ಕಾರಾವಳಿಯಾದ್ಯಂತ ಅವ್ಯಾಹತ ಮಳೆ; ಜನಜೀವನ ಅಸ್ತವ್ಯಸ್ತ
from Jayaram Udupi
ಮಂಗಳೂರು:
ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ (ಕೃತಕ ಬುದ್ಧಿಮತ್ತೆ) ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ನಗರದಲ್ಲಿನ 28 ಪ್ರಮುಖ ಜಂಕ್ಷನ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕ್ಯಾಮರಾಗಳು ವಾಹನ ದಟ್ಟಣೆಗೆ ಅನುಗುಣವಾಗಿ ಸಿಗ್ನಲ್ಗಳನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುವ ಮೂಲಕ ಸಂಚಾರ ಸುಗಮಗೊಳಿಸುತ್ತಿವೆ.
ಇದಲ್ಲದೆ ಸಂಚಾರಿ ಪೊಲೀಸ್ ಇಲಾಖೆಯು ವಿವಿಧ ಸ್ಥಳಗಳಲ್ಲಿ ಹೆಚ್ಚುವರಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು, ಸಂಚಾರ ನಿಯಮ ಉಲ್ಲಂಘನೆ, ಅಪಘಾತ ತಡೆ ಹಾಗೂ ಅಪರಾಧ ತನಿಖೆಗೆ ಈ ವ್ಯವಸ್ಥೆ ಪರಿಣಾಮಕಾರಿಯಾಗಿ ನೆರವಾಗುತ್ತಿದೆ. ದರೋಡೆ, ಕೊಲೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚುವಲ್ಲೂ ಕ್ಯಾಮರಾಗಳು ಪ್ರಮುಖ ಪಾತ್ರ ವಹಿಸಿವೆ.
ನಗರದಲ್ಲಿ ಇನ್ನು ಮುಂದೆ ಮಿತಿ ಮೀರಿದ ವೇಗದಿಂದ ವಾಹನ ಚಾಲನೆಗೂ ದಂಡ ವಿಧಿಸಲಾಗುವುದು. ಎಐ ಕ್ಯಾಮರಾಗಳ ಮೂಲಕ ವೇಗ ಉಲ್ಲಂಘನೆ ಪತ್ತೆ ಮಾಡಿ ಪ್ರಕರಣ ದಾಖಲಿಸಲಾಗುತ್ತಿದ್ದು, 'ಇ-ವಾಹನ' ವ್ಯವಸ್ಥೆ ಜಾರಿಯಾದ ಹಿನ್ನೆಲೆಯಲ್ಲಿ ಹೊರರಾಜ್ಯದ ವಾಹನಗಳಿಗೂ ನೋಟಿಸ್ ಜಾರಿಗೊಳಿಸಿ ದಂಡ ವಸೂಲಿ ಮಾಡಬಹುದಾಗಿದೆ.
ಮಂಗಳೂರು ನಗರ ವ್ಯಾಪ್ತಿಯ ಎಲ್ಲಾ ಸಿಸಿ ಕ್ಯಾಮರಾಗಳು ಸುಸ್ಥಿತಿಯಲ್ಲಿದ್ದು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ನಿರಂತರವಾಗಿ ದಾಖಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವೇಗ ಮಿತಿ ಉಲ್ಲಂಘನೆ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ತಿಳಿಸಿದ್ದಾರೆ.
000000
ಕಾರಾವಳಿಯಾದ್ಯಂತ ಅವ್ಯಾಹತ ಮಳೆ; ಜನಜೀವನ ಅಸ್ತವ್ಯಸ್ತ
ಮಂಗಳೂರು / ದಕ್ಷಿಣ ಕನ್ನಡ:
ಕರಾವಳಿಯಾದ್ಯಂತ ಮುಂಗಾರು ಮಳೆ ಕೃಷಿಕರಿಗೆ ಹರ್ಷ ತಂದಿದ್ದರೂ ನಗರ- ಗ್ರಾಮಗಳ ಭೇದವಿಲ್ಲದೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಜಿಲ್ಲೆಯ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ.ತಗ್ಗು ಪ್ರದೇಶಗಳು ಜಲಾವೃತ ವಾಗಿವೆ.
ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕುಗಳಲ್ಲಿ ಮಳೆಯಿಂದಾಗಿ ಕೃಷಿ ನಾಶ ಸಂಭವಿಸಿದೆ. ಮಳೆಯ ಜೊತೆ ವೇಗವಾಗಿ ಬೀಸುವ ಗಾಳಿ ಅಡಿಕೆ, ತೆಂಗು, ಮತ್ತಿತರ ಮರಗಳನ್ನು ಉರುಳಿಸಿದೆ.
ಆಗಸದಲ್ಲಿ ದಟ್ಟ ಕಾರ್ಮೋಡಗಳು ಮೂಡಿದ್ದು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಎಡೆಬಿಡದೆ ಭಾರೀ ಮಳೆಯಾಗುತ್ತಿದೆ. ಭೂಕುಸಿತದಿಂದಾಗಿ ಮಂಗಳೂರು ಬೆಂಗಳೂರು ರೈಲು ಸೇವೆಯೂ ಅಸ್ತವ್ಯಸ್ತಗೊಂಡಿದೆ.
ಆಷಾಡ ಮಾಸದ ಪುಷ್ಯ ಮಳೆ ಕೊನೆಯ ದಿನಗಳಲ್ಲಿ ಹಿಂದಿನ ಕಾಲದ ನಾಣ್ಣುಡಿಯಂತೆ ಪುಚ್ಚೆದ ಪುಣ ಪಿದಾಯಿ ದೀವೆರೆಗ್ಲಾ ಬುಡಂದ್ ಎಂಬ ರೀತಿಯಲ್ಲಿ ಅವ್ಯಾತವಾಗಿ ಸುರಿದು ಇಂದಿನಿಂದ ಆರಂಭವಾಗುವ ಆಶ್ಲೇಷಾಕ್ಕೂ ತನ್ನ ರಭಸವನ್ನು ದಾಟಿಸಿದೆ.
ಪಶ್ಚಿಮ ಘಟ್ಟದ ಬುಡದ ಹಳ್ಳಿಗಳಲ್ಲಿ ಭತ್ತದ ಬೇಸಾಯ ಮಾಡುವ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದರು.ಚಾಪೆ ನೇಜಿ ತಯಾರಕರು ರೈತರಿಂದ ಬೇಡಿಕೆ ಬರದೆ ನಷ್ಟ ಅನುಭವಿಸುವ ಭೀತಿಯಲ್ಲಿದ್ದರು. ವರುಣ ದೇವ ಅವರ ಆತಂಕ ದೂರ ಮಾಡಿದ್ದಾನೆ. ನಭದಲ್ಲಿ ಸಣ್ಣ ಹಾಗು ದೊಡ್ಡ ಕಾರ್ಮೋಡಗಳ ಮೆರವಣಿಗೆ ಮಹಾಕವಿ ಕಾಳಿದಾಸನ ಮೇಘದೂತದ ಮೋಡಗಳ ವರ್ಣನೆಯನ್ನು ಕಣ್ಣೆದುರು ತರುವಂತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಳೆಯ ಅಬ್ಬರದ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ವಿವಿಧೆಡೆ ಮರಗಳು ಬುಡಮೇಲಾಗಿ ವಿದ್ಯುತ್ ಕಂಭಗಳ ಮೇಲೆ ಬಿದ್ದಿರುವ ವರದಿಗಳು ಬಂದಿವೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ವಾಗಿದ್ದು, ಮೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
ಸಮುದ್ರ ಪ್ರಕ್ಷುಬ್ದವಾಗಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಈ ನಡುವೆ ಜಿಲ್ಲೆಯಲ್ಲಿ ಮೆಸ್ಕಾಂ ಪವರ್ ಮ್ಯಾನ್ ಓರ್ವರು ವಿದ್ಯುದಾಘಾತಕ್ಕೆ ಬಲಿಯಾಗಿದ್ದಾರೆ.ಬಂಟ್ವಾಳದಲ್ಲಿ ಓರ್ವರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.


Comments
Leave a Comment