ಮತದಾರರ ಹಕ್ಕು ರಕ್ಷಣೆಗಾಗಿ ‘ನಾಗರಿಕ ಮತ ಕಾವಲು ಸಮಿತಿ’ ರಚನೆ – ಬಾರ್ಮ್/ಸಿತಾರಾಮ್-ಎಎಡಿ ಘೋಷಣೆ
ಮತದಾರರ ಹಕ್ಕು ರಕ್ಷಣೆಗಾಗಿ ‘ನಾಗರಿಕ ಮತ ಕಾವಲು ಸಮಿತಿ’ ರಚನೆ – ಬಾರ್ಮ್/ಸಿತಾರಾಮ್-ಎಎಡಿ ಘೋಷಣೆ
ಬೆಂಗಳೂರು, ಜು. 6 -ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಅವೈಜ್ಞಾನಿಕ, ಅಸಂವಿಧಾನಿಕ ಮತ್ತು ದುರುದ್ದೇಶಪೂರಿತವಾಗಿದೆ ಎಂದು ನಾಗರಿಕ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳು ಆರೋಪಿಸಿ, ಮತದಾರರ ಹಕ್ಕುಗಳನ್ನು ರಕ್ಷಿಸಲು “ನಾಗರಿಕ ಮತ ಕಾವಲು ಸಮಿತಿ”ಯನ್ನು ರಚಿಸಿರುವುದಾಗಿ ಬಾರ್ಮ್/ಸಿತಾರಾಮ್-ಎಎಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಅವರು ಹೇಳಿದರು, “SIR ಪ್ರಕ್ರಿಯೆಯಿಂದ ಲಕ್ಷಾಂತರ ಅರ್ಹ ಮತದಾರರು, ವಿಶೇಷವಾಗಿ ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ಅಲೆಮಾರಿ ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಬಡವರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ. ಬಂಗಾಳದಲ್ಲಿ ಜಾರಿಗೆ ತಂದ ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ ಸಾಫ್ಟ್ವೇರ್ ಅನ್ನು ಕರ್ನಾಟಕದಲ್ಲೂ ಬಳಸಲು ತೀರ್ಮಾನಿಸಿರುವುದರಿಂದ ಒಂದು ಕೋಟಿಗಿಂತ ಹೆಚ್ಚು ಜನರಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ. ಇದರಿಂದ ಜನರು ದಾಖಲೆಗಳನ್ನು ಜೋಡಿಸಲು ಪರದಾಡಬೇಕಾದ ಅರಾಜಕ ಪರಿಸ್ಥಿತಿ ನಿರ್ಮಾಣವಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಮತ ಕಾವಲು ಸಮಿತಿಯು ಐದು ಪ್ರಮುಖ ಗುರಿಗಳನ್ನು ಹೊಂದಿದೆ. ಜನರಿಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರತಿದಿನ ಗ್ರೌಂಡ್ ರಿಪೋರ್ಟ್ ಸಂಗ್ರಹಿಸಿ ಅಧಿಕಾರಿಗಳ ಗಮನಕ್ಕೆ ತರುವುದು, ಜನರ ಗೊಂದಲಗಳಿಗೆ ಪರಿಹಾರ ಸೂಚಿಸಿ ನೋಂದಾವಣಿ ಪ್ರಕ್ರಿಯೆಗೆ ನೆರವಾಗುವುದು, ಸರ್ಕಾರ ಪ್ರಾರಂಭಿಸುವ ಹೆಲ್ಪ್ಡೆಸ್ಕ್ ಹಾಗೂ ಶಾಶ್ವತ ವಾಸ ಧೃಡೀಕರಣ ಪತ್ರ ವಿತರಣೆ ಪ್ರಕ್ರಿಯೆಯನ್ನು ನಿಗಾ ವಹಿಸುವುದು, ಪ್ರತಿ ಬೂತ್ನಲ್ಲಿರುವ ಅರ್ಹ ಮತದಾರರ ಪಟ್ಟಿಯನ್ನು ತಯಾರಿಸಿ ನೋಟಿಸ್ ಪಡೆದವರನ್ನು ಗುರುತಿಸಿ ನೆರವಾಗುವುದು ಮತ್ತು ಅರ್ಹ ಮತದಾರರ ರಕ್ಷಣೆಗಾಗಿ ವಿಶೇಷ ಗ್ರಾಮ/ವಾರ್ಡ್ ಸಭೆಗಳನ್ನು ಕರೆಯುವಂತೆ ಸರ್ಕಾರಕ್ಕೆ ಒತ್ತಡ ಹಾಕುವುದು.
ಈ ಗುರಿಗಳನ್ನು ಸಾಧಿಸಲು ಜುಲೈ 8ರಿಂದ 15ರವರೆಗೆ ರಾಜ್ಯ ಮಟ್ಟದಿಂದ ಬೂತ್ ಮಟ್ಟದ ತನಕ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. “ಪ್ರಜಾತಂತ್ರದ ಬುನಾದಿಯನ್ನು ಭದ್ರಗೊಳಿಸಲು ಈ ಅಭಿಯಾನದಲ್ಲಿ ಎಲ್ಲಾ ಜವಾಬ್ದಾರಿಯುತ ನಾಗರಿಕರು, ವಿಶೇಷವಾಗಿ ಯುವಕರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸ್ವಯಂಸೇವಕರಾಗಿ ಭಾಗವಹಿಸಲು ಬಯಸುವವರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದು ಅಥವಾ 96060 87560ಗೆ ಮಿಸ್ ಕಾಲ್ ನೀಡಬಹುದು” ಎಂದು ಬಾರ್ಮ್/ಸಿತಾರಾಮ್-ಎಎಡಿ ಮನವಿ ಮಾಡಿದರು.

Comments
Leave a Comment