ಸದಾ ಸುದ್ದಿಯಲ್ಲಿರಲು ಆರೆಸ್ಸೆಸ್ ವಿರುದ್ಧ ಟೀಕಿಸುವ ಪ್ರಿಯಾಂಕ್ ಖರ್ಗೆ: ಶೋಭಾ ಕರಂದ್ಲಾಜೆ
ಸದಾ ಸುದ್ದಿಯಲ್ಲಿರಲು ಆರೆಸ್ಸೆಸ್ ವಿರುದ್ಧ ಟೀಕಿಸುವ ಪ್ರಿಯಾಂಕ್ ಖರ್ಗೆ: ಶೋಭಾ ಕರಂದ್ಲಾಜೆ
ಬೆಂಗಳೂರು: ದಿನಾ ಟಿವಿಯಲ್ಲಿ ಬರಲು, ಸದಾ ಸುದ್ದಿಯಲ್ಲಿರುವ ಉದ್ದೇಶದಿಂದ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್ ಬಗ್ಗೆ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ಆಕ್ಷೇಪಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರನಾದ ತಮ್ಮನ್ನು ಯಾರೂ ಮುಟ್ಟಲಾಗದು ಎಂಬ ಭಾವನೆ ಅವರದು ಎಂದು ಟೀಕಿಸಿದರು. ಆರೆಸ್ಸೆಸ್ ಅನ್ನು ಟೀಕಿಸುವುದನ್ನು ಬಿಟ್ಟು ನೀವೇನು ಮಾಡಿದ್ದೀರೆಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು. ಹದಗೆಟ್ಟ ಕಾನೂನು- ಸುವ್ಯವಸ್ಥೆ ಕಡೆ ಗಮನ ಕೊಡದೇ ಅವರು ಕೇವಲ ಆರೆಸ್ಸೆಸ್ ಬಗ್ಗೆ ಕಾಮೆಂಟ್ ಮಾಡುತ್ತ ಕೂತಿದ್ದಾರೆ. ಹಿಂದೆ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಅಲ್ಲಿ ಅವರ ಸಾಧನೆ ಶೂನ್ಯ ಎಂದು ಆರೋಪಿಸಿದರು.
ಹೆಣ್ಮಕ್ಕಳ, ಗಂಡಸರ ನಾಪತ್ತೆ ವಿಚಾರದಲ್ಲಿ ಅವರು ಗಮನ ಕೊಡುವುದಿಲ್ಲ ಎಂದು ಟೀಕಿಸಿದರು. ಒಂದೆಡೆ ತಂದೆಯ ಹಿಂದೆ ಅಡಗುವುದು, ನಿರಂತರ ಅಧಿಕಾರದಲ್ಲಿರುವ ಕುಟುಂಬದಿಂದ ಬಂದು ಬಲಿತರಾದರೂ ದಲಿತನೆಂಬ ನೆರಳನ್ನು ತೆಗೆದುಕೊಳ್ಳುತ್ತಾರೆ ಎಂದು ದೂರಿದರು. ಮೊದಲು ಪೊಲೀಸ್ ಇಲಾಖೆಯನ್ನು ತಹಬಂದಿಗೆ ತನ್ನಿ ಎಂದು ಅವರು ಆಗ್ರಹಿಸಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯವರಿಂದ ಅಡ್ಡ ಮತದಾನ ವಿಚಾರಕ್ಕೆ ಸಂಬಂಧಿಸಿ ಪಕ್ಷ ಸಮಿತಿ ರಚಿಸಿದೆ. ಇದು ಹಿರಿಯರ ಮತ್ತು ಹೈಕಮಾಂಡ್ ಗಮನಕ್ಕೆ ಬಂದಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ತಾಯಿಗೆ ಮೋಸ ಮಾಡುವಂಥ ಕೆಲಸ ಮಾಡಿದವರನ್ನು ಕ್ಷಮಿಸಬಾರದು ಎಂದು ಅವರು ಒತ್ತಾಯಿಸಿದರು. ಇಬ್ಬರು ಶಾಸಕರು ಮುಕ್ತವಾಗಿ ಕಾಂಗ್ರೆಸ್ ಬೆಂಬಲಿಸಿದ್ದು, ಅವರು ಪಕ್ಷ ಬಿಟ್ಟು ಹೊರ ಹೋಗಲಿ ಎಂದು ಸಲಹೆ ನೀಡಿದರು.
ಬಿಡದಿ ಟೌನ್ಶಿಪ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕೇವಲ ಬಿಡದಿ ಟೌನ್ಶಿಪ್ ವಿಷಯ ಅಲ್ಲ; ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆಗಳನ್ನು ನಾವು ಮಾಡಿದ್ದೇವೆ. ಎಲ್ಲಿಗೂ ಮೂಲಭೂತ ಸೌಕರ್ಯವನ್ನು ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಿವೇಶನ ಪಡೆದವರು 10 ವರ್ಷವಾದರೂ ಬಂದಿಲ್ಲ; ಮನೆ ಕಟ್ಟಿಲ್ಲ; ಅವರಿಗೆ ಇನ್ನೊಂದು ಕಡೆ ನಿವೇಶನ ಇರಬೇಕು ಎಂದರು. ಇದರ ಸಮಸ್ಯೆ ಪರಿಹರಿಸಲು ನೀವು ಮುಂದಾಗಬೇಕು. ಆಮೇಲೆ ಹೊಸದರ ಯೋಚನೆ ಮಾಡಿ ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ವಿದ್ಯುತ್, ನೀರು, ಕಸದ ಸಮಸ್ಯೆ ಇದೆ. ಬಿಲ್ ಜಾಸ್ತಿ ಮಾಡುತ್ತೀರಿ. ನಿಮ್ಮ ರಿಯಲ್ ಎಸ್ಟೇಟ್, ನಿಮ್ಮ ಭೂ ಮಾಫಿಯ ನಡೆಸಲು ಟೌನ್ಶಿಪ್ ಯೋಚನೆ ಮಾಡುತ್ತಿದ್ದೀರಿ ಎಂದು ಆರೋಪಿಸಿದರು. ಈಗಾಗಲೇ ನಿರ್ಮಿಸಿದ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯ ಕೊಡಿ ಎಂದು ಆಗ್ರಹಿಸಿದರು.




Comments
Leave a Comment