಯ ನೋಡಿಕೊಂಡು ಕ್ರಮ: ಹೆಚ್.ಡಿ.ಕುಮಾರಸ್ವಾಮಿ

Mysuru:

Font size:

4 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ, ನಾನೇನು ವಿಚಲಿತನಾಗಿಲ್ಲ; ಜೆನ್ ಜಿ ಗಳಿಗೆ ಅವಕಾಶ ನೀಡುತ್ತೇವೆ ಯಾರ ಯಾರ ಆತ್ಮಸಾಕ್ಷಿ ಹೇಗೆಲ್ಲಾ ವರ್ತಿಸುತ್ತದೆ ಎಂದು ಪರೀಕ್ಷಿಸಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಕ್ರಾಸ್ ವೋಟ್ ಮಾಡಿದ ಮೈಸೂರು ಶಾಸಕನ ಬಗ್ಗೆ ಮಾತನಾಡಲು ಇಚ್ಚಿಸದ HDK

ಕ್ರಾಸ್ ವೋಟಿಂಗ್ ಮಾಡಿದವರ ವಿರುದ್ಧ ಸಮಯ ನೋಡಿಕೊಂಡು ಕ್ರಮ: ಹೆಚ್.ಡಿ.ಕುಮಾರಸ್ವಾಮಿ

4 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ, ನಾನೇನು ವಿಚಲಿತನಾಗಿಲ್ಲ; ಜೆನ್ ಜಿ ಗಳಿಗೆ ಅವಕಾಶ ನೀಡುತ್ತೇವೆ

ಯಾರ ಯಾರ ಆತ್ಮಸಾಕ್ಷಿ ಹೇಗೆಲ್ಲಾ ವರ್ತಿಸುತ್ತದೆ ಎಂದು ಪರೀಕ್ಷಿಸಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ

ಕ್ರಾಸ್ ವೋಟ್ ಮಾಡಿದ ಮೈಸೂರು ಶಾಸಕನ ಬಗ್ಗೆ ಮಾತನಾಡಲು ಇಚ್ಚಿಸದ HDK

ಮೈಸೂರು 19 ಜೂನ್ 2026

ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುತ್ತದೆ ಎಂಬುದು ನನಗೆ ಮೊದಲೇ ತಿಳಿದಿತ್ತು. ಆದರೆ, ಈ ನಾನು ವಿಚಲಿತನಾಗಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಅಲ್ಲದೆ, ಯಾರು ಯಾರು ಅಡ್ಡ ಮತದಾನ ಮಾಡಿದ್ದಾರೆಂಬ ಮಾಹಿತಿ ನನಗಿದೆ. ನಾಲ್ವರ ಶಾಸಕರು ಪಕ್ಷಕ್ಕೆ ವಿರುದ್ಧವಾಗಿ ಮತ ಹಾಕಿದ್ದಾರೆ. ಪಕ್ಷ ಬಿಡುವ ಬಗ್ಗೆಯೂ ಅವರು ಚರ್ಚೆ ನಡೆಸಿದ್ದಾರೆ. ಆ ವಿಷಯವೂ ನನಗೆ ಗೊತ್ತಿದೆ. ಹೋಗುವವರು ಹೋಗಲಿ, ಹೊಸ ನಾಯಕತ್ವವನ್ನು ತರುವುದು ನಮಗೆ ಗೊತ್ತಿದೆ ಎಂದು ಸಚಿವರು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಅತಿಯಾದ ನಂಬಿಕೆ, ವಿಶ್ವಾಸವೇ ಈ ಸೋಲಿನ ಕಾರಣ. ಇದರಿಂದ ಹೊರಬಂದು ಪಕ್ಷ ಕಟ್ಟುವ ಶಕ್ತಿ ನಮಗಿದೆ ಎಂದು ಅವರು ತಿಳಿಸಿದರು.

