ಬಿಡದಿ ಟೌನ್ಶಿಪ್ ಭೂಸ್ವಾಧೀನ ವಿರೋಧಿಸಿ 26 ಗ್ರಾಮಗಳಲ್ಲಿ ರೈತರೊಂದಿಗೆ ನಾಳೆ ನಿಖಿಲ್ ಕುಮಾರಸ್ವಾಮಿ ಸಂವಾದ
ಬಿಡದಿ ಟೌನ್ಶಿಪ್ ಭೂಸ್ವಾಧೀನ ವಿರೋಧಿಸಿ 26 ಗ್ರಾಮಗಳಲ್ಲಿ ರೈತರೊಂದಿಗೆ ನಿಖಿಲ್ ಕುಮಾರಸ್ವಾಮಿ ಸಂವಾದ
|| ರೈತರ ಕಷ್ಟ-ಸುಖ ಆಲಿಸಿ ವಾಸ್ತವ ಸ್ಥಿತಿ ಏನೆಂದು ತೋರಿಸಲು ನಿಖಿಲ್ ಕುಮಾರಸ್ವಾಮಿ ಹಳ್ಳಿ ಭೇಟಿ ||
|| "ರೈತರೇ ಇಲ್ಲ" ಎಂದ ಡಿಕೆಶಿಗೆ ಸ್ಥಳದಲ್ಲೇ ಉತ್ತರ ಕೊಡೋಕೆ ನಿಖಿಲ್ ಕುಮಾರಸ್ವಾಮಿ ಸಜ್ಜು||
ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಿಡದಿ ಟೌನ್ಶಿಪ್ ರೈತ ವಿರೋಧಿ ಭೂಸ್ವಾಧೀನ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೇ 27ರಂದು ಮಾಗಡಿ ಕ್ಷೇತ್ರದ 26 ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ಇನ್ನು ನಮ್ಮ ಭೂಮಿ-ನಮ್ಮ ಹಕ್ಕು! ಘೋಷಣೆಯೊಂದಿಗೆ ಬಿಡದಿ ಟೌನ್ಶಿಪ್ ಭೂಸ್ವಾಧೀನವನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ವಿರೋಧಿಸಿದ್ದಾರೆ.
ಬಿಡದಿಯಲ್ಲಿ ರೈತರೇ ಇಲ್ಲ ಎಂದು ಹೇಳುವವರ ಕಣ್ಣು ತೆರೆಸಲು ನಾಳೆ (27ರಂದು) ಬೆಳಿಗ್ಗೆ 10 ಗಂಟೆಯಿಂದ ಮಾಗಡಿ ಕ್ಷೇತ್ರದ 26 ಗ್ರಾಮಗಳಲ್ಲಿ ರೈತರೊಂದಿಗೆ ಸಂವಾದ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.
ಇದು ಬಿಡದಿ ಟೌನ್ಶಿಪ್ ಪ್ರಶ್ನೆ ಅಲ್ಲ, ಅದು ರೈತರ ಬದುಕಿನ ಪ್ರಶ್ನೆ. ಟೌನ್ಶಿಪ್ ಮಾಡುತ್ತಿರುವ ಜಾಗದಲ್ಲಿ ರೈತರೇ ಇಲ್ಲ ಎಂದು ಹೇಳುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇದು ನನ್ನ ಸವಾಲು ಎಂದು ನಿಖಿಲ್ ಅವರು ಹೇಳಿದ್ದಾರೆ.
ರೈತರ ಕಷ್ಟ-ಸುಖ ಆಲಿಸಿ ವಾಸ್ತವ ಸ್ಥಿತಿ ಏನೆಂದು ತೋರಿಸಲು ಈ ಗ್ರಾಮ ಭೇಟಿ ಹಮ್ಮಿಕೊಂಡಿದ್ದು, ಇಡೀ ನಾಡಿಗೆ ಅನ್ನ ನೀಡುವ ಈ ಭೂಮಿ ನಮಗೆ ಬರಿ ಮಣ್ಣಲ್ಲ, ಅದು ನಮ್ಮ ಹೆತ್ತ ತಾಯಿ. ಕೋಟ್ಯಂತರ ರೂಪಾಯಿ ತಂದುಕೊಟ್ಟರೂ ಹೆತ್ತ ತಾಯಿಯನ್ನು ಯಾರಾದರೂ ಮಾರಿಕೊಳ್ಳಲು ಸಾಧ್ಯವೇ? ಇದು ಅಭಿವೃದ್ಧಿಯಲ್ಲ, ವಿನಾಶ ಎಂದು ಆಕ್ರೋಶ ವ್ಯಕ್ತಪಡಿಸಿದರು.
9,600 ಎಕರೆ ಫಲವತ್ತಾದ ಭೂಮಿ ಸ್ವಾಧೀನ, 10 ಲಕ್ಷ ಕ್ಕೂ ಹೆಚ್ಚು ಮರ ಕಡಿತ, ತಿಂಗಳಿಗೆ 6 ಲಕ್ಷ ಲೀಟರ್ ಹಾಲು ಉತ್ಪಾದನೆಗೆ ಹೊಡೆತ ತರುವ ಈ ಯೋಜನೆ ಇದು ಅಭಿವೃದ್ಧಿಯಲ್ಲ, ವಿನಾಶ ಎಂದು ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈರಮಂಗಲದಿಂದ ಆರಂಭಗೊಂಡು 5 ಕೇಂದ್ರಗಳಲ್ಲಿ ನಡೆಯುವ ಈ ಸಂವಾದದಲ್ಲಿ ರೈತರ ಅಳಲನ್ನು ನಾಳೆ ಮಾಜಿ ಶಾಸಕ ಎ. ಮಂಜುನಾಥ್ ಅವರೊಂದಿಗೆ ಬೈರಮಂಗಲ, ಕಂಚಗಾರನಹಳ್ಳಿ, ಅಳಾಳುಸಂದ್ರ, ಹೊಸೂರು, ಬನ್ನಿಗಿರಿ ಸೇರಿದಂತೆ ಇತರ ಗ್ರಾಮಗಳಿಗೆ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ನೀಡಲಿದ್ದಾರೆ.






Comments
Leave a Comment