ಸಮಾಜ ಸೇವಾ ಕಾರ್ಯಕ್ಕೆ ವಿದಾಯ ಘೋಷಿಸಿದ ಡಾ. ಕನ್ಯಾನ ಸದಾಶಿವ ಶೆಟ್ಟಿ
From Jayaram Udupi
ಮಂಗಳೂರು:
ಇತ್ತೀಚಿನ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮನ ನೊಂದು ಸಮಾಜ ಸೇವಾ ಕಾರ್ಯಗಳಿಗೆ ಮುಂಬಯಿಯ ಉದ್ಯಮಿ ಹಾಗು ದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿ ವಿದಾಯ ಘೋಷಿಸಿದ್ದಾರೆ.
ಮಂಗಳೂರಿನಲ್ಲಿ ಈ ಕುರಿತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಜಾಗತಿಕ ಬಂಟರ ಸಂಘದ ಲೆಕ್ಕ ಪತ್ರ ತಾನು ಕೇಳಿದ್ದು ತಪ್ಪು ಎಂದು ಬಿಂಬಿಸಿ ತೇಜೋವಧೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕೋಲು ಕೊಟ್ಟು ಪೆಟ್ಟು ತಿನ್ನುವ ಪರಿಸ್ಥಿತಿ ಬಂದಿದೆ. ಸಮಾಜ ಸೇವೆ ತಾನು ಇಷ್ಟಪಟ್ಟು ಕೈಗೊಂಡ ಕಾರ್ಯವಾಗಿತ್ತು.ಬಡತನದಲ್ಲಿದ್ದ ನಾನು ಅದನ್ನು ಮೀರಲು ಪರ ಊರಿಗೆ ಹೋಗಿ ಉದ್ಯೋಗಕ್ಕೆ ತೊಡಗಿ ಬಳಿಕ ಉದ್ಯಮ ಕಟ್ಟಿದೆ. ಕಳೆದ ಆರು ವರ್ಷಗಳಿಂದ ಸಮಾಜ ಸೇವಾ ಕೆಲಸಕ್ಕೆ ತೊಡಗಿಕೊಂಡೆ. ಇದು ನನಗೆ ಆತ್ಮತೃಪ್ತಿ ತರುತ್ತಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳು ನನ್ನ ನೆಮ್ಮದಿ ಕೆಡಿಸಿವೆ ಎಂದೂ ಡಾ.ಕನ್ಯಾನ ಹೇಳಿದ್ದಾರೆ.
ದಾನ ಕೊಟ್ಟವರಿಗೆ ಲೆಕ್ಕ ಕೇಳುವ ಹಕ್ಕೂ ಇಲ್ಲವೇ ಎಂದು ಪ್ರಶ್ನಿಸಿರುವ ಅವರು ಫೆಬ್ರವರಿ ಹದಿನಾರರಂದು ಮುಂಬಯಿಯಲ್ಲಿ ಕರೆದಿರುವ ಸಭೆ ಎಲ್ಲ ದಾನಿಗಳು ಸೇರಿ ಕರೆದ ಸಭೆಯಾಗಿದೆ. ಇದಕ್ಕೆ ಸಂಬಂಧಿಸಿ ಜಾಹೀರಾತು ನೀಡಿ ಲಾಯರ್ ನೋಟೀಸು ಕಳುಹಿಸುವ ಕೆಲಸಕ್ಕೆ ಮುಂದಾಗಿರುವುದು ಯಾವ ರೀತಿಯಿಂದಲೂ ಸಮಂಜಸ ಅಲ್ಲ ಎಂದೂ ಡಾ.ಕನ್ಯಾನ ವಿಷಾದದಿಂದ ಹೇಳಿದ್ದಾರೆ.
ತಮ್ಮ ವಿರುದ್ಧ ಮಾನಹಾನಿಕಾರಕ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದ್ದು ಅವುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಅವರು ಎಚ್ಚರಿಸಿದ್ದಾರೆ. ಈಗಾಗಲೇ ಕೇರಳದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದಿರುವ ಅವರು ಸಂಘ ಸಂಸ್ಥೆಗಳಿಗೆ ಫೆಬ್ರವರಿ ಹದಿನಾಲ್ಕು, ಶನಿವಾರದಿಂದ ದೇಣಿಗೆ ವಾಗ್ದಾನ ಸ್ಥಗಿತಗೊಳಿಸಿರುವುದಾಗಿಯೂ ಹೇಳಿದ್ದಾರೆ.
ವೈಯಕ್ತಿಕ ನೆಲೆಯಲ್ಲಿ ಆರೋಗ್ಯಕ್ಕೆ, ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿ ಬರುವ ಅರ್ಜಿಗಳನ್ನು ಪರಿಶೀಲಿಸಿ ನೆರವು ವಿತರಣೆ ಮುಂದುವರೆಸುವುದಾಗಿಯೂ ಅವರು ಹೇಳಿದ್ದಾರೆ.