ನನಗೆ ಎಲ್ಲವೂ ಗೊತ್ತಿದ್ದೇ ನಾನು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಯಾರ ಯಾರ ಆತ್ಮಸಾಕ್ಷಿ ಹೇಗೆಲ್ಲ ವರ್ತನೆ ಮಾಡುತ್ತದೆ ಎಂಬುದನ್ನು ಪರೀಕ್ಷೆ ಮಾಡಲು ಪಕ್ಷದ ಅಭ್ಯರ್ಥಿಯನ್ನು ನಾನು ಕಣಕ್ಕೆ ಇಳಿಸಬೇಕಾಯಿತು. ಎಲ್ಲವೂ ನಾನು ಅಂದುಕೊಂಡಂತೆ ಆಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಕಟ್ಟಬೇಕು ಎಂಬುದು ನಮಗೆ ತಿಳಿದಿದೆ ಎಂದು ಕೇಂದ್ರ ಸಚಿವರು ಮಾರ್ಮಿಕವಾಗಿ ಹೇಳಿದರು.

ಅಡ್ಡ ಮತದಾನ ಮಾಡಿದವರ ಬಗ್ಗೆ ಚರ್ಚೆ ಮಾಡುತ್ತೇನೆ. ಅವರ ವಿರುದ್ಧ ಯಾವಾಗ ಏನು ಕ್ರಮ ಜರುಗಿಸಬೇಕು ಅದನ್ನು ಮಾಡಿಯೇ ಮಾಡುತ್ತೇವೆ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಜೆನ್ ಜಿ ತಲೆಮಾರಿಗೆ ಅವಕಾಶ ನೀಡುತ್ತೇವೆ, ಬೆಳೆಸುತ್ತೇವೆ:

ಇಂತಹ ವಂಚನೆ, ಮೋಸಗಳು ನನಗೆ ಮತ್ತು ನಮ್ಮ ಪಕ್ಷಕ್ಕೆ ಹೊಸವಲ್ಲ. ಎಷ್ಟೋ ಸಲ ಎದುರಿಸಿ ಅದರಿಂದ ಆಚೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಜೆನ್ ಜಿ (Gen Z) ತಲೆಮಾರಿನ ಯುವಜನರಿಗೆ ಹೆಚ್ಚಿನ ಅವಕಾಶ ನೀಡುತ್ತೇವೆ. ಹೊಸ ನಾಯಕತ್ವವನ್ನು ಬೆಳೆಸುವುದು ನಮಗೆ ಗೊತ್ತಿದೆ. ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಿರ್ಧಾರ ಮಾಡಿರುವುದಾಗಿ ಕೇಂದ್ರ saxica ಕುಮಾರಸ್ವಾಮಿ ಅವರು ಘೋಷಿಸಿದರು.

ಸುದ್ದಿಗೋಷ್ಠಿಯಲಿದ್ದ ಪ್ರತಿನಿಧಿಗಳು ಶಾಸಕ ಜಿ.ಟಿ. ದೇವೇಗೌಡ ಅವರ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ತೀವ್ರ ಅಸಹನೆ ವ್ಯಕ್ತಪಡಿಸಿದ ಕೇಂದ್ರ ಸಚಿವರು 'ನನ್ನ ಮುಂದೆ ಅವರ ಹೆಸರು ಎತ್ತಬೇಡಿ' ಎಂದು ಎಂದು ನೇರವಾಗಿಯೇ ಹೇಳಿದರು.

ಕಳೆದ ಒಂದೂವರೆ ವರ್ಷದಿಂದಲೂ ಅವರ ಬಗ್ಗೆ ನಾನು ಚಕಾರ ಎತ್ತಿಲ್ಲ. ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೂಡ ಅವರ ಹೆಸರನ್ನು ನಾನು ಎಲ್ಲಿಯೂ ಪ್ರಸ್ತಾಪಿಸಿಲ್ಲ ಎಂದು ಹೇಳಿದರು ಅವರು.

ಅಂತಿಮ ನಿರ್ಧಾರ ನನ್ನದೇ:

