ವೆನ್ಲಾಕ್ಗೆ 70 ಕೋಟಿಯಲ್ಲಿ ಒಪಿಡಿ ಬ್ಲಾಕ್ ಎಂಫೆಂಡ್ಸ್ ಕಾರ್ಯಾಲಯ, ಕಾರುಣ್ಯ ಪಾಕಶಾಲೆ ಡಾ.ಶಿವಪ್ರಕಾಶ್ಉದ್ಘಾಟನೆ
from Jayaram Udupi
ಮಂಗಳೂರು: ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ 70 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಹೊರ ರೋಗಿ ವಿಭಾಗ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. 3.5 ಕೋಟಿ ರೂ. ಮೊತ್ತದಲ್ಲಿ ಹಳೆ ಕಟ್ಟಡ ನಿರ್ವಹಣೆ ಮಾಡಲಾಗುತ್ತಿದೆ ಎಂದು ಸರಕಾರಿ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಪ್ರಕಾಶ್ ಡಿ.ಎಸ್. ಹೇಳಿದರು.
ನಗರದ ಜೆಪ್ಪು ಎಂ.ಆರ್.ಭಟ್ ಲೇನ್ನಲ್ಲಿ ಗುರುವಾರ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನಿಂದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜತೆಗಾರರಿಗೆ ನಿರಂತರ ಎಂಟು ವರ್ಷಗಳಿಂದ ರಾತ್ರಿ ಊಟ ನೀಡುತ್ತಿರುವ 'ಕಾರುಣ್ಯ ಯೋಜನೆ'ಯ ಪಾಕಶಾಲೆ ಮತ್ತು ಎಂಫೆಂಡ್ಸ್ ಕಾರ್ಯಾಲಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಹುತೇಕ ಹೊರಜಿಲ್ಲೆಯ ರೋಗಿಗಳೇ ವೆನ್ಲಾಕ್ನ ಪ್ರಯೋಜನ ಪಡೆಯುತ್ತಿದ್ದು, ದಕ ಜಿಲ್ಲೆಯ ಜನರು ಚಿಕಿತ್ಸೆಗೆ ಬರಬೇಕಾದರೆ ಸ್ವಚ್ಛತೆ, ಆಕರ್ಷಣೆ ಇರಬೇಕು. ಈ ನಿಟ್ಟಿನಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ಹೊಸ ಬ್ಲಾಕ್, ಕಟ್ಟಡದ ವಿವಿಧ ವಿಭಾಗಗಳ ಅಂತರ್ ಸಂಪರ್ಕ, ಎಲೆಕ್ಟ್ರಿಕ್ ಬಗ್ಗೀಸ್ ಇತ್ಯಾದಿ ಹೊಸ ಸೌಲಭ್ಯ ನಿರ್ಮಾಣವಾಗಲಿದೆ ಎಂದರು.
ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ವಸಂತ ಕುಮಾರ್ ಶೆಟ್ಟಿ ಮಾತನಾಡಿ, ಹಸಿದವರಿಗೆ ಊಟ ಬಡಿಸುವುದು ಬಹುದೊಡ್ಡ ಸೇವೆ. ದಾನಿಗಳನ್ನು ಹುಡುಕಿ ನಿರಂತರ ಎಂಟು ವರ್ಷಗಳಿಂದ ಆಹಾರ ನೀಡುತ್ತಿರುವುದು ಎಂಫ್ರೆಂಡ್ಸ್ನ ಬದ್ಧತೆಯ ಸೇವೆಗೆ ಸಾಕ್ಷಿ. ಇದಕ್ಕೆ ದೊಡ್ಡ ಮನಸ್ಸು ಬೇಕು ಎಂದರು.
ವೈಟ್ಸ್ಟೋನ್ ಉದ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಶರೀಫ್ ಬೋಳಾರ್ ಉದ್ಘಾಟನೆ ನೆರವೇರಿಸಿದರು. ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುಜಾಹ್ ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಕಾರಿ ಝುಬೈರ್ ಬುಳೇರಿಕಟ್ಟೆ ಉಪಸ್ಥಿತರಿದ್ದರು.
ಎಂಫ್ರೆಂಡ್ಸ್ ಕಾರುಣ್ಯ ಯೋಜನೆ ಮುಖ್ಯಸ್ಥ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಂಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ವಂದಿಸಿದರು.
