ಗೃಹಲಕ್ಷ್ಮಿ 5 ಸಾವಿರ ಕೋಟಿ ಎಲ್ಲಿ? - ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ
***
ಬೆಂಗಳೂರು, ಸೆ. 5:
ರಾಜ್ಯ ಕಾಂಗ್ರೆಸ್ ಸರ್ಕಾರದ ಜನಸಂಪರ್ಕ ಕಾರ್ಯಕ್ರಮವನ್ನು ಕೇವಲ ಪ್ರಚಾರದ ಗಿಮಿಕ್ ಎಂದು ಜರೆದಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಿಎಂ ಡಿ.ಕೆ ಶಿವಕುಮಾರ್ ಅವರಿಗೆ 5 ಜ್ವಲಂತ ಪ್ರಶ್ನೆಗಳನ್ನು ಮುಂದಿಟ್ಟು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ನಿಖಿಲ್, "ರಿಯಲ್ ಎಸ್ಟೇಟ್ ಆಡಳಿತದ ಗುಂಗಿನಿಂದ ಹೊರಬಂದು, ಕೊನೆಗೂ ಪ್ರಜಾಸೇವೆ ನೆನಪಿಸಿಕೊಂಡ ಡಿಸಿಎಂಗೆ ಧನ್ಯವಾದಗಳು. ಆದರೆ ಕಳೆದ 3 ವರ್ಷಗಳಿಂದ ಜನಸಾಮಾನ್ಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಈಗ ಮಾಡುತ್ತಿರುವುದು ಬ್ರ್ಯಾಂಡ್ ಬೆಂಗಳೂರು ಮಾದರಿಯ ಮತ್ತೊಂದು ಪ್ರಚಾರದ ಗಿಮಿಕ್ ಎಂದು ಕಿಡಿಕಾರಿದ್ದಾರೆ.
ನಿಖಿಲ್ ಮುಂದಿಟ್ಟಿರುವ 5 ಪ್ರಮುಖ ವೈಫಲ್ಯಗಳು:
ಗೃಹಲಕ್ಷ್ಮಿ - 5,000 ಕೋಟಿ ನಾಪತ್ತೆ:
ಮಾನ್ಯ ಹೈಕೋರ್ಟ್ ಗಮನ ಸೆಳೆದು ಛೀಮಾರಿ ಹಾಕಿದ್ದರೂ, 1.2 ಕೋಟಿ ಫಲಾನುಭವಿ ಮಹಿಳೆಯರಿಗೆ ತಲುಪಬೇಕಾದ ಸುಮಾರು 5,000 ಕೋಟಿ ರೂ. ಹಣ ಇನ್ನೂ ಬಿಡುಗಡೆಯಾಗಿಲ್ಲ. ಚುನಾವಣೆಗಾಗಿ ಘೋಷಣೆ ಮಾಡಿ ಈಗ ಮಹಿಳೆಯರನ್ನು ವಂಚಿಸುತ್ತಿರುವುದೇಕೆ?
ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ದಿವಾಳಿ:
ಉಚಿತ ಬಸ್ ಭಾಗ್ಯದ ಹೆಸರಲ್ಲಿ ಸಾರಿಗೆ ನಿಗಮಗಳಿಗೆ ನೀಡಬೇಕಾದ 5,650 ಕೋಟಿ ರೂ. ಬಾಕಿ ಹಣವನ್ನು ಸರ್ಕಾರ ನೀಡುತ್ತಿಲ್ಲ. ಇದರಿಂದ KSRTC, BMTC ಸೇರಿದಂತೆ ನಾಲ್ಕು ನಿಗಮಗಳು ಸಂಬಳ ಕೊಡಲೂ ಪರದಾಡುವ ಪರಿಸ್ಥಿತಿ ಬಂದಿದೆ.
ಪಿಂಚಣಿದಾರರಿಗೆ 8 ತಿಂಗಳಿನಿಂದ ಬರಗಾಲ:
ಇದು ಸಾಮಾಜಿಕ ನ್ಯಾಯದ ಸರ್ಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ವಿಧವೆಯರು, ವೃದ್ಧರು ಹಾಗೂ ದಿವ್ಯಾಂಗರಿಗೆ ನೀಡುವ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಕಳೆದ 8 ತಿಂಗಳಿನಿಂದ ತಡೆಹಿಡಿದಿದೆ. ಬಡವರ ಹೊಟ್ಟೆ ಮೇಲೆ ಹೊಡೆಯುವುದೇ ನಿಮ್ಮ ನ್ಯಾಯವೇ?
ಬಿಡದಿ ರೈತರ 600 ದಿನಗಳ ಹೋರಾಟ:
ಬರಪೀಡಿತ ರೈತರಿಗೆ ಬೆಳೆ ಪರಿಹಾರವಿಲ್ಲ. ಮತ್ತೊಂದೆಡೆ ಬಿಡದಿಯಲ್ಲಿ ಎರಡನೇ ಬೆಂಗಳೂರು ನಿರ್ಮಾಣದ ಹೆಸರಲ್ಲಿ ರೈತರ ಭೂಮಿ ಕಬಳಿಸಲು ಹೊರಟಿದ್ದು, ಅಲ್ಲಿನ ರೈತರು 600ಕ್ಕೂ ಹೆಚ್ಚು ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದಾರೆ. ಸರ್ಕಾರಕ್ಕೆ ರೈತರ ಕಣ್ಣೀರು ಕಾಣುತ್ತಿಲ್ಲವೇ?
ಬೆಂಗಳೂರು ಗುಂಡಿಗಳ ನಗರಿ:
ಬೆಂಗಳೂರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂದಿದ್ದವರು, ಇರುವ ರಸ್ತೆ ಗುಂಡಿಗಳನ್ನೇ ಮುಚ್ಚಲು ವಿಫಲರಾಗಿದ್ದಾರೆ. ಪ್ರತಿ ದಿನ ಗುಂಡಿಗಳಿಂದ ಸಾವು-ನೋವು ಸಂಭವಿಸುತ್ತಿದೆ. ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನವನ್ನೂ (MLA Local Area Fund) ಸಂಪೂರ್ಣವಾಗಿ ತಡೆಹಿಡಿದು ಅಭಿವೃದ್ಧಿಯನ್ನು ಶೂನ್ಯಕ್ಕೆ ತಳ್ಳಲಾಗಿದೆ.
ಕೊನೆಯದಾಗಿ, ಇದಕ್ಕೆಲ್ಲಾ ಮೂಲ ಕಾರಣ ದೆಹಲಿಯಿಂದ ಆಡಳಿತ ನಡೆಸುತ್ತಿರುವ 'ಸೂಪರ್ ಸಿಎಂ' ರಣದೀಪ್ ಸುರ್ಜೇವಾಲ. ಅವರು ಕೂಡಲೇ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ, ಪ್ರಚಾರಕ್ಕಷ್ಟೇ ಸೀಮಿತವಾದ ಆಡಳಿತವನ್ನು ಬಿಟ್ಟು ಜನಪರ ಆಡಳಿತ ನೀಡುವಂತೆ ಮಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.






Comments
Leave a Comment