ನಮ್ಮ ಪಕ್ಷದಲ್ಲಿ ಕೆಲವರು ಆ ವ್ಯಕ್ತಿಯನ್ನು ಸರಿಪಡಿಸುವ ಬಗ್ಗೆ ಪ್ರಯತ್ನ ಮಾಡುತ್ತಿದ್ದರು. ಅದು ಅವರ ವೈಯಕ್ತಿಕ ವಿಚಾರ. ಆದರೆ, ಪಕ್ಷಕ್ಕೆ ಸಂಬಂಧಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದು ನಾನೇ. ಈ ಬಗ್ಗೆ ನಾನೇ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಸಚಿವ ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಈ ವ್ಯಕ್ತಿ ಏನೆಲ್ಲಾ ಮಾಡಿದ್ದಾರೆ ಎಂದು ನನಗೆ ಗೊತ್ತು. ಮೂರು ಬಾರಿ ನನಗೆ ಇವರಿಂದ ಕಹಿ ಅನುಭವ ಆಗಿದೆ. ಯಾರು ಎಷ್ಟೇ ಒತ್ತಡ ಹಾಕಿದರೂ ನಾನು ನನ್ನ ನಿರ್ಧಾರವನ್ನು ಕಠಿಣವಾಗಿ ಕೈಗೊಳ್ಳುತ್ತೇನೆ. ಇಲ್ಲಿ ನನ್ನ ವೈಯಕ್ತಿಕ ವಿಚಾರ ಮುಖ್ಯವಲ್ಲ, ಪಕ್ಷವನ್ನು ಉಳಿಸಲು ಕೆಲ ಕಠಿಣ ನಿರ್ಧಾರಗಳನ್ನು ಮಾಡಲೇಬೇಕಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಕಾರ್ಯಕರ್ತರು ಹಗಲಿರುಳು ಕಷ್ಟಪಟ್ಟು ಇವರನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಿದ್ದಾರೆ. ಇವರು ನೋಡಿದರೆ ತಮ್ಮ ಸ್ವಾರ್ಥ ನೋಡಿಕೊಂಡಿದ್ದಾರೆ. ದೇವೇಗೌಡರು ಕಳೆದ ಅರವತ್ತು ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಕಷ್ಟಪಟ್ಟು ಈ ಪಕ್ಷವನ್ನು ಕಟ್ಟಿದ್ದಾರೆ. ಕೆಲವನ್ನು ಅತಿಯಾಗಿ ನಂಬಿ ಈ ಪರಿಸ್ಥಿತಿಗೆ ಬಂದಿದ್ದಾರೆ. ಅವರು ಅಧಿಕಾರದಲ್ಲಿ ಇದ್ದಿದ್ದು ಅತ್ಯಲ್ಪ ಅವಧಿ. ಅವರ ಬಳುವಳಿ ನನಗೂ ಬಂದಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಅಡ್ಡ ಮತದಾನ ಮಾಡಿರುವ ಈ ಜಿಲ್ಲೆಯ ವ್ಯಕ್ತಿಯದು ಮುಗಿದು ಹೋದ ಕಥೆ. ಅವರು ಒಂದು ಕಾಲಲ್ಲ, ಎರಡು ಕಾಲುಗಳನ್ನು ಹೊರಗಡೆ ಇಟ್ಟಿದ್ದಾರೆ. ಅವರ ಬಗ್ಗೆ ನಾನು ಈ ಹಿಂದೆ ಏನು ಹೇಳಿದೆನೋ ಅದೇ ಅಂತಿಮ. ಅವರ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಈ ವಿಚಾರದಲ್ಲಿ ದೇವೇಗೌಡರು ಹೇಳಿದರು ಕೂಡ ಪಕ್ಷದ ಹಿತದೃಷ್ಟಿಯಿಂದ ನನ್ನ ನಿಲುವು ಬದಲಾಗುವುದಿಲ್ಲ. ಈ ಬಾರಿ ಅಸೆಂಬ್ಲಿ ಟಿಕೆಟ್ ಗಳನ್ನು ಅಂತಿಮ ನಿರ್ಣಯ ಮಾಡುವುದು ನಾನೇ. ಇದರ ಬಗ್ಗೆ ಯಾವ ಗೊಂದಲವೂ ಬೇಡ. ಈ ವ್ಯಕ್ತಿ ಯಾವ್ಯಾವಾಗ ಯಾವ್ಯಾವ ರೀತಿಯ ಆಟ ಕಟ್ಟಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವರ ಎಲ್ಲಾ ಪೂರ್ವಾಪರ ಗೊತ್ತಿದೆ. ಈ ಬಾರಿ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆ. ಅದರ ಬಗ್ಗೆ ನನ್ನ ಬಳಿ ಚರ್ಚೆ ಮಾಡಲೇಬೇಡಿ. ದೇವೇಗೌಡರಿಗೆ ಅವರ ಮೇಲೆ ಪ್ರೀತಿ ವ್ಯಾಮೋಹ ಇರುವುದು ಸತ್ಯ. ಆ ವ್ಯಾಮೋಹವನ್ನೇ ಆ ವ್ಯಕ್ತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ‌. ಮುಂದೆ ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಕಠಿಣ ಶಬ್ದಗಳಲ್ಲಿ ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಮುಖ್ಯಮಂತ್ರಿ ಬಗ್ಗೆ ನಾನು ಹೇಳಿದ್ದನ್ನೇ ಜನರೂ ಹೇಳುತ್ತಿದ್ದಾರೆ:

ಡಿಕೆಶಿ ತಮ್ಮ ಹೇಳಿಕೆಯ ಬಗ್ಗೆ ರಬ್ಬಿಶ್ ಎಂದು ಹೇಳಿರುವ ಬಗ್ಗೆ ಲೇವಡಿ ಮಾಡಿದ ಕೇಂದ್ರ ಸಚಿವರು; ನಾನು ಹೇಳಿದ್ದು ಹಾಗಿರಲಿ, ನಾನು ಹೇಳಿದ್ದನ್ನೇ ಜನರೂ ಹೇಳುತ್ತಿದ್ದಾರಲ್ಲ, ಅದಕ್ಕೆ ಏನು ಹೇಳುತ್ತೀರಿ? ಅದರಲ್ಲಿ ನಾನೇನು ತಪ್ಪು ಹೇಳಿದ್ದೇನೆ? ಇದ್ದಿದ್ದನ್ನು ಹೇಳಿದ್ದೇನೆ ಅಲ್ಲವೇ?

ಕೇಂದ್ರದಲ್ಲಿ ಇರುವುದು ಟೆಂಪರವರಿ:

ರಾಜ್ಯ ರಾಜಕಾರಣಕ್ಕೆ ಯಾವಾಗ ವಾಪಸ್ಸು ಬರುತ್ತೀರಿ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಕುಮಾರಸ್ವಾಮಿ ಅವರು; ಕೇಂದ್ರದಲ್ಲಿ ಇರುವುದು ಟೆಂಪರರಿ, ನನಗೆ ರಾಜ್ಯವೇ ಪರ್ಮನೆಂಟ್ ಎಂದರು. ರಾಜ್ಯ ರಾಜಕಾರಣಕ್ಕೆ ಹೊಸದಾಗಿ ನಾನು ಬರಬೇಕಾಗಿಲ್ಲ. ನಮ್ಮ ಪಕ್ಷಕ್ಕೆ ನಾನೇ ಅಧ್ಯಕ್ಷ ಅಲ್ಲವೇ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾನು ರೆಡ್ ಜೋನ್ ತೆಗೆಯದಿದ್ದಕ್ಕೆ ಬಿಡದಿಯಲ್ಲಿ ಇನ್ನೂ ಭೂಮಿ ಉಳಿದಿದೆ:

