*ವಚನ ದರ್ಶನ: ಸತ್ಯ v/s ಮಿಥ್ಯ' ಕೃತಿ ಬಿಡುಗಡೆ ಸಮಾರಂಭ
*ವಚನ ದರ್ಶನ: ಸತ್ಯ v/s ಮಿಥ್ಯ' ಕೃತಿ ಬಿಡುಗಡೆ ಸಮಾರಂಭ*
*ಲಿಂಗಾಯತರನ್ನು ಒಡೆದು ಆಳುವ ಅಜೆಂಡಾ ಇದೆ: ಎಂ ಬಿ ಪಾಟೀಲ*
ಬೆಂಗಳೂರು: ರಾಜ್ಯದಲ್ಲಿ ಲಿಂಗಾಯತರನ್ನು ಒಡೆದು ಆಳುವ ಒಂದು ಅಜೆಂಡಾ ಕೆಲಸ ಮಾಡುತ್ತಿದೆ. 'ವಚನ ದರ್ಶನ' ಪುಸ್ತಕವು ಇದರ ಭಾಗವಾಗಿದೆ. ಇದಕ್ಕೆ ಸಮುದಾಯವು ಸಂಘಟಿತವಾಗಿ ಮತ್ತು ಸತ್ಯಪಕ್ಷಪಾತಿಯಾಗಿ ಉತ್ತರಿಸಬೇಕಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಾಧ್ಯಕ್ಷರೂ ಆದ ಬೃಹತ್ ಕೈಗಾರಿಕ ಸಚಿವ ಎಂ ಬಿ ಪಾಟೀಲ ಗುರುವಾರ ಹೇಳಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ ಜಂಟಿಯಾಗಿ ಇಲ್ಲಿನ ಬಸವ ಸಮಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ 'ವಚನ ದರ್ಶನ: ಸತ್ಯ v/s ಮಿಥ್ಯ' ಕೃತಿ ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ವಚನಗಳು ಬರದೆ ಇದ್ದಿದ್ದರೆ ಇಂದು ನಾವ್ಯಾರೂ ಇರುತ್ತಿರಲಿಲ್ಲ. ವಚನಗಳ ಬಗೆಗಿನ ಚರ್ಚೆಯನ್ನು ನಾವು ವಿರೋಧಿಸುವುದಿಲ್ಲ. ಆದರೆ ಅದರ ಹಿಂದೆ ಇರುವ ಕೆಟ್ಟ ಅಜೆಂಡಾವನ್ನು ನಾವು ಸಹಿಸುವುದಿಲ್ಲ. ಈ ನಿಟ್ಟಿನಲ್ಲಿ ಲಿಂಗಾಯತ ಸ್ವಾಮೀಜಿಗಳು ಮತ್ತು ಮಠಗಳು ಮಾಡಬೇಕಾದ ಕೆಲಸ ಅಗಾಧವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ವಚನಗಳ ಸ್ವೋಪಜ್ಞತೆಯನ್ನು ವಿರೋಧಿಸುವ ವಚನ ದರ್ಶನ ಪುಸ್ತಕಕ್ಕೆ ಲೇಖನ ಬರೆದಿರುವವರೂ ಲಿಂಗಾಯತರೇ. ಅದರ ಬಿಡುಗಡೆ ಕಾರ್ಯಕ್ರಮಗಳು ನಡೆದಿರುವುದು ಕೂಡ ಲಿಂಗಾಯತರ ಮಠಗಳಲ್ಲೇ. ಆದರೆ ಅದನ್ನು ಬಿಡುಗಡೆ ಮಾಡಿದವರು ಮಾತ್ರ ಲಿಂಗಾಯತರಲ್ಲ. ಇದು ರಾಜ್ಯದಲ್ಲಿ ಸಮುದಾಯದ ಅವಸ್ಥೆಯಾಗಿದೆ ಎಂದು ಅವರು ವಿಷಾದಿಸಿದರು.
ಒಕ್ಕಲಿಗರಲ್ಲಿ 104 ಉಪಪಂಗಡಗಳಿದ್ದರೂ ಅವರಲ್ಲಿ ಒಡಕಿಲ್ಲ. ಆ ಸಮುದಾಯಕ್ಕೆ ಒಬ್ಬರೇ ಸ್ವಾಮೀಜಿ ಮತ್ತು ಒಂದೇ ಅಧಿಕಾರ ಕೇಂದ್ರವಿದೆ. ಆದರೆ ಲಿಂಗಾಯತರು ಉಪಪಂಗಡಗಳ ಕಿತ್ತಾಟದಲ್ಲಿ ಹರಿದು ಹಂಚಿಹೋಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಲಿಂಗಾಯತರ ಜನಸಂಖ್ಯೆ 2 ಕೋಟಿಯಷ್ಟಿದೆ. ಆದರೆ ಉಪಪಂಗಡಗಳ ಕಚ್ಚಾಟದಿಂದ ಜಾತಿ ಗಣತಿಯಲ್ಲಿ ನಮ್ಮ ಜನಸಂಖ್ಯೆ 65 ಲಕ್ಷವಷ್ಟೆ ಇದೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಇದಕ್ಕೆ ಮತ್ತೊಂದು ಜಾತಿಗಣತಿ ಉತ್ತರವಲ್ಲ. ಇಡೀ ವೀರಶೈವ ಲಿಂಗಾಯತರೆಲ್ಲ ಒಂದೇ ಶೀರ್ಷಿಕೆಯಡಿ ಬರಬೇಕು. ಆಗ ಮಾತ್ರ ಸಮುದಾಯದ ಯುವಜನರಿಗೆ ಮೀಸಲಾತಿ ಸಿಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, 'ಲಿಂಗಾಯತ ಸಮುದಾಯದಲ್ಲಿ ಉಪಪಂಗಡಗಳ ಮೇಲಾಟ ಕೊನೆಯಾಗದೆ ಇದ್ದರೆ ಉಳಿಗಾಲವಿಲ್ಲ. ಅಂತಹ ಪ್ರಯತ್ನ ಇಂದು ಆರಂಭವಾಗಿದೆಯಷ್ಟೆ. ಸಮುದಾಯದ ಒಳಗೆ ಇರುವ ವ್ಯತ್ಯಾಸಗಳು ಇನ್ನು ಇರಬಾರದು' ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವರುದ್ರ ಮಹಾಸ್ವಾಮೀಜಿ, ಗಂಗಾ ಮಾತಾಜಿ, ಪ್ರಭು ಚನ್ನಬಸವ ಸ್ವಾಮಿಗಳು, ಶಾಮನೂರು ಶಿವಶಂಕರಪ್ಪ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ,
ಸಾಹಿತಿ ಗೊ ರು ಚನ್ನಬಸಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ್, ಲೇಖಕ ಟಿ ಆರ್ ಚಂದ್ರಶೇಖರ್, ಪ್ರೊ.ವೀರಭದ್ರಯ್ಯ ಮುಂತಾದವರು ಭಾಗವಹಿಸಿದ್ದರು.








