ಎರಡು ವಾರದಲ್ಲಿ ಕ್ರಮ ಇಲ್ಲದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ನಿಖಿಲ್ ರೈತರ ಭೂಮಿ ನುಂಗಿದ ನೈಸ್ - ಸರ್ಕಾರ ಮೌನ ಏಕೆ? ನಿಖಿಲ್ ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು-ಮೈಸೂರು ಕಾರಿಡಾರ್ (BMICP) ಯೋಜನೆಯಲ್ಲಿ NICE ಸಂಸ್ಥೆ ನಡೆಸಿರುವ ಅಕ್ರಮ ಮತ್ತು ವಂಚನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೆಡಿಎಸ್ ನಿಯೋಗ ಇಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ, ಹೈಕೋರ್ಟ್ ತೀರ್ಪಿನ ಪ್ರತಿ ಸಮೇತ 5 ಪುಟಗಳ ಮನವಿ ಪತ್ರ ಸಲ್ಲಿಸಿದರು.
ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ ನಿಖಿಲ್
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೈಸ್ ಯೋಜನೆ ಅಕ್ರಮದ ಬಗ್ಗೆ ಸರ್ಕಾರಕ್ಕೆ ನಾವು ಎರಡು ವಾರ ಗಡುವು ಕೊಡ್ತೀವಿ. ಸರ್ಕಾರ ನೈಸ್ ಯೋಜನೆಯನ್ನು ವಶಪಡಿಸಿಕೊಳ್ಳದೇ ಹೋದ್ರೆ ಜೆಡಿಎಸ್ ಉಗ್ರ ಹೋರಾಟ ಮಾಡಲಿದೆ. ನೈಸ್ ಅಕ್ರಮದ ಬಗ್ಗೆ ಜಾಗೃತಿ ಮೂಡಿಸೋ ಕೆಲಸ ಮಾಡ್ತೀವಿ. ಗುರುವಾರ, ಶುಕ್ರವಾರ ವೆಬ್ ಸೈಟ್ ರಿಲೀಸ್ ಮಾಡ್ತೀವಿ. ಅದರಲ್ಲಿ ಎಲ್ಲಾ ದಾಖಲಾತಿ ಜನರಿಗೆ ಸಿಗೋ ಹಾಗೆ ಮಾಡ್ತೀವಿ ಎಂದು ಹೇಳಿದರು.
ಹೈಕೋರ್ಟ್ ನೈಸ್ ಬಗ್ಗೆ ಐತಿಹಾಸಿಕ ತೀರ್ಪು ಕೊಟ್ಟಿದೆ. ನೈಸ್ ಯೋಜನೆ ದೊಡ್ಡ ಹಗರಣ ಅಂತ ಕೋರ್ಟ್ ಹೇಳಿದೆ. NICE is not a NICE ಎಂಬುದು ಸಾಬೀತಾಗಿದೆ. ನೈಸ್ ಯೋಜನೆ ಅಗ್ರಿಮೆಂಟ್ ಪ್ರಕಾರ ಪ್ರಾಜೆಕ್ಟ್ ಆಗಿಲ್ಲ. ರೈತರ ಜಮೀನು ಸ್ವಾಧೀನ ಮಾಡಿಕೊಂಡು ರೈತರಿಗೆ ಪರಿಹಾರ ಕೊಟ್ಟಿಲ್ಲ. ಭೂಸ್ವಾಧೀನ ಅಂತಿಮ ಅಧಿಸೂಚನೆ ಕೋರ್ಟ್ ರದ್ದು ಮಾಡಿದೆ. ನೈಸ್ ನಲ್ಲಿ ಫ್ರೇಮ್ ವರ್ಕ್ ಅಗ್ರಿಮೆಂಟ್ ಉಲ್ಲಂಘನೆ ಆಗಿದೆ. ದೇವೇಗೌಡರು MOU ಮಾಡಿದ್ದು ವಿಷನ್ ಇಟ್ಟುಕೊಂಡು. ಆದರೆ MOU ಉಲ್ಲಂಘನೆ ಆಗಿದೆ, ಗಾಳಿಗೆ ತೂರಿದ್ದಾರೆ" ಎಂದು ಆರೋಪಿಸಿದರು.