0000
ಮಂಗಳೂರು: ಸಚಿವ ರಾಜಣ್ಣ ಅವರು ಹನಿಟ್ರ್ಯಾಪ್ ಆಗಿರುವ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದ್ದು ಅದಕ್ಕೂ ಬಂಟ್ವಾಳದ ಖಾಸಗಿ ಅನುದಾನಿತ ಕಾಲೇಜೊಂದಕ್ಕೂ ಸಂಬಂಧ ಇರುವ ಬಗ್ಗೆ ಸಂಶಯಗಳಿವೆ, ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿ ಶ್ರೀ ಸಿದ್ದಾರಾಮಯ್ಯ ಅವರಿಗೆ ಬರೆದ ಬಹಿರಂಗ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಲೋಲಾಕ್ಷ ಮಾತನಾಡಿದರು. ಮುಖ್ಯಮಂತ್ರಿ ಅವರು ಶುಕ್ರವಾರ ಮಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸರಣಿ ಪ್ರಶ್ನೆಗಳನ್ನು ಕೇಳಿದ ಪತ್ರವನ್ನು ಅವರು ಬಿಡುಗಡೆ ಮಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ನಿಲುವು ಪ್ರಕಟಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಬಂಟ್ವಾಳದ ಖಾಸಗಿ ಅನುದಾನಿತ ಕಾಲೇಜಿನ ಆಡಳಿತ ಮಂಡಳಿ ಕಾನೂನು ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಅದನ್ನು ವಜಾ ಮಾಡಿ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಸಹಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ.ಈ ಕಡತ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ ಮುಂದಿದೆ ಎನ್ನಲಾಗಿದೆ. ಕಾಲೇಜು ನಡೆಸುತ್ತಿರುವ ವಿದ್ಯಾವರ್ಧಕ ಸಂಘದ ವ್ಯಾಪ್ತಿಯಲ್ಲಿ ಶಿಕ್ಷಣ ಸಂಸ್ಥೆಗಳು ಇರುವ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇದೆ. ಆಡಳಿತಾಧಿಕಾರಿ ನೇಮಕ ಕಡತ ಸಚಿವರ ಬಳಿಯೇ ಚೆನ್ನಾಗಿ ಮಲಗಿದೆ, ಸಚಿವರು ತಾವೇ ಹೇಳಿಕೊಂಡಂತೆ ಹನಿಟ್ರ್ಯಾಪ್ ನಲ್ಲಿ ಇದ್ದಾರೆ ಎಂದು ಲೋಲಾಕ್ಷ ಗುಮಾನಿ ವ್ಯಕ್ತಪಡಿಸಿದರು.
ಈ ಅನುದಾನಿತ ಕಾಲೇಜಿನ ಪ್ರಿನ್ಸಿಪಾಲ್ ಕಾಲೇಜು ಶಿಕ್ಷಣ ಇಲಾಖೆಯ ಆದೇಶಗಳನ್ನು ಪಾಲಿಸುತ್ತಿಲ್ಲ. ನಿವೃತ್ತಿಯ ಕೊನೆಯ ದಿನದಂದು ವರದಿ ಮಾಡಕೊಳ್ಳಲು ಹೋದ ಅಧ್ಯಾಪಕರಿಗೆ ನಿವೃತ್ತಿ ವರದಿ ಮಾಡಿಕೊಳ್ಳಲು ಅವಕಾಶ ನೀಡದಿರಲು ಕಾಲೇಜಿಗೇ ಬೀಗ ಜಡಿದು ಹೋದ ಪ್ರಿನ್ಸಿಪಾಲ್ ನನ್ನು ಅಮಾನತು ಮಾಡಬೇಕು ಎಂದು ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕರು ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ. ಆತನ ವಿರುದ್ದ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಆತನ ಎದುರು ಮಂಡಿಯೂರಿ ಕುಳಿತಿದ್ದಾರೆ ಎಂದು ಲೇವಡಿ ಮಾಡಿರುವ ಲೋಲಾಕ್ಷ ನಿವೃತ್ತಿಯಾದವರಿಗೆ ನಿವೃತ್ತಿ ಸೌಲಭ್ಯ ಸಿಗದಂತೆ ಮಾಡಲಾಗುತ್ತಿದೆ, ಸೇವಾ ಪುಸ್ತಕ ಗಳನ್ನು ಸರಕಾರಕ್ಕೆ ನೀಡದೆ ಪ್ರಿನ್ಸಿಪಾಲ್ ಸವಾಲು ಹಾಕುತ್ತಿದ್ದಾರೆ, ಅದನ್ನು ತರಿಸಿಕೊಳ್ಳುವ ಕರ್ತವ್ಯ ಬಧ್ದತೆ ಅಧಿಕಾರಿಗಳಲ್ಲಿ ಕಾಣುತ್ತಿಲ್ಲ ಎಂದಾರೋಪಿಸಿದರು.
