ಸಿದ್ದರಾಮಯ್ಯ ಘೋಷಣೆ: ಜೂನ್ 1ಕ್ಕೆ ಕೆಪಿಎಸ್ ಚಾಲನೆ, 15,000 ಶಿಕ್ಷಕರ ನೇಮಕ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಚಾರಗಳ ಕುರಿತು ನಡೆದ ಸಭೆಯಲ್ಲಿ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಘೋಷಿಸಿದರು. ಅವರು ಜೂನ್ 1ರಂದು ಶಿವಮೊಗ್ಗದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಯೋಜನೆಗೆ ಅಧಿಕೃತ ಚಾಲನೆ ನೀಡಲಿರುವುದಾಗಿ ತಿಳಿಸಿದ್ದಾರೆ.
ಪ್ರತಿ ಕೆಪಿಎಸ್ ಶಾಲೆಯಲ್ಲಿ ಎಲ್ಕೆಜಿ ರಿಂದ ಪಿಯುಸಿ ತನಕ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಒಂದೇ ಸ್ಥಳದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ರೂಪಿಸಲಾಗಿದ್ದು, ಪ್ರತಿ ಶಾಲೆಯಲ್ಲಿ 1200 ಮಕ್ಕಳಿಗೆ ಪ್ರವೇಶಾವಕಾಶ ಕಲ್ಪಿಸುವಂತೆ ಯೋಜನೆ ರೂಪಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ 800 ಕೆಪಿಎಸ್ ಶಾಲೆಗಳು ಸಂಪೂರ್ಣವಾಗಿ ಸಿದ್ಧವಾಗಬೇಕು ಎಂದು ಮುಖ್ಯಮಂತ್ರಿ ಗುರಿ ನಿಗದಿಪಡಿಸಿದ್ದಾರೆ. ಈ ವರ್ಷ 800 ಕೆಪಿಎಸ್ ಆರಂಭಿಸಲು ಟೆಂಡರ್ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸುವಂತೆ ಸೂಚನೆ ನೀಡಿದ್ದು, ಶಾಲಾ ಬಸ್ ವ್ಯವಸ್ಥೆಯನ್ನು ಹೇಗೆ ಕಲ್ಪಿಸಬಹುದು ಎಂಬುದರ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು. ಜೊತೆಗೆ 15,000 ಶಿಕ್ಷಕರ ನೇಮಕಾತಿ ಕುರಿತು ತಕ್ಷಣವೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ ಈ ಬಾರಿ ಎಸ್ಎಸ್ಎಲ್ಸಿಯಲ್ಲಿ ಒಟ್ಟು ಉತ್ತೀರ್ಣ ಪ್ರಮಾಣ ಶೇ.94.10ಕ್ಕೆ ಏರಿಕೆಯಾಗಿದ್ದು, ಇದು ಕಳೆದ ವರ್ಷದಿಗಿಂತ ಶೇ.14.06ರಷ್ಟು ಹೆಚ್ಚಾಗಿದೆ. ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣ ಪ್ರಮಾಣ ಶೇ.86.48ಕ್ಕೆ ಏರಿಕೆಯಾಗಿದ್ದು, 2025ರ ಶೇ.73.45 ಹೋಲಿಸಿದರೆ ಶೇ.13.03ರಷ್ಟು ಹೆಚ್ಚಳವಾಗಿದೆ. ಈ ಬಾರಿ ಶೇ.100 ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 2,393ಕ್ಕೆ ಏರಿದೆ; ಕಳೆದ ವರ್ಷ 766 ಶಾಲೆಗಳು 100% ಫಲಿತಾಂಶ ದಾಖಲಿಸಿದ್ದರು. ಎಸ್ ಮತ್ತು ಎಸ್ಟಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಶೇ.18ರಷ್ಟು ಸುಧಾರಣೆ ಕಂಡುಬಂದಿದ್ದು, ವಿವಿಧ ಹಿಂದುಳಿದ ವರ್ಗಗಳಲ್ಲಿ ಕೂಡ ಗಣನೀಯ ಸುಧಾರಣೆಗಳಾಗಿವೆ — ಕೆಟಗರಿ-1: 16.6%; 2ಎ: 11.5%; 2ಬಿ: 18%; 3ಎ: 8.12%; 3ಬಿ: 10%. ಕಲ್ಯಾಣ ಕರ್ನಾಟಕ ಭಾಗದಲ್ಲಿ ಫಲಿತಾಂಶ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಶೇ.2ರಷ್ಟು ಹೆಚ್ಚಾಗಿದೆ. ಈ ಬಾರಿ ಯಾವುದೇ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಲಾಗಿಲ್ಲ ಮತ್ತು SSLC ಮೂರನೇ ಅಂತಿಮ ಪರೀಕ್ಷೆ ಈ ಬಾರಿ ಇರಲಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, SSLC ಉತ್ತೀರ್ಣ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ ಶೇ.94.80 ಮತ್ತು ನಗರ ಪ್ರದೇಶದಲ್ಲಿ ಶೇ.93.20 ದಾಖಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಶೇ.87.62 ಮತ್ತು ನಗರ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ.85.95 ಆಗಿದೆ. ಉಚಿತ ಪಠ್ಯಪುಸ್ತಕಗಳ ಜೊತೆಗೆ ಉಚಿತ ನೋಟ್ ಬುಕ್ ವಿತರಿಸುವ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದಂತೆ, ಫಲಿತಾಂಶ ಸುಧಾರಣೆಗೆ ರಾಜ್ಯಾದ್ಯಂತ ಪೋಷಕರು ಮತ್ತು ಶಿಕ್ಷಕರ ಸಭೆಗಳನ್ನು ನಡೆಸಿ, ಅತಿಥಿ ಶಿಕ್ಷಕರ ನೇಮಕ, ಪಠ್ಯ ಆಧಾರಿತ ಅಧ್ಯಯನ ಕ್ರಮ, ಪೂರ್ವಭಾವಿ ಪರೀಕ್ಷೆಗಳು ಮತ್ತು ಶಿಕ್ಷಕರಿಗೆ ನಿರಂತರ ತರಬೇತಿ ನೀಡುವ ಮೂಲಕ ಮೇಲ್ವಿಚಾರಣೆ ಜಾರಿಗೆ ತಂದಿದ್ದಾರೆ. ಮುಖ್ಯಮಂತ್ರಿಗಳ ಸ್ಪಷ್ಟ ನಿರ್ದೇಶನದೊಂದಿಗೆ ಕೈಗೊಳ್ಳಲಾದ ಈ ಕ್ರಮಗಳು ಮುಂದಿನ ಸಾಲುಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.






Comments
Leave a Comment