ಸರ್ಕಾರ ಯಾಕೆ ಮೌನವಾಗಿದೆ? ಸರ್ಕಾರ ಜನರ ಪರ, ರೈತರ ಪರ ಇದೆಯಾ? ಕೊಟ್ಯಾಂತರ ರೂಪಾಯಿ ಟೋಲ್ ಸಂಗ್ರಹ ಮಾಡ್ತಾ ಇದ್ದಾರೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು. ನೈಸ್ ಯೋಜನೆ ಸರ್ಕಾರ ಟೇಕ್ ಓವರ್ ಮಾಡಬೇಕು ಅಂತ ಕೋರ್ಟ್ ಹೇಳಿದೆ. ಆದ್ರೂ ಸರ್ಕಾರ ಮೌನಕ್ಕೆ ಶರಣಾಗಿದೆ. ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಸರ್ಕಾರಕ್ಕೆ ಚಾಟಿ ಬೀಸಬೇಕು ಅಂತ ಮನವಿ ಮಾಡಿದ್ದೇವೆ" ಎಂದು ಹೇಳಿದರು.
ಬಿಡದಿ ಕೇಸ್: ಹೈಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ
ಬಿಡದಿ ಕೇಸ್ ವಿಚಾರದಲ್ಲಿ 81 ಜನ ರೈತರು ಅರ್ಜಿ ಹಾಕಿದ್ರು. ಒಂದು ಇಟ್ಟಿಗೆ ಕೂಡ ಅಲುಗಾಡಬಾರದು ಅಂತ ಕೋರ್ಟ್ ಹೇಳಿದೆ. ಸರ್ಕಾರ ಅಬ್ಜೆಕ್ಷನ್ ಸಲ್ಲಿಕೆ ಮಾಡಿಲ್ಲ. ಸರ್ಕಾರ ಮಾಡಿರೋ ಭೂಸ್ವಾಧೀನದಲ್ಲಿ ಯಾವುದೇ ನ್ಯಾಯ ಇಲ್ಲ. ಹೈಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ. ಇದು ಇನ್ನು ಸಮಯ ಆಗುತ್ತದೆ. ವಾದ ಮಂಡನೆ ಆಗಬೇಕು. ಕಾದು ನೋಡೋಣ ಎಂದು ಹೇಳಿದರು.
ಬಿಜೆಪಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ - ನಿಖಿಲ್
ಸದನದ ಒಳಗೆ ಒಟ್ಟಾಗಿ ಹೋರಾಟ ಮಾಡಿದ್ವಿ. ಈಗ ಸದನ ಹೊರಗೆ ನಾವು ಬಿಜೆಪಿ ಜೊತೆ ಇರ್ತೀವಿ. ನಾಡಿನ ಯಾವುದೇ ವಿಷಯ ಬಂದಾಗ ಬಿಜೆಪಿ ಜೊತೆ ನಾವು ಒಟ್ಟಾಗಿ ಹೋಗ್ತೀವಿ. ಸಿದ್ದರಾಮಯ್ಯ ಅವರೇ ಅಕ್ರಮ ಆಗಿರೋದು ಒಪ್ಪಿಕೊಂಡಿದ್ದಾರೆ. ಇಷ್ಟಾದ್ರೂ ಆರೋಪ ಇರೋ ವ್ಯಕ್ತಿಯನ್ನ ಯಾಕೆ ಸಚಿವನಾಗಿ ತಗೊಂಡ್ರು? ಬಿಜೆಪಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದರು.
ಚೆಲುವರಾಯಸ್ವಾಮಿ ಆರೋಪಕ್ಕೆ ನಿಖಿಲ್ ತಿರುಗೇಟು
"ಕುಮಾರಸ್ವಾಮಿ ಅವರು ಯಾವತ್ತು ದಾಖಲಾತಿ ಇಲ್ಲದೆ ಮಾತಾಡಲ್ಲ. ಹಿಟ್ ಅಂಡ್ ರನ್ ಬಗ್ಗೆ ಹೊಸದಾಗಿ ಆಗಿರೋ ಸಚಿವರು ಮಾತಾಡ್ತಾರೆ. ಹಿಟ್ ಅಂಡ್ ರನ್ ಮಾಡಿದ್ದು ಬಿಡದಿ ಪ್ರಾಜೆಕ್ಟ್ ನಲ್ಲಿ ಯಾರು? ಕುಮಾರಸ್ವಾಮಿ ಅವರು ಸಿಎಂ ಅವರನ್ನ ಬಿಡದಿ ವಿಚಾರದಲ್ಲಿ ಚರ್ಚೆಗೆ ಕರೆದಾಗ ಯಾಕೆ ಸಿಎಂ ಬರಲಿಲ್ಲ. ಕುಮಾರಸ್ವಾಮಿ ಹೋಗಿದ್ರು. ಸಿಎಂ ಯಾಕೆ ಭೈರಮಂಗಲಕ್ಕೆ ಬರಲಿಲ್ಲ. ಹಾಗಾದ್ರೆ ಹಿಟ್ ಅಂಡ್ ರನ್ ಮಾಡಿದ್ದು ಯಾರು?" ಎಂದು ಪ್ರಶ್ನಿಸಿದರು.
