ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರದ ಪ್ಯಾಕೇಜ್- ರಾಜ್ಯ ಸರಕಾರಕ್ಕೆ ಎನ್.ರವಿಕುಮಾರ್ ಆಗ್ರಹ

Banglore:

Font size:

ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರದ ಪ್ಯಾಕೇಜ್- ರಾಜ್ಯ ಸರಕಾರಕ್ಕೆ ಎನ್.ರವಿಕುಮಾರ್ ಆಗ್ರಹ

ಬೆಂಗಳೂರು: ಬೆಳೆಹಾನಿಯಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಪರಿಹಾರದ ಪ್ಯಾಕೇಜ್ ಪ್ರಕಟಿಸುವಂತೆ ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಆಗ್ರಹಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ತಂಡವು ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು ಪ್ರವಾಸ ಮಾಡುತ್ತಿದೆ. ಯಾವಾಗ ಬಿಜೆಪಿ ಪ್ರವಾಸ ಮಾಡಿತೋ, ಇನ್ನು ಕಾರಿನಲ್ಲಿ ಹೋಗಲಾಗದೆಂದು ಭಾವಿಸಿ, ವೈಮಾನಿಕ ಸಮೀಕ್ಷೆಯನ್ನು ಈ ಸರಕಾರ ಮಾಡುತ್ತಿದೆ. ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲಾ ಸಚಿವರಿಗೆ ಸಮಯವೇ ಇಲ್ಲ. ಅವರೂ ವೈಮಾನಿಕ ಸಮೀಕ್ಷೆ ಮಾಡುತ್ತಿದ್ದಾರೆ. ಇದು ರಾಜ್ಯದ ದುರಂತ ಪರಿಸ್ಥಿತಿ ಎಂದು ಟೀಕಿಸಿದರು.
ಅದ್ಯಾವ ರೈತರ ಬಳಿ ಮನವಿ ಸ್ವೀಕರಿಸುತ್ತಾರೋ, ಯಾವ ರೈತರನ್ನು ಭೇಟಿ ಮಾಡಿದ್ದಾರೋ ಗೊತ್ತಿಲ್ಲ. ಬಿಜೆಪಿ ಹಿಂದಿನಿಂದಲೂ ರೈತರ ಪರ ಇರುವ ಪಕ್ಷ. ನಾವು ನೇರವಾಗಿ ಭೇಟಿ ಮಾಡಿ ಅಹವಾಲು ಸ್ವೀಕರಿಸಿ, ಅವನ್ನು ಸರಕಾರಕ್ಕೆ ಕೊಡುತ್ತೇವೆ. ಆರ್.ಅಶೋಕ ಅವರ ತಂಡವು ಅ. 3 ಮತ್ತು 4ರಂದು ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಬಿಜಾಪುರಕ್ಕೆ ತೆರಳಲಿದೆ. ಬೆಳೆನಾಶದ ಅಧ್ಯಯನ ಮಾಡಲಿದ್ದಾರೆ ಎಂದು ಹೇಳಿದರು.
ಸರಕಾರ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ಆಕ್ಷೇಪಿಸಿ ಧಾರವಾಡದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನಿರುದ್ಯೋಗಿಗಳು ಹೋರಾಟ ಮಾಡಿದ್ದರು. ಯಾವುದೇ ಇಲಾಖೆ ನೋಡಿದರೂ ಹುದ್ದೆಗಳು ಖಾಲಿ ಇವೆ. ಇದರ ಪರಿಣಾಮವಾಗಿ ಸರಕಾರದ ವಿರುದ್ಧ ಹೋರಾಟ ನಡೆದಿದೆ. ಇವತ್ತು ಬಿಜಾಪುರದಲ್ಲೂ ಅಷ್ಟೇ ಪ್ರಮಾಣದಲ್ಲಿ ನಿರುದ್ಯೋಗಿ ಯುವಜನರು ಹೋರಾಟ ಮಾಡುತ್ತಿದ್ದಾರೆ. ಅವರ ಕಣ್ಣೊರೆಸುವ ತಂತ್ರವಾಗಿ ವಯಸ್ಸಿನ ಪರಿಮಿತಿಯನ್ನು 3 ವರ್ಷಕ್ಕೆ ಹೆಚ್ಚಿಸಿದ್ದಾರೆ; ಯುವಜನರು, ವಿದ್ಯಾರ್ಥಿಗಳು ಅದನ್ನು 5 ವರ್ಷಕ್ಕೆ ಏರಿಸಲು ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು.
