ಕೆಐಎಡಿಬಿ ಮೂಲಕ ಮೊದಲ ಹಂತ ಅಭಿವೃದ್ಧಿಗೆ ತೀರ್ಮಾನ: ಎಂ ಬಿ ಪಾಟೀಲ
ಕಲಬುರಗಿಯಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಯೋಜನೆ
ಕೆಐಎಡಿಬಿ ಮೂಲಕ ಮೊದಲ ಹಂತ ಅಭಿವೃದ್ಧಿಗೆ ತೀರ್ಮಾನ: ಎಂ ಬಿ ಪಾಟೀಲ
ಬೆಂಗಳೂರು: ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪಿಎಂ ಮಿತ್ರ ಜವಳಿ ಪಾರ್ಕ್ ಯೋಜನೆಯ ಮೊದಲ ಹಂತವನ್ನು ಕೆಐಎಡಿಬಿ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಈ ಸಂಬಂಧವಾಗಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೊಂದಿಗೆ ಶುಕ್ರವಾರ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಉದ್ದೇಶಿತ ಯೋಜನೆಯ ಬಾಹ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನೂ ಒಳಗೊಂಡಿರುವ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ತಕ್ಷಣವೇ ಸಿದ್ಧಪಡಿಸಲಾಗುವುದು. ಬಳಿಕ ಇದನ್ನು ಕೇಂದ್ರ ಸರಕಾರದ ಯೋಜನಾ ಅನುಮೋದನಾ ಸಮಿತಿಗೆ ಸೂಚಿಸಲಾಗುವುದು. ಈ ಸಂಬಂಧ ಕೈಮಗ್ಗ ಮತ್ತು ಜವಳಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.
ಭೂಮಿ ಹಂಚಿಕೆ ಮತ್ತು ಪಾರ್ಕ್ ಒಳಭಾಗದ ಕಾಮಗಾರಿಗಳನ್ನು ಕೆಐಎಡಿಬಿ ಮೂಲಕ ತಕ್ಷಣವೇ ಆರಂಭಿಸುವ ಬಗ್ಗೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಬೆಂಬಲ ಯೋಜನೆಯಡಿ ಜವಳಿ ಪಾರ್ಕ್ ಗೆ 500 ಕೋಟಿ ರೂಪಾಯಿ ಸಬ್ಸಿಡಿ ಸಿಗಲಿದೆ. ಇದನ್ನು ಪಾರ್ಕ್ ಒಳಭಾಗದಲ್ಲಿ ರಸ್ತೆ, ನೀರು, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಮತ್ತು ವಸತಿ ನಿಲಯಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಜವಳಿ ಪಾರ್ಕ್ ಇಂಬು ನೀಡಲಿದೆ. ಆದ್ದರಿಂದ ರಾಜ್ಯ ಅನುಷ್ಠಾನ ಸಂಸ್ಥೆಯು ಇಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಕನಿಷ್ಠಪಕ್ಷ 25 ಕೋಟಿ ರೂಪಾಯಿ ವಿನಿಯೋಗಿಸಬೇಕು. ಈ ಪ್ರಕ್ರಿಯೆಗೆ ಚಾಲನೆ ನೀಡಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪಾಟೀಲ ವಿವರಿಸಿದ್ದಾರೆ.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಜವಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕೆಎಸ್ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್, ಜವಳಿ ಆಯುಕ್ತ ಕೆ ಬಿ ಬಸವರಾಜು, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಭಾಗವಹಿಸಿದ್ದರು.






Comments
Leave a Comment