ಪೊಲೀಸ್ ನಿವೃತ್ತರ ಅನುಭವವನ್ನು ಮತ್ತೆ ಸಕ್ರಿಯಗೊಳಿಸಲು ಮಹತ್ವದ ನಿರ್ಧಾರ
ಪೊಲೀಸ್ ನಿವೃತ್ತರ ಅನುಭವವನ್ನು ಮತ್ತೆ ಸಕ್ರಿಯಗೊಳಿಸಲು ಮಹತ್ವದ ನಿರ್ಧಾರ
ರಾಜ್ಯ ಪೊಲೀಸ್ ಇಲಾಖೆ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸೌಜನ್ಯಪೂರ್ವಕ ಸಂಪರ್ಕವನ್ನು ಪುನರ್ಜಾಗೃತಗೊಳಿಸಲು ಮಹತ್ವದ ನಿರ್ದೇಶನ ಹೊರಡಿಸಲಾಗಿದ್ದು ರಾಜ್ಯ ಪೋಲಿಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ ಅವರು ಪ್ರತಿ ಠಾಣೆಯಲ್ಲಿ “ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ರಿಜಿಸ್ಟರ್” ಅನ್ನು ನಿರ್ವಹಿಸುವಂತೆ ಸೂಚಿಸಿದ್ದಾರೆ.
ನಿವೃತ್ತರ ಹೆಸರು, ನಿವೃತ್ತಿ ಸಮಯದಲ್ಲಿ ಹುದ್ದೆ, ಸೇವಾ ವರ್ಷಗಳು, ಪ್ರಸ್ತುತ ವಿಳಾಸ ಮತ್ತು ಸಂಪರ್ಕ ಸಂಖ್ಯೆ, ಸೇವೆ ಮಾಡಿದ ಸ್ಥಳಗಳು ಹಾಗೂ ನೈಪುಣ್ಯತೆ ಪಡೆದ ಕಾರ್ಯಕ್ಷೇತ್ರಗಳ ವಿವರಗಳನ್ನು ಕಟ್ಟುನಿಟ್ಟಾಗಿ ದಾಖಲಿಸುವಂತೆ ಆದೇಶಿಸಿದ್ದಾರೆ.
ನಿವೃತ್ತ ಪೊಲೀಸ್ ಸಿಬ್ಬಂದಿ ತಮ್ಮ ವಿಸ್ತೃತ ಅನುಭವ ಮತ್ತು ತಜ್ಞತೆಯಿಂದ ಸಮುದಾಯ ಪೊಲೀಸ್ ಕಾರ್ಯ, ಅಪರಾಧ ತಡೆ, ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ಬಿಕ್ಕಟ್ಟಿನ ನಿರ್ವಹಣೆಯಲ್ಲಿ ಅಮೂಲ್ಯ ಸಹಕಾರ ನೀಡಲು ಸಿದ್ಧರಾಗಿದ್ದಾರೆ. ಅವರ ಸಂಪರ್ಕ ಜಾಲ ಮತ್ತು ಜಾಗರೂಕತೆ ಅಪರಾಧಿಗಳು, ಮಾದಕವಸ್ತು ವ್ಯಾಪಾರ ಮತ್ತು ಕಳ್ಳಸಾಗಾಣಿಕೆ ಮುಂತಾದ ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆಹಚ್ಚಲು ಸಹಾಯಕವಾಗುತ್ತದೆ ಎಂದು ಅಧಿಕೃತ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ನಿವೃತ್ತರನ್ನು ತೊಡಗಿಸಿಕೊಳ್ಳುವುದು ಕೇವಲ ಕಾರ್ಯಾಚರಣಾತ್ಮಕ ಅನುಕೂಲವಲ್ಲ, ಕಾರ್ಯತಂತ್ರದ ಅಗತ್ಯವೆಂದು ಇಲಾಖೆ ಗುರುತಿಸಿದೆ ಎಂದು ಮಹಾನಿರ್ದೇಶಕರು ಪ್ರಸ್ತಾಪಿಸಿದ್ದಾರೆ.
ಮೃತರಾದ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಗೌರವಿಸುವ ಕ್ರಮಗಳೂ ಜ್ಞಾಪನೆಯಲ್ಲಿ ವಿವರಿಸಲಾಗಿದೆ. ಸಂಬಂಧಿತ ಠಾಣಾಧಿಕಾರಿಗಳು (SHO) ಮೃತರ ಪಾರ್ಥಿವ ಶರೀರದ ಮೇಲೆ ಮಹಾನಿರ್ದೇಶಕರು ಮತ್ತು ಪೋಲೀಸ್ ಮಹಾ ನೀರೀಕ್ಷಕರು/ಹೆಡ್ ಆಫ್ ಪೋಲಿಸ್ ಫೋರ್ಸ್ ಪರವಾಗಿ ಪುಷ್ಪಗುಚ್ಛ ಇಡುವಂತೆ ಸೂಚಿಸಲಾಗಿದೆ. ಈ ಮೂಲಕ ಇಲಾಖೆಯು ನಿವೃತ್ತರ ತ್ಯಾಗ ಮತ್ತು ಸೇವೆಯನ್ನು ಸಾರ್ವಜನಿಕವಾಗಿ ಗುರುತಿಸುವ ಬದ್ಧತೆಯನ್ನು ತೋರಿಸಲಿದೆ ಎಂದು ಅವರು ಹೇಳಿದ್ದಾರೆ.
