ಕ್ವಾಂಟಮ್ ಸಿಟಿ ನಿರ್ಮಾಣಕ್ಕೆ ಕರ್ನಾಟಕದೊಂದಿಗೆ ಕೈಜೋಡಿಸಿ: ಜಾಗತಿಕ ತಂತ್ರಜ್ಞಾನ ಕ್ಷೇತ್ರದ ನಾಯಕರಿಗೆ ಸಚಿವ ಡಾ. ಅಜಯ್ ಧರ್ಮಸಿಂಗ್ ಆಹ್ವಾನ
ಕ್ವಾಂಟಮ್ ಸಿಟಿ ನಿರ್ಮಾಣಕ್ಕೆ ಕರ್ನಾಟಕದೊಂದಿಗೆ ಕೈಜೋಡಿಸಿ: ಜಾಗತಿಕ ತಂತ್ರಜ್ಞಾನ ಕ್ಷೇತ್ರದ ನಾಯಕರಿಗೆ ಸಚಿವ ಡಾ. ಅಜಯ್ ಧರ್ಮಸಿಂಗ್ ಆಹ್ವಾನ
ಬೆಂಗಳೂರು, ಸೆ. 8- ಕರ್ನಾಟಕದ ಪ್ರಸ್ತಾವಿತ ‘ಕ್ವಾಂಟಮ್ ಸಿಟಿ’ ಯನ್ನು ಸಂಶೋಧನೆ, ನಾವೀನ್ಯತೆ ಮತ್ತು ಜಾಗತಿಕ ಮಟ್ಟದ ತಂತ್ರಜ್ಞಾನ ಸಹಭಾಗಿತ್ವದ ಪ್ರಮುಖ ಕೇಂದ್ರವಾಗಿ ರೂಪಿಸಲು ಜಾಗತಿಕ ತಂತ್ರಜ್ಞಾನ ಕಂಪನಿಗಳು, ಸ್ಟಾರ್ಟ್ಅಪ್ಗಳು, ಹೂಡಿಕೆದಾರರು ಹಾಗೂ ಸಂಶೋಧಕರು ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಆಹ್ವಾನ ನೀಡಿದರು.
ಬೆಂಗಳೂರಿನ ಶೆರಟಾನ್ ಗ್ರ್ಯಾಂಡ್ನಲ್ಲಿ ನಡೆದ ಬಾಹ್ಯಾಕಾಶ, ಮೊಬಿಲಿಟಿ ಮತ್ತು ಡ್ರೋನ್ ಕ್ಷೇತ್ರಗಳ ಉನ್ನತ ಮಟ್ಟದ ದುಂಡುಮೇಜಿನ ಸಭೆ ಯಲ್ಲಿ ಮಾತನಾಡಿದ ಅವರು, ಯೋಜನೆಯ ಆರಂಭಿಕ ಹಂತದಿಂದಲೇ ಉದ್ಯಮಗಳು, ಹೂಡಿಕೆದಾರರು ಮತ್ತು ಸಂಶೋಧನಾ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿ, ತಮ್ಮ ಆಲೋಚನೆ, ತಂತ್ರಜ್ಞಾನ ಮತ್ತು ಸಹಭಾಗಿತ್ವದ ಮೂಲಕ ರಾಜ್ಯದ ಡೀಪ್ಟೆಕ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.
“ಕ್ವಾಂಟಮ್ ಸಿಟಿ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದನ್ನು ಸರ್ಕಾರ ಮಾತ್ರ ನಿರ್ಮಿಸುವುದಲ್ಲ; ಉದ್ಯಮಗಳು, ಸಂಶೋಧಕರು, ಸ್ಟಾರ್ಟ್ಅಪ್ಗಳು ಮತ್ತು ಹೂಡಿಕೆದಾರರ ಸಕ್ರಿಯ ಸಹಭಾಗಿತ್ವದಲ್ಲಿ ರೂಪಿಸಬೇಕೆಂಬುದು ನಮ್ಮ ಆಶಯ. ಜಾಗತಿಕ ಮಟ್ಟದ ಡೀಪ್ಟೆಕ್ ಪರಿಸರ ವ್ಯವಸ್ಥೆಯನ್ನು ಕಟ್ಟಲು ತಂತ್ರಜ್ಞಾನ ಕ್ಷೇತ್ರದ ನಾಯಕರು ಕರ್ನಾಟಕದೊಂದಿಗೆ ಕೈಜೋಡಿಸಬೇಕು,”* ಎಂದು ಹೇಳಿದರು.
