ರಾಜಧಾನಿಯಲ್ಲಿ 2ನೇ ವಿಮಾನ ನಿಲ್ದಾಣದ ವಿಚಾರ 2-3 ದಿನಗಳಲ್ಲಿ ಎಎಐ ವರದಿ: ಎಂ ಬಿ ಪಾಟೀಲ

Banglore:

Font size:

ರಾಜಧಾನಿಯಲ್ಲಿ 2ನೇ ವಿಮಾನ ನಿಲ್ದಾಣದ ವಿಚಾರ 2-3 ದಿನಗಳಲ್ಲಿ ಎಎಐ ವರದಿ: ಎಂ ಬಿ ಪಾಟೀಲ

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಎರಡನೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಇನ್ನು 2-3 ದಿನಗಳಲ್ಲಿ ವರದಿ ಕೊಡಲಿದೆ. ಇದಾದ ನಂತರ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ‌ ಬಿ ಪಾಟೀಲ ಗುರುವಾರ ಹೇಳಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎರಡನೆಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಮಗೆ 2033ರವರೆಗೂ ನಿರ್ಬಂಧವಿದೆ. ಆದರೆ, ಈಗಿನಿಂದಲೇ ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸಿದರೆ ಅಷ್ಟು ಹೊತ್ತಿಗೆ ಮುಗಿಸಬಹುದು. ಒಂದು ವಿಮಾನ ನಿಲ್ದಾಣ ನಿರ್ಮಿಸಲು ಕನಿಷ್ಠ ಪಕ್ಷ ಐದಾರು ವರ್ಷಗಳಾದರೂ ಹಿಡಿಯುತ್ತದೆ ಎಂದಿದ್ದಾರೆ.

ಎಎಐ ತಾನು ಪರಿಶೀಲಿಸಿರುವ ಎರಡು ಸ್ಥಳಗಳಿಗೂ ಹಸಿರು ನಿಶಾನೆ ತೋರಿಸಬಹುದು. ನಾವೂ ಒಂದು ಕಡೆ ಐದಾರು ಸಾವಿರ ಎಕರೆ ಭೂಮಿ ಕೊಡಬಹುದು. ಆದರೆ ವಿಮಾನ‌ ನಿಲ್ದಾಣ ನಿರ್ಮಾಣ ಸಂಸ್ಥೆಗಳು ಇದು ಆರ್ಥಿಕವಾಗಿ ಲಾಭದಾಯಕವೇ ಎನ್ನುವಂತಹ ಅಂಶಗಳನ್ನು ನೋಡುತ್ತವೆ. ಇದೊಂದು ಜಟಿಲವಾದ ಕೆಲಸ ಎನ್ನುವುದು ನನಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ದೇಶದಲ್ಲಿ ಹೊಸದೆಹಲಿ (ನೋಯಿಡಾ) ಮತ್ತು ಮುಂಬೈ (ನವೀಮುಂಬೈ) ನಗರಗಳು ಮಾತ್ರ ಎರಡೆರಡು ವಿಮಾನ ನಿಲ್ದಾಣ ಹೊಂದಿವೆ. ಆ ವಿಮಾನ‌‌ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಿದ ಸಂಸ್ಥೆಗಳ ಜತೆಯೂ ನಾವು ಮಾತನಾಡುತ್ತೇವೆ. ತಮಿಳುನಾಡು ಸರಕಾರವು ಹೊಸೂರಿನಲ್ಲಿ ವಿಮಾನ‌ ನಿಲ್ದಾಣ ನಿರ್ಮಿಸಲಿರುವ ವಿಚಾರವೂ ಗಮನದಲ್ಲಿದೆ ಎಂದು ಅವರು ವಿವರಿಸಿದ್ದಾರೆ.

ಉತ್ತರ ಕರ್ನಾಟಕದ ಶಾಸಕರು ತುಮಕೂರಿಗೆ ಸಮೀಪದಲ್ಲಿ ವಿಮಾನ‌ ನಿಲ್ದಾಣ ಬರಲಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಈ ಯೋಜನೆ ಬಂದರೆ ಅನುಕೂಲ ಎನ್ನುತ್ತಿದ್ದಾರೆ. ಪ್ರಯಾಣಿಕರ ದಟ್ಟಣೆ, ಕೈಗಾರಿಕಾ ಅಗತ್ಯ ಇತ್ಯಾದಿಗಳು ಇದರಲ್ಲಿ ಪರಿಗಣನೆಗೆ ಬರಲಿವೆ. ಒಟ್ಟಿನಲ್ಲಿ ಇದರಲ್ಲಿ ವಶೀಲಿಬಾಜಿಯ ಪ್ರಶ್ನೆ ಇಲ್ಲ. ಅಗತ್ಯ ಮತ್ತು ಅನುಕೂಲ ಎರಡನ್ನೂ ನೋಡಲಾಗುವುದು ಎಂದು ಪಾಟೀಲ ಸ್ಪಷ್ಟಪಡಿಸಿದ್ದಾರೆ.

Prev Post ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಚಿತ್ರಗಳು ನಿರ್ಮಾಣವಾಗಲಿ; ಹೆಚ್.ಡಿ. ಕುಮಾರಸ್ವಾಮಿ
Next Post ಕಿತ್ತೂರು ರಾಣಿ ಚೆನ್ನಮ್ಮ (೧೭೭೮-೧೮೨೯)