ಇಡೀ ದಿನ ಕಾರ್ಖಾನೆಯಲ್ಲೇ ಸಂಚರಿಸಿದ ಸಚಿವರು; ಆಡಳಿತ ವರ್ಗ, ಕಾರ್ಮಿಕರು, ಇನ್ನಿತರ ಪ್ರಮುಖರೊಂದಿಗೆ ವಿಸ್ತೃತ ಸಮಾಲೋಚನೆ
ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಹೆಚ್ಎಂಟಿ ಉನ್ನತಿಗೆ ಕ್ರಮ ಎಂದ ಹೆಚ್ʼಡಿಕೆ
ಇಡೀ ದಿನ ಕಾರ್ಖಾನೆಯಲ್ಲೇ ಸಂಚರಿಸಿದ ಸಚಿವರು; ಆಡಳಿತ ವರ್ಗ, ಕಾರ್ಮಿಕರು, ಇನ್ನಿತರ ಪ್ರಮುಖರೊಂದಿಗೆ ವಿಸ್ತೃತ ಸಮಾಲೋಚನೆ
ಕಾಲಮಸ್ಸೇರಿ, (ಕೇರಳಂ) | 22 ಮೇ 2026
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಕೇರಳಂನ ಕಾಲಮಸ್ಸೇರಿಯ ಹೆಚ್ಎಂಟಿ ಮಷಿನ್ & ಟೂಲ್ಸ್ ಲಿಮಿಟೆಡ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ವಿಸ್ತೃತ ನಡೆಸಿದರು.
ಕುಮಾರಸ್ವಾಮಿ ಅವರು ಕೇಂದ್ರದ ಬೃಹತ್ ಕೈಗಾರಿಕೆ ಮಂತ್ರಿಗಳಾದ ಮೇಲೆ ಕಾಲಮಸ್ಸೇರಿ ಘಟಕಕ್ಕೆ ಎರಡನೇ ಸಲ ಭೇಟಿ ನೀಡಿದ್ದು, ಒಟ್ಟಾರೆ ಹೆಚ್ಎಂಟಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಕಾರ್ಯವ್ಯೂಹದ ಭಾಗ ಇದಾಗಿದೆ.
ಬೆಳಗ್ಗೆಯೇ ನವದೆಹಲಿಯಿಂದ ಕೊಚ್ಚಿ ತಲುಪಿ ಅಲ್ಲಿಂದ ಕಾಲಮಸ್ಸೇರಿ ಘಟಕಕ್ಕೆ ಆಗಮಿಸಿದ ಸಚಿವರ ಜತೆ ಹೆಚ್ಎಂಟಿ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕರು ಸೇರಿ ಸಂಸ್ಥೆ ಮತ್ತು ಬೃಹತ್ ಕೈಗಾರಿಕೆ ಸಚಿವಾಲಯದ ಉನ್ನತ ಅಧಿಕಾರಿಗಳು ಇದ್ದರು.
ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯಗಳನ್ನು ವ್ಯಾಪಕವಾಗಿ ಪರಿಶೀಲಿಸಿದ ಸಚಿವರು; ದಕ್ಷಿಣ ಆಫ್ರಿಕಾಕ್ಕೆ ರಫ್ತು ರವಾನೆಗೆ ಸಿದ್ಧವಾಗಿದ್ದ ಎನ್ಹೆಚ್ ಸರಣಿಯ ಯಂತ್ರೋಪಕರಣಗಳಿಗೆ ಹಸಿರು ನಿಶಾನೆ ತೋರಿಸಿದರು. ಜತೆಗೆ, ಈ ಭೇಟಿ ಸಂದರ್ಭದಲ್ಲಿ ಹೆಚ್ಎಂಟಿ, ಎಫ್ಸಿಆರ್ʼಐ ಮತ್ತು ಇನ್ಸ್ಟ್ರುಮೆಂಟೇಶನ್ ಲಿಮಿಟೆಡ್ (ಐಎಲ್) ನ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸಿದರು ಹಾಗೂ ಕಾರ್ಮಿಕ ಸಂಘಗಳ ಪ್ರತಿನಿಧಿಗಳು ಮತ್ತು ಉದ್ಯೋಗಿಗಳೊಂದಿಗೆ ಮಹತ್ವದ ಸಂವಾದ ನಡೆಸಿದರು.
ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲು ಹೆಚ್ಎಂಟಿಯ ಕಾಲಮಸ್ಸೇರಿ ಘಟಕದಲ್ಲಿ ತಯಾರಿಸಿದ ಎನ್.ಎಚ್. ಸರಣಿಯ ಯಂತ್ರವನ್ನು ಸಚಿವರು ವೀಕ್ಷಿಸಿದರು. ಇದು ಭಾರತದ ಸ್ಥಳೀಯ ಎಂಜಿನಿಯರಿಂಗ್ ಮತ್ತು ಉತ್ಪಾದನಾ ಸಾಮರ್ಥ್ಯಗಳಲ್ಲಿ ಬೆಳೆಯುತ್ತಿರುವ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ನಿಖರ ಎಂಜಿನಿಯರಿಂಗ್ ಯಂತ್ರೋಪಕರಣಗಳು ಮತ್ತು ಕೈಗಾರಿಕಾ ವ್ಯವಸ್ಥೆಗಳಿಗೆ ಹೆಚ್ಎಂಟಿ ಅಂತಾರಾಷ್ಟ್ರೀಯ ರಫ್ತು ಆದೇಶಗಳನ್ನು ಸ್ಥಿರವಾಗಿ ಪಡೆಯುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು; ಹೆಚ್ಎಂಟಿಯಲ್ಲಿ ತಯಾರಿಸಿದ ಸ್ಥಳೀಯ ಯಂತ್ರೋಪಕರಣಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುವುದು ಭಾರತದ ಉತ್ಪಾದನಾ ವಲಯಕ್ಕೆ ಹೆಮ್ಮೆಯ ಕ್ಷಣವಾಗಿದೆ. ಇದು ಭಾರತೀಯ ಎಂಜಿನಿಯರಿಂಗ್ʼನ ಶ್ರೇಷ್ಠತೆ ಮತ್ತು ತಾಂತ್ರಿಕ ಸಾಮರ್ಥ್ಯದ ಬೆಳೆಯುತ್ತಿರುವ ಜಾಗತಿಕ ಮನ್ನಣೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ಸ್ಥಾವರ ಭೇಟಿ ಸಮಯದಲ್ಲಿ ಸಚಿವರು ಮಷಿನ್ ಮತ್ತು ಟೂಲ್ ವಿಭಾಗ, ಫೌಂಡ್ರಿ ವಿಭಾಗ ಮತ್ತು ಸೌಲಭ್ಯಗಳ ವ್ಯೂಹಾತ್ಮಕ ಉತ್ಪಾದನಾ ವಿಭಾಗಗಳಲ್ಲಿನ ಕಾರ್ಯಾಚರಣೆ ಹಾಗೂ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಭಾರತೀಯ ನೌಕಾ ಪಡೆಗಳಿಗೆ ಬಳಸುವ ಸಿಎನ್ಸಿ ವ್ಯವಸ್ಥೆಗಳು, ಕೆಲ ನಿಖರ ಯಂತ್ರೋಪಕರಣಗಳು, ವಿಶೇಷ ಎಂಜಿನಿಯರಿಂಗ್ ಉಪಕರಣಗಳು ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸೋನಾರ್ ಡೈರೆಕ್ಟಿಂಗ್ ಗೇರ್ ವ್ಯವಸ್ಥೆಗಳ ಉತ್ಪಾದನೆ, ಜೋಡಣೆ ಮತ್ತು ಪರೀಕ್ಷಾ ಪ್ರಕ್ರಿಯೆಗಳನ್ನು ವೀಕ್ಷಿಸಿದರು.
ರಕ್ಷಣೆ, ರೇಲ್ವೆ, ಏರೋಸ್ಪೇಸ್, ಹೆವಿ ಎಂಜಿನಿಯರಿಂಗ್ ಮತ್ತು ಸುಧಾರಿತ ಉತ್ಪಾದನೆ ಸೇರಿದಂತೆ ಕಾರ್ಯತಂತ್ರದ ಕ್ಷೇತ್ರಗಳಿಗೆ ಹೆಚ್ಎಂಟಿಯ ಕೊಡುಗೆ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು. ನೌಕಾ ಮತ್ತು ರಕ್ಷಣಾ ಅಗತ್ಯಗಳಿಗಾಗಿ ಅಭಿವೃದ್ಧಿಪಡಿಸಿದ ಸ್ಥಳೀಯ ವ್ಯವಸ್ಥೆಗಳನ್ನು ಕೂಡ ಸಚಿವರು ಪರಿಶೀಲಿಸಿದರು. "ಹೆಚ್ಎಂಟಿಯಂತಹ ಸಂಸ್ಥೆಗಳು ಭಾರತದ ಸಾರ್ವಜನಿಕ ವಲಯದ ಎಂಜಿನಿಯರಿಂಗ್ ಪರಿಸರ ವ್ಯವಸ್ಥೆಯ ಬಲವನ್ನು ಪ್ರಬಲವಾಗಿ ಪ್ರತಿನಿಧಿಸುತ್ತವೆ. ಇಲ್ಲಿನ ಕಾರ್ಯಪಡೆಯ ತಾಂತ್ರಿಕ ಪರಿಣತಿ, ಉತ್ಪಾದನಾ ಸಾಮರ್ಥ್ಯ ಮತ್ತು ಬದ್ಧತೆಯು ಕಾರ್ಯತಂತ್ರದ ಸ್ವಾವಲಂಬನೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತಲೇ ಇದೆ" ಎಂದು ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಕೇಂದ್ರ ಸಚಿವರು ಹೆಚ್ಎಂಟಿ ಮೆಷಿನ್ ಮತ್ತು ಟೂಲ್ಸ್ ಲಿಮಿಟೆಡ್, ಫ್ಲೂಯಿಡ್ ಕಂಟ್ರೋಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎಫ್ಸಿಆರ್ಐ) ಮತ್ತು ಇನ್ಸ್ಟ್ರುಮೆಂಟೇಶನ್ ಲಿಮಿಟೆಡ್ (ಐಎಲ್) ನಾಯಕತ್ವ ತಂಡಗಳೊಂದಿಗೆ ಸಮಗ್ರ ಪರಿಶೀಲನಾ ಸಭೆಗಳನ್ನು ನಡೆಸಿದರು. ಕಾರ್ಯಾಚರಣೆಯ ಕಾರ್ಯಕ್ಷಮತೆ, ತಂತ್ರಜ್ಞಾನ ನವೀಕರಣ, ಉತ್ಪಾದನಾ ಸಾಮರ್ಥ್ಯ, ಆಧುನೀಕರಣ, ನಾವೀನ್ಯತೆ ಚಾಲಿತ ಬೆಳವಣಿಗೆ ಮತ್ತು ಕಾರ್ಯತಂತ್ರದ ವಲಯಗಳಲ್ಲಿ ಭಾಗವಹಿಸುವಿಕೆ ಹೆಚ್ಚಿಸುವ ಬಗ್ಗೆ ಚರ್ಚೆಗಳು ನಡೆದವು.
