ರಾಜ್ಯದ ಮೂಲೆಮೂಲೆಗೆ ಸಮ ಸಮಾಜದ ಸಂದೇಶ
ರಾಜ್ಯದ ಮೂಲೆಮೂಲೆಗೆ ಸಮ ಸಮಾಜದ ಸಂದೇಶ
ಎಲ್ಲ ಜಿಲ್ಲೆಗಳಿಗೆ ಶ್ರೀ ಗುರು ರವಿದಾಸ್ ಮಹಾರಾಜ್ ಕಲಶ: ವಿಜಯೇಂದ್ರ
ಬೆಂಗಳೂರು: ಸಂತ ರವಿದಾಸದ ಪವಿತ್ರ ಕಳಸವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಕಾರ್ಯಕರ್ತರು ತೆಗೆದುಕೊಂಡು ಹೋಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಸಂತ ಶಿರೋಮಣಿ ಗುರು ಶ್ರೀ ರವಿದಾಸರ 650ನೇ ವರ್ಷದ ಜಯಂತಿ ಅಂಗವಾಗಿ ದೇಶದಾದ್ಯಂತ ಶ್ರೀ ಗುರು ರವಿದಾಸ್ ಮಹಾರಾಜ್ ಕಲಶ್ ವಂದನ್ ಅಭಿಯಾನ ಮತ್ತು ಕಳಶ ಯಾತ್ರೆಯ ಅಂಗವಾಗಿ ಕಳಶವನ್ನು ಇಂದು ಸ್ವೀಕರಿಸಿ ಅವರು ಮಾತನಾಡಿದರು. ಸಮ ಸಮಾಜ ನಿರ್ಮಾಣ ಮಾಡಬೇಕು ಎಂಬ ಸಂದೇಶವನ್ನು ರಾಜ್ಯದ ಮೂಲೆಮೂಲೆಗೆ ಹರಡಲಿದ್ದಾರೆ. ಈ ಸಂಬಂಧ ಜಾಗೃತಿ ಮೂಡಿಸಲು ಎಲ್ಲಾ ಕಾರ್ಯಗಳನ್ನು ನಮ್ಮ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಅವರು ಹೇಳಿದರು.
ಕಲಶ್ ವಂದನ್ ಅಭಿಯಾನ ಮತ್ತು ಕಳಶ ಯಾತ್ರೆಯನ್ನು ವಿಜೃಂಭಣೆಯಿಂದ ನಡೆಸಲು ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರು ಎಲ್ಲಾ ರಾಜ್ಯಗಳಿಗೆ ಪವಿತ್ರ ಕಳಶವನ್ನು ಕಳುಹಿಸಿದ್ದು, ಈ ಕಳಶವನ್ನು ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಜಯೇಂದ್ರ ಅವರು ಸ್ವೀಕರಿಸಿದರು.
ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗ್ರವಾಲ್, ಸಹ ಉಸ್ತುವಾರಿ ಪಿ.ಸುಧಾಕರ ರೆಡ್ಡಿ, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್, ಶಾಸಕ ಬಸವರಾಜ ಮತ್ತಿಮಡು, ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಎಂಎಲ್ಸಿ ಸಿ.ಟಿ.ರವಿ, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ ಕೌತಾಳ, ಪ್ರಶಾಂತ್ ಕುಮಾರ್ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.



Comments
Leave a Comment