ರಾಜ್ಯ ಛಲವಾದಿ ಸಂಗಮ: ದಲಿತರ ಹಕ್ಕುಗಳಿಗಾಗಿ ಬಲಿಷ್ಠ ಹೋರಾಟದ ಘೋಷಣೆ
ರಾಜ್ಯ ಛಲವಾದಿ ಸಂಗಮ: ದಲಿತರ ಹಕ್ಕುಗಳಿಗಾಗಿ ಬಲಿಷ್ಠ ಹೋರಾಟದ ಘೋಷಣೆ
ಬೆಂಗಳೂರು,ಸೆ. 11-ದಲಿತರ ಯೋಜನೆಗಳಿಗೆ ಮೀಸಲಾದ ಸುಮಾರು 54,000 ಕೋಟಿ ರೂಪಾಯಿ SCSP ಮತ್ತು TSP ನಿಧಿಗಳನ್ನು ಸರ್ಕಾರ ತನ್ನ ಐದು ಗ್ಯಾರೆಂಟಿ ಯೋಜನೆಗಳಿಗೆ ದುರುಪಯೋಗಪಡಿಸಿಕೊಂಡಿದೆ ಎಂದ ರಾಜ್ಯ ಛಲವಾದಿ ಸಂಗಮ ಆರೋಪಿಸಿದೆ.
ವಿದ್ಯಾರ್ಥಿ ವೇತನ ವಿತರಣೆಯಲ್ಲಿ ವಿಳಂಬ, ನಿಲಯಗಳ ಆಧುನೀಕರಣದ ಕೊರತೆ, ಗುಣಾತ್ಮಕ ಶಿಕ್ಷಣದಿಂದ ವಂಚನೆ, ಹಾಗೂ ವಿಶೇಷ ಘಟಕ ಯೋಜನೆಗಳಿಗೆ ಅನುದಾನ ನೀಡದಿರುವುದು ದಲಿತರ ಸಬಲೀಕರಣವನ್ನು ಕತ್ತಲೆಗೆ ದೂಡಿದೆ ಎಂದು ಸಂಘಟನೆಯು ತಿಳಿಸಿದೆ.
ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಪರಿಷ್ಕೃತ ಮೀಸಲಾತಿ ವ್ಯವಸ್ಥೆಯನ್ನು ನ್ಯಾಯಾಲಯದಲ್ಲಿ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಸಂಘಟನೆಯು ಆರೋಪಿಸಿದೆ. ಸಂವಿಧಾನವನ್ನು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಸರ್ಕಾರ ದಲಿತರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದೆ. ಒಳ ಮೀಸಲಾತಿ ನೆಪದಲ್ಲಿ ಬಲಗೈ ಸಮುದಾಯಗಳ ಉಪಜಾತಿಗಳನ್ನು ಇತರ ವರ್ಗಗಳಲ್ಲಿ ಸೇರಿಸಿ ಮೀಸಲಾತಿ ಪ್ರಮಾಣ ಕಡಿತಗೊಳಿಸಿರುವುದು ದೊಡ್ಡ ದ್ರೋಹವೆಂದು ಸಂಘಟನೆಯು ಖಂಡಿಸಿದೆ. ರಾಜ್ಯದಲ್ಲಿ ದಲಿತ ಮಹಿಳೆಯರ ಮೇಲಿನ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಉಲ್ಲೇಖಿಸಿ, ರಾಯಚೂರು ಜಿಲ್ಲೆಯ ಅಶ್ವಿನಿ ಹಾಗೂ ರಾಣಿಮಾ ಪ್ರಕರಣಗಳನ್ನು ಉದಾಹರಣೆ ನೀಡಿದೆ.
ಸಂಘಟನೆಯು ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಯುವಜನತೆಗೆ ತಲುಪಿಸುವುದರ ಜೊತೆಗೆ, ಯಾವುದೇ ಸರ್ಕಾರ ಸಮುದಾಯದ ವಿರುದ್ಧ ನಿಲುವು ತೆಗೆದುಕೊಂಡರೆ ಅದನ್ನು ಖಂಡಿಸುವುದಾಗಿ ಘೋಷಿಸಿದೆ. ಪ್ರತೀ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಸಮಿತಿಗಳನ್ನು ರಚಿಸಿ, ರಾಜ್ಯ ಸಮಿತಿಯ ಮೂಲಕ ಬಲಿಷ್ಠ ಸಂಘಟನೆಯನ್ನು ರೂಪಿಸುವ ಯೋಜನೆ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಅರಿವು, ಹೋರಾಟ, ಚರ್ಚೆ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೀಸಲಾತಿ ಸಮರ್ಥನೆ, ಸಂವಿಧಾನ ರಕ್ಷಣೆ ಮುಂತಾದ ಚಟುವಟಿಕೆಗಳ ಮೂಲಕ ಬಲಗೈ ಸಮುದಾಯದ ಏಳಿಗೆಗೆ ಶ್ರಮಿಸುವುದಾಗಿ ಸಂಘಟನೆಯು ವಿವರಿಸಿದೆ,






Comments
Leave a Comment