Ease of Doing Business ಗೆ ಸರ್ಕಾರ ನೀಡುತ್ತಿರುವ ಆದ್ಯತೆಯನ್ನು ಪ್ರಸ್ತಾಪಿಸಿದ ಸಚಿವರು, ತಂತ್ರಜ್ಞಾನ ಕಂಪನಿಗಳು ಕರ್ನಾಟಕದಲ್ಲಿ ತಮ್ಮ ಆಲೋಚನೆಗಳನ್ನು ಅಭಿವೃದ್ಧಿಪಡಿಸಲು, ಪರೀಕ್ಷಿಸಲು, ಉತ್ಪಾದಿಸಲು ಮತ್ತು ವಾಣಿಜ್ಯ ಮಟ್ಟದಲ್ಲಿ ವಿಸ್ತರಿಸಲು ಅನುಕೂಲಕರ ವಾತಾವರಣ ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಎಂದರು.
ಐಟಿ ಮತ್ತು ಏರೋಸ್ಪೇಸ್ ಕ್ಷೇತ್ರಗಳಲ್ಲಿ ಕರ್ನಾಟಕ ಹೊಂದಿರುವ ಬಲವಾದ ನೆಲೆಯನ್ನು ಆಧಾರವಾಗಿಟ್ಟುಕೊಂಡು, ಕ್ವಾಂಟಮ್ ತಂತ್ರಜ್ಞಾನ, ಸ್ಪೇಸ್ಟೆಕ್, ಡ್ರೋನ್ಟೆಕ್, ಕೃತಕ ಬುದ್ಧಿಮತ್ತೆ (AI) ಹಾಗೂ ಜಿಯೋಸ್ಪೇಷಿಯಲ್ ತಂತ್ರಜ್ಞಾನ ಸೇರಿದಂತೆ ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಜ್ಯವನ್ನು ಮುಂಚೂಣಿಗೆ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–30 ರಡಿ 2033ರ ವೇಳೆಗೆ ಭಾರತದ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಶೇ.50 ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಶೇ.5 ಪಾಲು ಪಡೆಯುವುದು, 3 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಆಕರ್ಷಿಸುವುದು ಹಾಗೂ 50,000 ವೃತ್ತಿಪರರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದರು.
ಅಂತರ್ಜಲ ನಿರ್ವಹಣೆ, ಕೆರೆಗಳ ಮ್ಯಾಪಿಂಗ್, ನೀರಾವರಿ ಆಸ್ತಿಗಳ ನಿರ್ವಹಣೆ ಹಾಗೂ ಯೋಜನೆಗಳ ಮೇಲ್ವಿಚಾರಣೆಯಲ್ಲಿ ಉಪಗ್ರಹ ಚಿತ್ರಣ, ಡ್ರೋನ್, GIS, ರಿಮೋಟ್ ಸೆನ್ಸಿಂಗ್ ಮತ್ತು AI ತಂತ್ರಜ್ಞಾನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.
“ತಂತ್ರಜ್ಞಾನವು ಜನರ ನೈಜ ಸಮಸ್ಯೆಗಳಿಗೆ ಪರಿಹಾರ ನೀಡಿದಾಗಲೇ ಅದರ ನಿಜವಾದ ಮೌಲ್ಯ ಸಾರ್ಥಕವಾಗುತ್ತದೆ. ಕರ್ನಾಟಕದಲ್ಲಿ ನಿರ್ಮಿಸಿ, ಕರ್ನಾಟಕದಲ್ಲೇ ಪರೀಕ್ಷಿಸಿ, ಕರ್ನಾಟಕದಲ್ಲೇ ಉತ್ಪಾದಿಸಿ, ಇಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಜಗತ್ತಿಗೆ ಕೊಂಡೊಯ್ಯಿರಿ — ಇದು ನಮ್ಮ ಕರೆಯಾಗಿದೆ,” ಎಂದು ಡಾ. ಅಜಯ್ ಧರ್ಮಸಿಂಗ್ ಹೇಳಿದರು.
ದುಂಡುಮೇಜಿನ ಸಭೆಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್, ದಕ್ಷಿಣ ಭಾರತದಲ್ಲಿನ ಇಸ್ರೇಲ್ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್ಮನ್ ಹಾಗೂ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್, ಪಿಕ್ಸೆಲ್, ಧ್ರುವ ಸ್ಪೇಸ್, ಐಡಿಯಾಫೋರ್ಜ್, ಆಕ್ಸೆಲ್ಸ್ಪೇಸ್, ಬ್ಲ್ಯಾಕ್ಸ್ಕೈ, ಕ್ಯಾಪೆಲ್ಲಾ ಸ್ಪೇಸ್, ಎಂಡ್ಯೂರೋಸ್ಯಾಟ್, ಸರ್ಲಾ ಏವಿಯೇಷನ್ ಮತ್ತು ಟೇಕ್ಮಿ2ಸ್ಪೇಸ್* ಪ್ರತಿನಿಧಿಗಳು, ಹೂಡಿಕೆದಾರರು ಹಾಗೂ ತಂತ್ರಜ್ಞಾನ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.






Comments
Leave a Comment