ಆರ್ಥಿಕ ಸಮಾನತೆ ಬಂದರೆ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ ಆರ್ಥಿಕ ಸಮಾನತೆಗಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿ- ಸಿದ್ದರಾಮಯ್ಯ
ಮೈಸೂರು / ಬೆಂಗಳೂರು, ಮೇ 12 -
ಯಾರು ಕೂಡ ಹಸಿವಿನಿಂದ ಇರಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ಆರ್ಥಿಕ ಸಮಾನತೆಯನ್ನು ತಂದರೆ ಮಾತ್ರ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದು ಆರ್ಥಿಕ ಸಮಾನತೆಯನ್ನು ತರಲು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ಹೆಚ್. ಡಿ ಕೋಟೆಯ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ, ಪುತ್ಥಳಿ ಅನಾವರಣ, 2569 ನೇ ಬುದ್ಧಪೂರ್ಣಿಮೆ ಭಗವಾನ್ ಬುದ್ಧ ಜಯಂತಿ ಮಹೋತ್ಸವ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಇಂದು ಗೌತಮ ಬುದ್ಧ ಅವರ ಜನ್ಮದಿನ, ಸರ್ಕಾರದ ವತಿಯಿಂದ ಬುದ್ಧ ಜಯಂತಿಯನ್ನು ಆಚರಣೆ ಮಾಡುತ್ತಾ ಇದ್ದೇವೆ. ಬುದ್ಧ ಸುಮಾರು 2500 ವರ್ಷಗಳ ಹಿಂದೆ ಭಾರತದಲ್ಲಿ ಜನಿಸಿ ಜೀವಿಸಿದ್ದರು. ಬುದ್ಧ ಅವರು ಆಸೆಯೇ ದುಃಖಕ್ಕೆ ಕಾರಣ ಎಂದು ತಿಳಿಸಿದರು ಎಂದು ಮಾಹಿತಿ ನೀಡಿದರು.
ನಾವು ಇಂದು ಡಾ. ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಆಚರಣೆ ಮಾಡುತ್ತಾ ಇದ್ದೇವೆ. ಬಸವಣ್ಣ ಅವರು ದಯೆಯೇ ಧರ್ಮದ ಮೂಲವಯ್ಯ ಎಂದು ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಹಲವು ಜಾತಿ ಧರ್ಮಗಳ ಜನರು ವಾಸಿಸುತ್ತಿದ್ದೇವೆ. ನಾವು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ಬುದ್ಧ ಬಸವ ಅಂಬೇಡ್ಕರ್ ಅವರನ್ನು ಮಾನವತಾ ವಾದಿಗಳು ಎಂದು ಕರೆಯುತ್ತೇವೆ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಎಂದು ತಿಳಿಸಿದರು.
ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ನ್ಯಾಯಮೂರ್ತಿ ಡಾ.ಎಚ್.ಎನ್. ನಾಗಮೋಹನ್ ದಾಸ್ ಅವರ ಏಕ ಸದಸ್ಯ ಆಯೋಗವನ್ನು ರಚಿಸಿ ಸಮೀಕ್ಷೆ ಮಾಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು. ಜನರು ಅಭಿವೃದ್ಧಿ ಹೊಂದಲು ಆರ್ಥಿಕವಾಗಿ ಸಬಲರಾಗಲು ಶಿಕ್ಷಣ ಅತಿ ಮುಖ್ಯ. ನಾವೆಲ್ಲರೂ ಮನುಷ್ಯರಾಗಿ ಬದುಕಬೇಕು. ಆಗ ನಾವು ಬುದ್ಧ ಬಸವ ಅಂಬೇಡ್ಕರ್ ಗಾಂಧಿ ಅವರಿಗೆ ಗೌರವ ನೀಡಿದಂತೆ ಆಗುತ್ತದೆ ಎಂದು ತಿಳಿಸಿದರು.