||ಮನವಿ ಪತ್ರದ ಪ್ರಮುಖ ಅಂಶಗಳು||
1. ಪರಿಹಾರವಿಲ್ಲದೆ ಭೂಸ್ವಾಧೀನ ಅಸಿಂಧು: 20 ವರ್ಷದಿಂದ ಅವಾರ್ಡ್ ಪಾಸ್ ಮಾಡದೆ ಪರಿಹಾರ ನೀಡದಿರುವುದು Article 300A ಉಲ್ಲಂಘನೆ.
2. ಶಾಸನದ ಮೇಲಿನ ವಂಚನೆ: NICE ಭೂಮಿಯನ್ನು ಖಾಸಗಿ ಡೆವಲಪರ್ ಗಳಿಗೆ JDA ಮೂಲಕ ಮಾರಾಟ ಮಾಡಿದೆ. "Fraud on Statute and Constitution" ಎಂದು ಕೋರ್ಟ್ ಹೇಳಿದೆ.
3. ಪರಿಸರ ನಾಶ: ಕೆರೆ, ಕಟ್ಟೆಗಳ ಭೂಮಿಯನ್ನು NICE ಗೆ ನೀಡಿರುವುದು ಸುಪ್ರೀಂ ಕೋರ್ಟ್ ನ Hinchlal Tiwari ತೀರ್ಪಿಗೆ ವಿರುದ್ಧ.
4. ಯೋಜನೆಯೇ ವೈಫಲ್ಯ:_ 111 ಕಿ.ಮೀ ನಲ್ಲಿ 25 ವರ್ಷದಲ್ಲಿ ಕೇವಲ 5 ಕಿ.ಮೀ ನಿರ್ಮಾಣ, 20,193 ಎಕರೆ ಭೂ ಬ್ಯಾಂಕ್ ಇಟ್ಟುಕೊಂಡು ರಿಯಲ್ ಎಸ್ಟೇಟ್ ದಂಧೆ. "ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಇದು ಒಂದು" ಎಂದು ಕೋರ್ಟ್ ಹೇಳಿದೆ.
ಜೆಡಿಎಸ್ ನ 7 ಬೇಡಿಕೆಗಳು
1. ಅನಧಿಕೃತ ಟೋಲ್ ಸಂಗ್ರಹ ತಕ್ಷಣ ನಿಲ್ಲಿಸಬೇಕು.
2. ಹೆಚ್ಚುವರಿ 554 ಎಕರೆ ಭೂಮಿಯನ್ನು ಕೂಡಲೇ NICE ನಿಂದ ವಾಪಸ್ ಪಡೆಯಬೇಕು.
3. SIT ಮತ್ತು Forensic Audit ನಡೆಸಬೇಕು.
4. ಯೋಜನೆಯನ್ನು ಸರ್ಕಾರವೇ ವಶಕ್ಕೆ ಪಡೆಯಲು ವಿಶೇಷ ಕಾನೂನು ಜಾರಿ ಮಾಡಬೇಕು.
5. ರೈತರಿಗೆ ಪರಿಹಾರ ಮತ್ತು ಭೂಮಿ ವಾಪಸ್.
6. ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ.
7. ಕೆರೆ-ಕಟ್ಟೆಗಳ ಭೂಮಿಯನ್ನು ಮರಳಿ ಸಾರ್ವಜನಿಕ ಸ್ವಾಮ್ಯಕ್ಕೆ ಪಡೆಯಬೇಕು.






Comments
Leave a Comment