ಮಹಿಳಾ ಮೀಸಲಾತಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ: ಭಾರತಿ ಶೆಟ್ಟಿ
ಮಹಿಳಾ ಮೀಸಲಾತಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ: ಭಾರತಿ ಶೆಟ್ಟಿ
ಬೆಂಗಳೂರು: ಮಹಿಳಾ ಮೀಸಲಾತಿ ಜಾರಿಯು ನಮಗೆಲ್ಲ ಸಂತಸ ತಂದಿದೆ. ನಾವು ಈ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು ಎಂದು ವಿಧಾನಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಭಾರತದಲ್ಲಿರುವ 140 ಕೋಟಿ ಜನಸಂಖ್ಯೆಯಲ್ಲಿ ಶೇ 50ರಷ್ಟಿರುವ ಮಹಿಳೆಯರು ಬಹಳ ವರ್ಷಗಳಿಂದ ಇದರ ನಿರೀಕ್ಷೆಯಲ್ಲಿದ್ದರು. 1992ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಕೊಟ್ಟರು. 1996ರಲ್ಲಿ ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಮಂಡಿಸಲಾಗಿತ್ತು. ಅಂದಿನಿಂದ 2023ರವರೆಗೆ ಈ ಕುರಿತ ಪ್ರಯತ್ನ ನಡೆದಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರು 4 ಬಾರಿ ಈ ಮಸೂದೆ ಮಂಡಿಸುವ ಪ್ರಯತ್ನ ಮಾಡಿದ್ದರು. ವಿಪಕ್ಷಗಳ ಸಹಕಾರ ಇಲ್ಲದುದರಿಂದ ಮಸೂದೆ ಜಾರಿ ಆಗಿಲ್ಲ ಎಂದು ವಿವರಿಸಿದರು. ಸೋನಿಯಾ ಗಾಂಧಿಯವರು ಯುಪಿಎ ನೇತೃತ್ವ ವಹಿಸಿದ್ದಾಗ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ನಿರೀಕ್ಷೆ ಇತ್ತು ಎಂದು ಹೇಳಿದರು.
ಹಿಂದೆ ಇದಕ್ಕಾಗಿ ದೊಡ್ಡ ಹೋರಾಟವೂ ನಡೆದಿತ್ತು. ಕರ್ನಾಟಕದಿಂದ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಯುಪಿಎ ಸಂಸತ್ತಿನಲ್ಲಿ ಈ ಬಿಲ್ ಮಸೂದೆ ಮಂಡಿಸಿದ್ದರೂ ಇದು ಅನುಮೋದನೆ ಪಡೆಯಲಿಲ್ಲ ಎಂದು ತಿಳಿಸಿದರು.
ನರೇಂದ್ರ ಮೋದಿಜೀ ಅವರ ಪ್ರಯತ್ನದಿಂದ ಮಸೂದೆ ಅನುಮೋದನೆ ಪಡೆದಿದೆ. ಇದು ಅತ್ಯಂತ ಸಂತೋಷ ತಂದಿದೆ. 19 ವರ್ಷದ ಬಳಿಕ ಸಂತಸ, ಖುಷಿ, ನ್ಯಾಯ ಲಭಿಸಿದೆ ಎಂದು ಹೇಳಿದರು. ಮೋದಿಜೀ ಅವರ ಕಾಲದಲ್ಲಿ ಮಹಿಳೆಯರ ಆಡಳಿತಾತ್ಮಕ ಸಬಲೀಕರಣ ನಡೆದಿದೆ. ಅದು ಉತ್ತುಂಗಕ್ಕೆ ಏರಿದೆ. ಬೇಟಿ ಬಚಾವೋ, ಬೇಟಿ ಪಡಾವೋ, ಲಕ್ಪತಿ ಸೇರಿ ಇದೀಗ ಮೀಸಲಾತಿಯ ಅವಕಾಶ ನೀಡಿದ್ದಾರೆ. ಮಹಿಳೆಯರಿಗೆ ರಕ್ಷಣಾ ಕ್ಷೇತ್ರದಲ್ಲೂ ಅವಕಾಶ ಕೊಟ್ಟಿದ್ದಾರೆ ಎಂದು ಪ್ರಶಂಸಿಸಿದರು.
ಯಡಿಯೂರಪ್ಪ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ರಷ್ಟು ಮೀಸಲಾತಿ ನೀಡಿದ್ದಾರೆ. ಅವರಿಗೂ ಅಭಿನಂದನೆಗಳು ಎಂದು ತಿಳಿಸಿದರು. ಸಂಸತ್ತಿನಲ್ಲಿ ಸಕಾರಾತ್ಮಕ ನಿರ್ಧಾರ ಹೊರಬರಲಿ ಎಂದು ಆಶಿಸಿದರು. ಪಕ್ಷಭೇದ ಮರೆತು ಎಲ್ಲ ಮಹಿಳೆಯರಿಗೆ ಅವಕಾಶ ಲಭಿಸುವಂತಾಗಲಿ ಎಂದು ಹೇಳಿದರು.






Comments
Leave a Comment