ಕಾಂಗ್ರೆಸ್ ಸರಕಾರವು ವೈಫಲ್ಯ ಮುಚ್ಚಿ ಹಾಕುವ ಸಲುವಾಗಿ ಕೇಂದ್ರ ಸರಕಾರವನ್ನು ದೂರುತ್ತಿದೆ- ಬಿ.ವೈ. ವಿಜಯೇಂದ್ರ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ತನ್ನ ವೈಫಲ್ಯ ಮುಚ್ಚಿ ಹಾಕುವ ಸಲುವಾಗಿ ಕೇಂದ್ರ ಸರಕಾರ ಮಲತಾಯಿ ಧೋರಣೆ ಮಾಡುತ್ತಿದೆ; ಅನ್ಯಾಯ ಮಾಡುತ್ತ ಇದೆ ಎಂದು ಪದೇಪದೇ ಪ್ರಸ್ತಾಪಿಸುತ್ತದೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ವಾಸ್ತವಿಕ ಸತ್ಯ ಏನೆಂದರೆ, ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ; ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣವನ್ನೂ ತೆಲಂಗಾಣಕ್ಕೆ ತೆಗೆದುಕೊಂಡು ಹೋಗಿ ದುರ್ಬಳಕೆ ಮಾಡಿದ್ದು ರಾಜ್ಯದ ಜನರ ಮುಂದಿದೆ ಎಂದು ಗಮನ ಸೆಳೆದರು. ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರಕಾರವಿದ್ದು, ಇವರ ವೈಫಲ್ಯ ಮುಚ್ಚಿಹಾಕಲು ಕೇಂದ್ರ ಸರಕಾರ ದೂರುವ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.
ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಪ್ರಶ್ನೆಗೆ ಉತ್ತರಿಸಿ, ನಳ್ಳಿಗಳಲ್ಲಿ ನೀರು ಬರಿಸುವ ಜವಾಬ್ದಾರಿ ರಾಜ್ಯ ಸರಕಾರದ್ದು ಎಂದು ತಿಳಿಸಿದರು. ರಾಜ್ಯ ಸರಕಾರಕ್ಕೆ ಜಲಜೀವನ್ ಯೋಜನೆಯಡಿ ಅನುದಾನ ನೀಡಲಾಗುತ್ತದೆ. ಆ ಹಣದ ಸದುಪಯೋಗ ಮಾಡಿ, ಸುರಕ್ಷಿತ, ಶುದ್ಧವಾದ ಕುಡಿಯುವ ನೀರನ್ನು ಪ್ರತಿ ಮನೆಗೂ ಕೊಡುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ ಎಂದು ತಿಳಿಸಿದರು.
ಸಮರ್ಪಕ ನೀರಿನ ಮೂಲವನ್ನು ಗುರುತಿಸದೇ ಇರುವುದು ರಾಜ್ಯ ಸರಕಾರದ ವೈಫಲ್ಯ. ಕೆರೆ, ಹೊಳೆ, ಹಳ್ಳ, ಡ್ಯಾಂಗಳಿಂದ ಕೊಡುವ ಕೆಲಸ ಮಾಡಿದರೆ ಅದು ಖಾಯಂ ಆಗಿರುತ್ತದೆ. ಕೇಂದ್ರ ಸರಕಾರದ ಹಣವನ್ನು ಬಳಸಿ ಸಮರ್ಪಕವಾಗಿ ಅನುಷ್ಠಾನ ಮಾಡುವುದು ರಾಜ್ಯ ಸರಕಾರದ ಕೆಲಸ. ಇದು ಒಕ್ಕೂಟ ವ್ಯವಸ್ಥೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ.ಮೋಹನ್, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ಅವರು ಉಪಸ್ಥಿತರಿದ್ದರು.






Comments
Leave a Comment