ಎಸ್ಐಆರ್: ಸಾಮೂಹಿಕ ಫಾರ್ಮ್ ಭರ್ತಿ ವಿರುದ್ಧ ಡಾ.ರಾಧಾಮೋಹನ್ ದಾಸ್ ಅಗ್ರವಾಲ್ ಆಕ್ಷೇಪ
ಎಸ್ಐಆರ್: ಸಾಮೂಹಿಕ ಫಾರ್ಮ್ ಭರ್ತಿ ವಿರುದ್ಧ
ಡಾ.ರಾಧಾಮೋಹನ್ ದಾಸ್ ಅಗ್ರವಾಲ್ ಆಕ್ಷೇಪ
ಬೆಂಗಳೂರು: ಧಾರ್ಮಿಕ ಸ್ಥಳ, ಕಾಂಗ್ರೆಸ್ ನಾಯಕರು ಸೂಚಿಸಿದ ಸ್ಥಳಗಳಲ್ಲಿ ಸಾಮೂಹಿಕವಾಗಿ ಎಸ್ಐಆರ್ ಎನ್ಯುಮರೇಷನ್ ಫಾರ್ಮ್ ತುಂಬಿಸುತ್ತಿದ್ದು ಇದು ಸರಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗ್ರವಾಲ್ ಅವರು ಆಕ್ಷೇಪಿಸಿದ್ದಾರೆ.
ನಗರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪರವಾಗಿ ಎಸ್.ಐಆರ್ ಬಳಸಿಕೊಳ್ಳಲು ಪ್ರಯತ್ನ ನಡೆದಿದೆ. ಬಿಎಲ್ಒಗಳು ಮನೆಗೆ ತೆರಳದ ಕುರಿತು ನಾವು ದೂರು ನೀಡಿದ್ದೇವೆ. ಕಡ್ಡಾಯವಾಗಿ ಮನೆಮನೆಗೆ ತೆರಳಿ ಫಾರ್ಮ್ ವಿತರಿಸಲು ಚುನಾವಣಾ ಆಯೋಗ ಸೂಚಿಸಿದೆ ಎಂದು ವಿವರಿಸಿದರು. ನಮ್ಮ ಬಿಎಲ್ಎ 2 ಕಾರ್ಯಕರ್ತರ ಸಭೆ ನಡೆಸಲಾಗಿದೆ; ಪ್ರಶಿಕ್ಷಣ ಕೊಡಲಾಗಿದೆ ಎಂದು ಹೇಳಿದರು.
ರಾಜ್ಯ ಸರಕಾರವು ಬಿಜೆಪಿಯ ಬಿಎಲ್ಎ 2 ಅನ್ನು ಬಳಸಿಕೊಳ್ಳುತ್ತಿಲ್ಲ ಎಂದು ಟೀಕಿಸಿದರು. ಪಕ್ಷದ ಆಂತರಿಕ ವಿಚಾರಗಳನ್ನು ಜನಪ್ರತಿನಿಧಿಗಳ ಜೊತೆ ಚರ್ಚಿಸಿದ್ದಾಗಿ ಪ್ರಶ್ನೆಗೆ ಉತ್ತರ ಕೊಟ್ಟರು. ಪ್ರಿಯಾಂಕ್ ಖರ್ಗೆ ಅವರ ಮಾತನ್ನು ಯಾರೂ ಗಮನಿಸುತ್ತಿಲ್ಲ. ಕುಂಕುಮದ ವಿಚಾರದಲ್ಲೂ ಅವರ ಮಾತು ಸರಿಯಲ್ಲ ಎಂದು ಟೀಕಿಸಿದರು.
ಅಡ್ಡ ಮತದಾನ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು. ಬಿಜೆಪಿ- ಜೆಡಿಎಸ್ ನಡುವೆ ನಿರಂತರ ಸಂಪರ್ಕವಿದ್ದು, ಮಾತುಕತೆ ನಡೆಯುತ್ತದೆ. ಸಮನ್ವಯ ಸಮಿತಿ ರಚಿಸಿದ್ದು ನಮ್ಮ ಪಕ್ಷದ ವತಿಯಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇದರಲ್ಲಿ ಇದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.
ವಿರೋಧಿಗಳು ಪಾಪ ಮಾಡುವುದು ನಮ್ಮ ಹಿತಕ್ಕಾಗಿ...
ನಮ್ಮ ವಿರೋಧಿಗಳು ಮುಸ್ಲಿಂ ತುಷ್ಟೀಕರಣ ಮಾಡುತ್ತಿರುವುದು, ಭ್ರಷ್ಟಾಚಾರದಲ್ಲಿ ತಲ್ಲೀನರಾಗಿ ಇರುವುದು, ನಮ್ಮನ್ನು ದುರ್ಬಲರೆಂದು ಭಾವಿಸುವುದು ಮತ್ತು ಎಲ್ಲ ಪಾಪ ಮಾಡುವುದು ನಮ್ಮ ಹಿತದಲ್ಲೇ ಇರುತ್ತದೆ. ಇದರ ಬಗ್ಗೆ ನಮಗೆ ಹೇಳಲೇನೂ ಇಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಮಮತಾ ಬ್ಯಾನರ್ಜಿಗೆ ಕೊಟ್ಟ ಮಾದರಿಯ ಉತ್ತರ..
2028ರ ರಾಜ್ಯ ವಿಧಾನಸಭಾ ಚುನಾವಣೆಗೆ ಜನರು ಸನ್ನದ್ಧರಾಗಿ ಕುಳಿತಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ಜನರು ಮಮತಾ ಬ್ಯಾನರ್ಜಿಗೆ ಉತ್ತರ ಕೊಟ್ಟ ಮಾದರಿಯಲ್ಲೇ ರಾಹುಲ್ ಗಾಂಧಿ, ಶಿವಕುಮಾರ್, ಸಿದ್ದರಾಮಯ್ಯನವರ ಸರಕಾರಕ್ಕೆ ಮತದಾರರು ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನನ್ನ ಕೆಲಸದ ಸಫಲತೆ, ಅಸಫಲತೆ ಕುರಿತು ನಮ್ಮ ಕಾರ್ಯಕರ್ತರಲ್ಲಿ ಪ್ರಶ್ನಿಸಿ ಎಂದು ಅವರು ತಿಳಿಸಿದರು.




Comments
Leave a Comment