ನಾವು ಗ್ಯಾರೆಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯನ್ನು ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಆರ್ಥಿಕವಾಗಿ ಸಬಲವಾಗಿದೆ. ಗ್ಯಾರೆಂಟಿ ಯೋಜನೆಗಳಿಗೆ ಕಳೆದ ವರ್ಷ 52 ಸಾವಿರ ಕೋಟಿ ಹಾಗೂ 1 ಲಕ್ಷದ 34 ಸಾವಿರ ಕೋಟಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಹಸಿವು ಮುಕ್ತ ಮಾಡಲು ಅನ್ನಭಾಗ್ಯ ಯೋಜನೆ, ರಾಜ್ಯದ 1.2 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2000, ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್ ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಯುವನಿಧಿ ಯೋಜನೆಯಡಿ ಪದವಿ ಪಡೆದ ನಿರುದ್ಯೋಗಿಗಳಿಗೆ 3000 ಹಾಗೂ ಡಿಪ್ಲಮೋ ಪಡೆದ ನಿರುದ್ಯೋಗಿಗಳಿಗೆ 1500 ರೂ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಅವರು ಮಾತನಾಡಿ, ಭಾರತ ದೇಶ ವೈವಿಧ್ಯಮಯವಾದ ದೇಶ. ಬಹುತ್ವದಿಂದ ಕೂಡಿರುವ ದೇಶದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ದೇಶಕ್ಕೆ ಅಪಾಯ ಬಂದರೆ ನಾವೆಲ್ಲರೂ ಒಟ್ಟಾಗಿ ನಿಲ್ಲುತ್ತೇವೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಶ್ರೇಷ್ಟವಾದ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ನೀಡಿ ನನ್ನನ್ನು ಟೀಕೆ ಮಾಡಿ ಎಂದು ಜನರಿಗೆ ತಿಳಿಸಿದ್ದಾರೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದಿಸಿ ಅರ್ಥಿಸಲಾಗುತ್ತಿದೆ. ಬೀದರ್ನಿಂದ ಚಾಮರಾಜನಗರದವರೆಗೆ ಮನವ ಸರಪಳಿ ನಿರ್ಮಿಸಿ ಸಂವಿಧಾನ ರಕ್ಷಣೆಯ ಶಪಥ ಮಾಡಿದೆವು ಎಂದು ತಿಳಿಸಿದರು.
ಇಂದು ಬುದ್ಧ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುತ್ತಿದ್ದೇವೆ. ಬುದ್ಧ ಎಂದರೆ ಶಾಂತಿ ಸಹನೆ ಪ್ರೀತಿ ಸಹಬಾಳ್ವೆ. ಆಲ್ಬರ್ಟ್ ಐನ್ ಸ್ಟೀನ್ ಅವರು ಬೌದ್ಧ ಧರ್ಮವನ್ನು ಅನುಸರಣೆ ಮಾಡಿದರು ಎಂದು ಮಾಹಿತಿ ನೀಡಿದರು.
ಪಶು ಸಂಗೋಪನೆ ಹಾಗೂ ರೇμÉ್ಮ ಇಲಾಖೆಯ ಸಚಿವರಾದ ಕೆ. ವೆಂಕಟೇಶ್ ಅವರು ಮಾತನಾಡಿ, ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಈ ಭಾಗದ ಜಿಲ್ಲೆಗಳ ಅಭಿವದ್ಧಿಗೆ 3400 ಕೋಟಿಗಳನ್ನು ನೀಡಲಾಗಿದೆ. ಅನಿಲ್ ಕುಮಾರ್ ಅವರು ಉತ್ತಮವಾಗಿ ತಾಲ್ಲೂಕಿನ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದೆ ರೀತಿ ಅಭಿವೃದ್ದಿ ಮಾಡಲು ಮುಂದೆಯೂ ತಮ್ಮ ಅವಕಾಶ ಅತಿ ಮುಖ್ಯ. ಗ್ಯಾರೆಂಟಿ ಯೋಜನೆಗಳು ಜನರ ಜೀವನ ಮಟ್ಟವನ್ನು ಸುಧಾರಿಸಿವೆ. ಗ್ಯಾರೆಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿಸಿರುವ ಹಾದಿಯಲ್ಲಿ ನಾವು ನಡೆಯಬೇಕು. ನಾವು ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಬೆಳೆಯಬೇಕು. ನಾವು ಹಿಂದೆ ಕಳೆದುಕೊಂಡ ಎಲ್ಲಾ ಹಕ್ಕುಗಳನ್ನು ನಾವು ಪಡೆಯಲು ಶಿಕ್ಷಣವನ್ನು ಪಡೆಯಬೇಕು. ಹಾಂಡ್ಪೋಸ್ಟ್ ನಿಂದ ಬಾವಲಿ ವರೆಗೆ ರಸ್ತೆ ಅಗಲೀಕರಣಕ್ಕೆ ಕಳೆದ ಬಾರಿ ಅನುಧಾನ ನೀಡಲಾಗಿತ್ತು ಆದರೆ ತಾಂತ್ರಿಕ ಕಾರಣಗಳಿಂದ ರಸ್ತೆ ಆಗಿಲ್ಲ. ಈ ಬಾರಿ ಆಗುತ್ತದೆ ತಾಲ್ಲೂಕಿನ ಎಲ್ಲಾ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹೆಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಅವರು ಮಾತನಾಡಿ ನಾನು ಇಂದು ಇಲ್ಲಿ ನಿಂತು ಭಾಷಣ ಮಾಡಲು ಕಾರಣ ಡಾ. ಬಿ. ಆರ್ ಅಂಬೇಡ್ಕರ್. ನಮ್ಮ ತಾಲ್ಲೂಕಿಗೆ ಅತಿ ಹೆಚ್ಚು ಅನುಧಾನ ನೀಡಿದ್ದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು. ನಮ್ಮ ತಾಲ್ಲೂಕಿಗೆ ಡಬಲ್ ರಸ್ತೆಗೆ ಮನವಿ ಮಾಡಲಾಗಿದೆ. ಇದಕ್ಕೆ 300 ಕೋಟಿ ಅನುದಾನವನ್ನು ನೀಡಿದ್ದಾರೆ. ನಮ್ಮ ತಾಲ್ಲೂಕಿಗೆ ಹೆಚ್ಚು ಗಾಮೆರ್ಂಟ್ಸ್ ಗಳು ಹಾಗೂ ಕಾರ್ಖಾನೆಗಳು ಬೇಕು. ಇದರಿಂದ ಇಲ್ಲಿನ ಜನರಿಗೆ ಉದ್ಯೋಗಗಳು ದೊರೆಯುತ್ತವೆ. ನಮ್ಮ ತಾಲ್ಲೂಕಿನಲ್ಲಿ ಹೆಚ್ಚು ಎಸ್ಸಿ / ಎಸ್ಟಿ ಜನಸಂಖ್ಯೆ ಇದ್ದು ಇಲ್ಲಿಗೆ ಎಸ್ ಸಿ ಪಿ ಹಾಗೂ ಟಿ ಎಸ್ ಪಿ. ಅನುದಾನ ನೀಡಬೇಕು. ತಾಲ್ಲೂಕಿಗೆ 5 ಎಕರೆ ಜಾಗ ನೀಡಿ ಅಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.
ಚಾಮರಾಜನಗರ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಹಲವಾರು ಡಿಗ್ರಿ ಗಳನ್ನು ಪಡೆದರು. ಇವರು ತಮ್ಮ ಜ್ಞಾನಕ್ಕೆ ಐμÁರಾಮಿ ಜೀವನ ನಡೆಸಬಹುದಿತ್ತು. ಆದರೆ ಅವರು ಐμÁರಾಮಿ ಜೀವನಕ್ಕೆ ಆಸೆ ಪಡದೇ ನೊಂದವರ ಬಡವರ ಪರ ಹೋರಾಟ ಮಾಡಿದರು. ಅವರು ಭಾರತಕ್ಕೆ ಶ್ರೇಷ್ಟವಾದ ಸಂವಿಧಾನವನ್ನು ನೀಡಿದರು. ಮಹಿಳೆಯರಿಗೆ ಸಮಾನತೆಯನ್ನು ನೀಡಬೇಕು ಎಂದು ಹೋರಾಟ ಮಾಡಿದರು. ಕಾರ್ಮಿಕರ ಪರ ಹೋರಾಟ ಮಾಡಿ ದಿನಕ್ಕೆ 8 ಗಂಟೆಗಳು ಮಾತ್ರ ಕೆಲಸ ಮಾಡಬೇಕು ಅಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಪ್ರತಿಪಾದಿಸಿದರು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ ರವಿಶಂಕರ್, ಗುಂಡ್ಲು ಪೇಟೆ ಶಾಸಕರಾದ ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ, ಡಿ ತಿಮ್ಮಯ್ಯ, ಗ್ಯಾರೆಂಟಿ ಯೋಜನೆಗಳ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್ ಯುಕೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.