ಸರಕಾರವು ನಿರುದ್ಯೋಗಿ ಯುವಜನರ ಬೇಡಿಕೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಇಲ್ಲವಾದರೆ ಕರ್ನಾಟಕದಲ್ಲಿ ಬಿಜೆಪಿಯ ಎಲ್ಲ ಶಾಸಕರು, ಸಂಸದರು ಸೇರಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪೂರ್ವತಯಾರಿ ಮಾಡಿ ಚೆನ್ನಾಗಿ ಸರ್ವೇ ಮಾಡಿ
ರಾಜ್ಯದಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವಿಕೆಯ ಸಮೀಕ್ಷೆಯನ್ನು ಸರಕಾರ ಮಾಡುತ್ತಿದೆ. ಕೆಇಬಿಯ ಯುಎಚ್‍ಐಡಿ ಸಂಖ್ಯೆ ಕೊಟ್ಟು, ಅದರ ಆಧಾರದಲ್ಲಿ ಶಿಕ್ಷಕರು ಮನೆಗಳಿಗೆ ಹೋಗುತ್ತಿದ್ದಾರೆ. ಆ ಶಿಕ್ಷಕರಿಗೆ ಹೋಗಬೇಕಾದ ಮನೆಗಳೇ ಸಿಗುತ್ತಿಲ್ಲ ಎಂದು ಗಮನ ಸೆಳೆದರು. ಅನೇಕ ಜನ ಶಿಕ್ಷಕರು ಬೇಸತ್ತು ಹೋಗಿದ್ದಾರೆ ಎಂದು ತಿಳಿಸಿದರು. ಒಬ್ಬ ಶಿಕ್ಷಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅನೇಕ ಶಿಕ್ಷಕರಿಗೆ ಅನಾರೋಗ್ಯ ಇದ್ದರೂ ಸರಕಾರ ಸರ್ವೇಕ್ಷಣೆ ಮಾಡಲೇಬೇಕೆಂದು ಸೂಚಿಸಿದೆ ಎಂದು ಆಕ್ಷೇಪಿಸಿದರು.
8 ದಿನ ಆದರೂ ಸರ್ವೇಕ್ಷಣೆ ಮನೆಗಳ ಸಂಖ್ಯೆ ಕೇವಲ 30 ಲಕ್ಷ ದಾಟಿದೆ. ಬೆಂಗಳೂರಿನಲ್ಲಿ ಇನ್ನೂ ಆರಂಭವಾಗಿಲ್ಲ; ಸಮರ್ಪಕ ತಯಾರಿ ಮಾಡಿರಲಿಲ್ಲ; ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್- ಹೀಗೆ 46 ಹೊಸ ಜಾತಿಗಳನ್ನು ಸೇರಿಸಿ ವಿಪರೀತ ಗೊಂದಲಕ್ಕೆ ಸರಕಾರ ಕಾರಣವಾಗಿತ್ತು. ಕೊನೆಗೆ ಬೇಸತ್ತು ವಾಪಸ್ ಪಡೆದಿದ್ದರು ಎಂದು ತಿಳಿಸಿದರು. ಸರ್ವೇ ವೈಫಲ್ಯ ಗಮನಿಸಿ, ಬಿಜೆಪಿ ವಿರೋಧದ ನೆಪ ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಸರ್ವೇಗೆ ನಮ್ಮ ವಿರೋಧವಿಲ್ಲ; ಪೂರ್ವತಯಾರಿ ಮಾಡಿ ಚೆನ್ನಾಗಿ ಸರ್ವೇ ಮಾಡಿ. ಶಿಕ್ಷಕರಿಗೆ ಸಮರ್ಪಕ ವಿಳಾಸ ಕೊಡಿ ಎಂದು ಒತ್ತಾಯಿಸಿದರು. ಸತತ ಬೆಲೆ ಏರಿಕೆ ಮಾಡುವ ಇದು ರೈತವಿರೋಧಿ, ವಿದ್ಯಾರ್ಥಿ ವಿರೋಧಿ ಸರಕಾರ ಎಂದು ದೂರಿದರು.
ಸರಳ ಜಿಎಸ್‍ಟಿ ಕಾರಣಕ್ಕೆ ದೇಶದ ಇತರ ರಾಜ್ಯಗಳಲ್ಲಿ ಹಾಲಿನ ದರ ಕಡಿಮೆ ಆಗಿದೆ. ಕರ್ನಾಟಕದಲ್ಲಿ ಹಾಲಿನ ದರ ಇಳಿಸಿಲ್ಲ; ಹಾಲು, ಆಲ್ಕೋಹಾಲಿನ ದರವನ್ನು 3 ಸಾರಿ ಹೆಚ್ಚಿಸಿದ್ದಾರೆ. ಪೆಟ್ರೋಲ್, ಡೀಸೆಲ್ ದರ 3 ಬಾರಿ ಹೆಚ್ಚಿಸಿದ್ದಾರೆ. ಬಸ್, ಮೆಟ್ರೋ ಪ್ರಯಾಣ ದರ ಏರಿಕೆ, ನೋಂದಣಿ ಶುಲ್ಕ ಹೆಚ್ಚಳ ಮಾಡಿದ್ದಾರೆ. ಕೇಂದ್ರ ಸರಕಾರ ಬೆಲೆಗಳನ್ನು ನಿಯಂತ್ರಣದಲ್ಲಿ ಇಡುವುದಲ್ಲದೇ, ಬೆಲೆಗಳನ್ನು ಕಡಿಮೆ ಮಾಡಲು ತೆರಿಗೆ ಇಳಿಸುವ ಕ್ರಾಂತಿಕಾರಿ ನಿರ್ಧಾರ ಮಾಡಿದೆ ಎಂದು ವಿವರಿಸಿದರು.

Prev Post ಕುಮಾರಸ್ವಾಮಿ ಜೊತೆ ಬಹಿರಂಗ ಚರ್ಚೆಗೆ ನಾನು ಸಿದ್ಧ, ಮಾಧ್ಯಮಗಳೇ ವೇದಿಕೆ ಕಲ್ಪಿಸಲಿ: ಡಿ.ಕೆ. ಶಿವಕುಮಾರ್ ಸವಾಲು
Next Post ಗಣತಿ ವಿಷಯದಲ್ಲಿ ಗೊಂದಲ ಹೆಚ್ಚಳ: ವಿಜಯೇಂದ್ರ