ಸ್ಥಳೀಯ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವುದು, ಕಾರ್ಯಾಚರಣೆಯ ದಕ್ಷತೆ ಸುಧಾರಿಸುವುದು ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಭವಿಷ್ಯದ ಅವಕಾಶಗಳನ್ನು ಸಭೆಯಲ್ಲಿ ವಿಸ್ತೃತವಾಗಿ ಪರಿಶೀಲನೆ ನಡೆಸಿದರು ಸಚಿವರು.
ಈ ಸಂದರ್ಭದಲ್ಲಿ ಸಚಿವ ಕುಮಾರಸ್ವಾಮಿ ಅವರು ಹೆಚ್ಎಂಟಿಯ ವಿವಿಧ ಕಾರ್ಮಿಕ ಸಂಘಗಳು ಮತ್ತು ನೌಕರರ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ನೌಕರರ ಕಲ್ಯಾಣ, ಆಧುನೀಕರಣ ಮತ್ತು ಸಂಸ್ಥೆಯ ಭವಿಷ್ಯದ ಬೆಳವಣಿಗೆಗೆ ಸಂಬಂಧಿಸಿದ ಅವರ ಕಾಳಜಿ, ಸಲಹೆಗಳು ಮತ್ತು ವಿನಂತಿಗಳನ್ನು ಅವರು ತಾಳ್ಮೆಯಿಂದ ಆಲಿಸಿದರು.
"ಕಾರ್ಮಿಕರು ಮತ್ತು ಉದ್ಯೋಗಿಗಳ ಕಲ್ಯಾಣವು ಸಾರ್ವಜನಿಕ ವಲಯದ ಉದ್ಯಮಗಳ ಬೆಳವಣಿಗೆ ಮತ್ತು ಯಶಸ್ಸಿಗೆ ಕೇಂದ್ರವಾಗಿದೆ. ಭಾರತದ ಕೈಗಾರಿಕಾ ಅಭಿವೃದ್ಧಿಗೆ ಅವರ ಕೊಡುಗೆ ಅಮೂಲ್ಯವಾದುದು ಎಂದು ಒತ್ತಿ ಹೇಳಿದ ಅವರು; ಪಿಎಸ್ಯುಗಳನ್ನು ಬಲಪಡಿಸುವ ಕಡೆಗೆ ಕೇಂದ್ರದ ಬದ್ಧತೆಯನ್ನು ಒತ್ತಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ, ದೇಶಾದ್ಯಂತ ಪಿಎಸ್ಯುಗಳನ್ನು ಬಲಪಡಿಸಲು, ಮೂಲಸೌಕರ್ಯವನ್ನು ಆಧುನೀಕರಿಸಲು, ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಮತ್ತು ಬೆಳವಣಿಗೆ, ನಾವೀನ್ಯತೆ ಮತ್ತು ಉದ್ಯೋಗಕ್ಕಾಗಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.ಕಾರ್ಯ
ತಂತ್ರದ ಉತ್ಪಾದನೆಯನ್ನು ಬಲಪಡಿಸುವುದು, ಸ್ಥಳೀಯ ತಾಂತ್ರಿಕ ಸಾಮರ್ಥ್ಯಗಳನ್ನು ಉತ್ತೇಜಿಸುವುದು ಮತ್ತು ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಕಾರ್ಖಾನೆಯನ್ನು ಮುನ್ನಡೆಸುವ ದಿಕ್ಕಿನಲ್ಲಿ ನಾವು ಸಮಗ್ರ ಕಾರ್ಯಸೂಚಿಯೊಂದಿಗೆ ಕೇಂದ್ರವು ಕೆಲಸ ಮಾಡುತ್ತಿದೆ ಎಂದು ಸಚಿವರು ಪ್ರತಿಪಾದಿಸಿದರು.







Comments
Leave a Comment