ಐಐಎಸ್ಸಿ, ಐಐಟಿ ಮಾದರಿ ಸಂಸ್ಥೆಗಳಿಂದ ಪರಿಶೀಲನೆ

BANGALURU:

Font size:

ಎಲ್ಲ ಕೈಗಾರಿಕೆಗಳ ಮಾಲಿನ್ಯ ಅಧ್ಯಯನಕ್ಕೆ ಸೂಚನೆ: ಎಂ ಬಿ ಪಾಟೀಲ

ಬೆಂಗಳೂರು: ರಾಜ್ಯದ ಎಲ್ಲಾ 215 ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಕೈಗಾರಿಕೆಗಳಿಂದ ಉಂಟಾಗುತ್ತಿರುವ ವಿವಿಧ ರೀತಿಯ ಮಾಲಿನ್ಯ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಐಐಟಿ ತರಹದ ಉನ್ನತ ಮಟ್ಟದ ಸಂಸ್ಥೆಗಳಿಂದ ವಿಸ್ತೃತ ಅಧ್ಯಯನ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಅವರು ಸೋಮವಾರ ಸಭೆ ನಡೆಸಿದರು.

ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯಮ‌ ನಡೆಸಲು ಅನುಮತಿ ನಡೆಸುವಾಗ ಸರಕಾರವು ಹಲವು ಮಾನದಂಡಗಳನ್ನು ನೀಡಿರುತ್ತದೆ. ಆದರೆ ನಂತರದ ದಿನಗಳಲ್ಲಿ ಏನಾಗುತ್ತದೆ ಎನ್ನುವುದರ ಪರಿಶೀಲನೆ‌ ಕೂಡ ಅಗತ್ಯ. ಉದ್ಯಮಗಳನ್ನು ಬೆಳೆಸುವ ಜೊತೆಯಲ್ಲೇ ನಾವು ನೆಲ, ಜಲ, ವಾಯು, ಕೃಷಿ ಮತ್ತು ಮನುಷ್ಯರ ಮೇಲಾಗುತ್ತಿರುವ ಪರಿಣಾಮಗಳನ್ನೂ ಅಧ್ಯಯನ ಮಾಡಿ, ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಅವರು ತಿಳಿಸಿದ್ದಾರೆ.

ಈ‌ ನಿಟ್ಟಿನಲ್ಲಿ ಕೈಗಾರಿಕಾ ಮಾಲಿನ್ಯ ಕುರಿತು ಉನ್ನತ ಮಟ್ಟದ ತಂಡಗಳಿಂದ ಅಧ್ಯಯನ ನಡೆಸಲಾಗುವುದು. ಈ ತಂಡಗಳು ಎಲ್ಲಾ ಕೈಗಾರಿಕಾ ಪ್ರದೇಶಗಳಿಗೂ ಖುದ್ದು ಭೇಟಿ ನೀಡಲಿವೆ. ಜತೆಗೆ ಮಾಲಿನ್ಯದ ತೀವ್ರತೆ ಆಧರಿಸಿ, ಆಯಾ ಉದ್ಯಮಗಳು ಯಾವ ಬಗೆಯ ಪರಿಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವುದನ್ನೂ ಈ ಸಮಿತಿಯೇ ತಿಳಿಸಲಿದೆ ಎಂದು ಅವರು ವಿವರಿಸಿದ್ದಾರೆ.

ಈ ಉದ್ದೇಶಕ್ಕಾಗಿ ಸೂಕ್ತ ಸಂಸ್ಥೆಯನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ತಂಡಗಳು ನಿರ್ದಿಷ್ಟ ಕಾಲಮಿತಿಯಲ್ಲಿ ತಮ್ಮ ವರದಿ ಸಲ್ಲಿಸುವಂತೆ ಸೂಚಿಸಬೇಕು ಅವರು ಸಲಹೆ ನೀಡಿದ್ದಾರೆ.

ಸಭೆಯಲ್ಲಿ ಸಚಿವರ ತಾಂತ್ರಿಕ ಸಲಹೆಗಾರ ಡಾ.ಅರವಿಂದ ಗಲಗಲಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Prev Post ಹಾಸನದಲ್ಲಿ ಏ.12, 13ಕ್ಕೆ ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಟ್
Next Post ಪೊಲೀಸ್ ಭದ್ರತೆ ನಡುವೆ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗೆ ಮುತ್ತಿಕ್ಕಿದ ಯುವಕ