ಬಿಡದಿ ಟೌನ್ ಶಿಫ್ ಕುಮಾರಸ್ವಾಮಿ ಕೂಸು ಅಂತಾರೆ. ನೈಸ್ ರಸ್ತೆ ದೇವೇಗೌಡರ ಕೂಸು ಎನ್ನುತ್ತಿದ್ದರು. ಬಿಡದಿಯಲ್ಲಿ ನಾನು ರೆಡ್ ಜೋನ್ ತೆಗೆದು ಹಾಕಲಿಲ್ಲ ಅಂತಾರೆ. ಒಂದು ವೇಳೆ ನಾನು ರೆಡ್ ಜೋನ್ ತೆಗೆದಿದ್ದರೆ ಇವತ್ತು ಒಂದು ಚೂರು ಭೂಮಿಯು ರೈತರ ಕೈಯಲ್ಲಿ ಇರುತ್ತಿರಲಿಲ್ಲ. ನಾನೇನಾದರೂ ರಿಯಲ್ ಎಸ್ಟೇಟ್ ಮಾಫಿಯಾ ಪರ ಇದ್ದಿದ್ದರೆ ಇಷ್ಟೊತ್ತಿಗೆ ಭೂಮಿ ರೈತರಿಂದ ಹೋಗಿಬಿಡುತ್ತಿತ್ತು ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಟೌನ್ ಶಿಪ್ ಯೋಜನೆನೆಗೆ ನನ್ನ ಕಾಲದಲ್ಲಿ ಡಿ.ಎಲ್. ಎಫ್ ಹಣ ಕಟ್ಟಿಲ್ಲ. ರಾಜ್ಯಪಾಲದ ಅವಧಿಯಲ್ಲಿ ಹಣ ಕಟ್ಟಿ ನಂತರ ವಾಪಸ್ ತೆಗೆದುಕೊಂಡು ಹೋಗಿದ್ದಾರೆ. 2007 ಜುಲೈ 31ರಂದು ಬಿಡದಿ ಟೌನ್ ಶಿಪ್ ಬಗ್ಗೆ ಸಿದ್ದರಾಮಯ್ಯ ಅವರು ಸದನದಲ್ಲಿ ಏನು ಭಾಷಣ ಮಾಡಿದ್ದಾರೆ ಎಂಬುದನ್ನು ಬಿಡುಗಡೆ ಮಾಡುತ್ತೇನೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಪುಟಗಟ್ಟಲೆ ಮಾತನಾಡಿದ್ದಾರೆ, ಈ ಡಿಕೆಶಿ ಕೂಡ ಮಾತನಾಡಿದ್ದಾರೆ. ಜತೆಗೆ ಮಲ್ಲಿಕಾರ್ಜುನ ಖರ್ಗೆ ಅವರೂ ಮಾತನಾಡಿದ್ದಾರೆ. 2006-07ರಲ್ಲಿ ನಾನು ಸಿಎಂ ಆಗಿದ್ದಾಹ ಐದು ಟೌನ್ ಶಿಪ್ ಮಾಡಲು ನಿರ್ಧಾರ ಮಾಡಿದ್ದು ನಿಜ.ಎಲ್ಲರನ್ನೂ ಕರೆದು ಸಭೆ ಮಾಡಿ ಜನರ ಭಾವನೆಗೆ ಬೆಲೆ ಕೊಟ್ಟು ನಾನು ಅಂದು ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಬಿಟ್ಟೆ. ರೈತರ ಭೂಮಿಯನ್ನು ರಿಯಲ್ ಎಸ್ಟೇಟ್ ಕುಳಗಳಿಗೆ ಕೊಡಬಾರದು ಎಂದು ಆ ಯೋಜನೆಯನ್ನು ಅಲ್ಲಿಗೆ ಬಿಟ್ಟೆ. ರೈತರ ದನಿಯಾಗಿ ನನ್ನ ಹೋರಾಟ ನಾನು ಮಾಡುತ್ತೇನೆ. ಕಾನೂನು ವ್ಯಾಪ್ತಿಯಲ್ಲಿ ರೈತರಿಗೆ ಒಳ್ಳೆಯದು ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಹೇಳಿದರು.

ಅಗಲಿದ ಮುಖಂಡ ಚಂದ್ರಶೇಖರ್ ಅವರಿಗೆ ಅಂತಿಮ ನಮನ:

ನಿನ್ನೆ ನಿಧನರಾದ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಪಿ ಹೆಚ್ ಚಂದ್ರಶೇಖರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

ಮೈಸೂರಿನ ಗೋಕುಲಂನ ಡಾಕ್ಟರ್ಸ್ ಕಾಲೋನಿಯಲ್ಲಿರುವ ಚಂದ್ರಶೇಖರ್ ಅವರ ನಿವಾಸಕ್ಕೆ ಆಗಮಿಸಿದ ಸಚಿವರು ಆಗಲಿಲ್ಲ ನಾಯಕನಿಗೆ ನಮನ ಸಲ್ಲಿಸಿ, ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಮಾಜಿ ಮಂತ್ರಿ ಸಿ ಎಸ್ ಪುಟ್ಟರಾಜು, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ವಿವೇಕಾನಂದ, ಮೈಸೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಶ್ವಿನ್ ಕುಮಾರ್ ಅವರು ಸಚಿವರ ಜತೆಯಲ್ಲಿ ಇದ್ದರು.

Comments

Leave a Comment

Prev Post ಅಡ್ಡ ಮತದಾನ ಮಾಡಿದವರ ಕ್ಷಮಿಸುವ ಪ್ರಶ್ನೆ ಇಲ್ಲ: ಬಿ.ವೈ. ವಿಜಯೇಂದ್ರ
Next Post ಸಾರಿಗೆ ನಿಗಮ ನೌಕರರಿಗೆ ತುಟ್ಟಿಭತ್ಯೆ ದರ ಏರಿಕೆ,

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News