ವಿದ್ಯಾವರ್ಧಕ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಬೇಕು, ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳಿಲ್ಲದ ಕಾರಣಕ್ಕೆ ಪುಕ್ಕಟ್ಟೆ ವೇತನ ಪಾವತಿ ಮಾಡಲು ಕಾರಣನಾಗಿ, ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ನಷ್ಟ ಉಂಟು ಮಾಡಿರುವ ಪ್ರಿನ್ಸಿಪಾಲ್ ರಿಂದ ನಷ್ಟ ವಸೂಲು ಮಾಡಬೇಕು. ಇಡೀ ಅವ್ವಹಾರದ ಬಗ್ಗೆ ತನಿಖಾ ತಂಡ ಕಳುಹಿಸಿ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದೂ ಒಕ್ಕೂಟ ಮುಖ್ಯ ಮಂತ್ರಿಗಳಿಗೆ ಬರೆದ ಬಹಿರಂಗ ಪತ್ರದಲ್ಲಿ ಆಗ್ರಹಿದೆ ಮತ್ತು ಅದನ್ನು ಮಾಡಬಲ್ಲಿರಾ ಎಂದೂ ಪ್ರಶ್ನಿಸಿದೆ.
ಕ್ರಿಮಿನಲ್ ಮೊಕ್ಕದ್ದಮೆ ಏಕಿಲ್ಲ;
ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಜಮೀನನ್ನು ಕಾನೂನು ಬಾಹಿರವಾಗಿ ಅತಿಕ್ರಮಣ ಮಾಡುವುದು ಕ್ರಿಮಿನಲ್ ಅಪರಾಧ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ೮೫೧೦ ಎಕರೆ ಡಿ.ಸಿ. ಮನ್ನಾ ಭೂಮಿಯಲ್ಲಿ ೭೩೬೬ ಎಕರೆ ಜಮೀನನ್ನು ವಿವಿಧ ಉದ್ದೇಶಗಳಿಗೆ ಬಳಸಲಾಗಿದೆ.ಉಳಿದ ೧೧೪೪ ಎಕರೆ ಭೂಮಿಯಲ್ಲಿ ೯೭೭ ಎಕರೆ ಅತಿಕ್ರಮವಾಗಿದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಹೇಳುತ್ತಿದೆ. ಈ ಬಗ್ಗೆ ದೂರುಗಳನ್ನು ನೀಡಲಾಗಿದೆ, ಪ್ರತಿಭಟನೆ ನಡೆಸಲಾಗಿದೆ,ಆದರೆ ಇದುವರೆಗೂ ಯಾಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲ್ಲ, ಇದಕ್ಕೆ ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದೂ ಲೋಲಾಕ್ಷ ಒತ್ತಾಯಿಸಿದರು.
ದೇಶದಲ್ಲಿ ಕ್ರೈಸ್ತ ರು ಪರಿಶಿಷ್ಟ ಜಾತಿಯ ಸ್ಥಾನ ಮಾನಕ್ಕೆ ಅರ್ಹರಲ್ಲ, ಆದರೆ ರಾಜ್ಯದಲ್ಲಿ ಒಳ ಮೀಸಲಾತಿಗೆ ರಚಿಸಲಾದ ಆಯೋಗದ ಮೂಲಕವೇ ಕ್ರೈಸ್ತರು ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಪಡೆಯುವಂತಹ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಅವರು ಒಳಮೀಸಲಾತಿ ಸಮೀಕ್ಷೆಯಲ್ಲಿ ಧರ್ಮ ದಾಖಲು ಮಾಡಲು ಕಲಂ ಸೇರ್ಪಡೆ ಮಾಡಬೇಕು ಎಂಬ ಒಕ್ಕೂಟದ ಬೇಡಿಕೆಯನ್ನು ಪುನರುಚ್ಚರಿಸಿದರು.
ಕಾಂತಪ್ಪ ಅಲಂಗಾರು,ಅನಿಲ್ ಕಂಕನಾಡಿ, ಲಕ್ಷ್ಮಣ್ ಕಾಂಚನ್ ಉಪಸ್ಥಿತರಿದ್ದರು.