ಜ್ಞಾಪನೆಯಲ್ಲಿ ಘಟಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ತಮ್ಮ ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲಾ ನಿವೃತ್ತರ ವಿವರಗಳನ್ನು ನಿಗದಿತ ನಮೂನೆಯಲ್ಲಿ ಸೇರಿಸಿ, ನಿವಾಸಗಳಿಗೆ ಭೇಟಿ ನೀಡಿ ರಿಜಿಸ್ಟರ್ ಅನ್ನು ನಿಯತಕಾಲಿಕವಾಗಿ ನವೀಕರಿಸಬೇಕು; ಸಂಪರ್ಕ ವಿವರಗಳ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ನಿವೃತ್ತರೊಂದಿಗೆ ನಿಯಮಿತ ಸಂಪರ್ಕ ಕಾಪಾಡಿ, ಅವರ ಆರೋಗ್ಯ ಭಾಗ್ಯ ಯೋಜನೆಗಳ ಪ್ರಯೋಜನಗಳನ್ನು ವಿವರಿಸಿ ನಿವೃತ್ತ ಎಬಿವೈ ಯೋಜನೆಗೆ ಸೇರಲು ಪ್ರೋತ್ಸಾಹಿಸುವುದು ಮತ್ತು ವೈಯಕ್ತಿಕ ಸಹಾಯದ ಅಗತ್ಯವಿದ್ದಾಗ ಸಾಧ್ಯವಾದಷ್ಟು ನೆರವು ನೀಡುವುದು ಎಂಬ ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಪೊಲೀಸ್ ಧ್ವಜ ದಿನ, ವಾರ್ಷಿಕ ಕ್ರೀಡಾಕೂಟ ಮತ್ತು ಇತರ ಪ್ರಮುಖ ಕಾರ್ಯಕ್ರಮಗಳಿಗೆ ನಿವೃತ್ತರನ್ನು ಆಹ್ವಾನಿಸುವ ಮೂಲಕ ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸುವಂತೆ ಸೂಚನೆ ನೀಡಲಾಗಿದೆ. ಘಟಕಗಳಿಗೆ ಭೇಟಿ ನೀಡುವ ಹಿರಿಯ ಅಧಿಕಾರಿಗಳು ನಿವೃತ್ತರನ್ನು ಭೇಟಿಮಾಡಿ ಅವರ ಸಮಸ್ಯೆಗಳನ್ನು ಕೇಳಿ ಪರಿಹರಿಸುವಂತೆ ಮೇಲ್ವಿಚಾರಣೆ ನಡೆಸಬೇಕು ಎಂದು ಜ್ಞಾಪನೆಯಲ್ಲಿ ಸಹಾ ಸೂಚಿಸಲಾಗಿದೆ.
ಎಲ್ಲಾ ಪೊಲೀಸ್ ಕಮಿಷನರ್ಗಳು, ವಲಯಾಧಿಕಾರಿಗಳು, ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಮತ್ತು ಎಲ್ಲಾ ಠಾಣಾಧಿಕಾರಿಗಳಿಗೆ ಈ ನಿರ್ದೇಶನವನ್ನು ಅನುಷ್ಠಾನಕ್ಕೆ ತರಲು ಸೂಚಿಸಲಾಗಿದೆ. ಈ ನಿರ್ದೇಶನವು ಕೇವಲ ದಾಖಲೆ ನಿರ್ವಹಣೆಯಲ್ಲ, ನಿವೃತ್ತರೊಂದಿಗೆ ಸತತ ಸಂಪರ್ಕ ಮತ್ತು ಗೌರವದ ಸಂಸ್ಕೃತಿಯನ್ನು ಪುನರ್ಸ್ಥಾಪಿಸುವ ಪ್ರಯತ್ನವಾಗಿದೆ. ರಿಜಿಸ್ಟರ್ ಮೂಲಕ ಪಾರದರ್ಶಕತೆ, ತ್ವರಿತ ಸಹಕಾರ ಮತ್ತು ಸಮುದಾಯ-ಪೊಲೀಸ್ ಬಾಂಧವ್ಯ ಬಲಗೊಳ್ಳಲಿದೆ.





Comments
Leave a Comment