ಪ್ರಧಾನಮಂತ್ರಿ ಮೋದಿಯವರಿಂದ ಯೆಲ್ಲೋ ಮೆಟ್ರೊ ಲೈನ್ ಆ. 10ರಂದು ಲೋಕಾರ್ಪಣೆ: ಬಿ.ವೈ.ವಿಜಯೇಂದ್ರ

BANGALORE:

Font size:

ಪ್ರಧಾನಮಂತ್ರಿ ಮೋದಿಯವರಿಂದ ಯೆಲ್ಲೋ ಮೆಟ್ರೊ ಲೈನ್ ಆ. 10ರಂದು ಲೋಕಾರ್ಪಣೆ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಬಹಳ ದಿನಗಳ ಕನಸು, ಬೆಂಗಳೂರಿನ ಹಳದಿ (ಯೆಲ್ಲೋ) ಮೆಟ್ರೋ ಲೈನ್ ಅನ್ನು ಇದೇ 10ರಂದು ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯೆಲ್ಲೋ ಲೈನ್ ಕನಿಷ್ಠ 8 ಲಕ್ಷ ಜನರಿಗೆ ಅನುಕೂಲ ಒದಗಿಸಲಿದೆ. ಪ್ರಧಾನಿಯವರು ಬೆಳಿಗ್ಗೆ ಬೆಂಗಳೂರಿಗೆ ಬರಲಿದ್ದು, ಹೆಲಿಕಾಪ್ಟರ್ ಮೂಲಕ ಮೇಖ್ರಿ ವೃತ್ತದ ಬಳಿ ಇರುವ ಮಿಲಿಟರಿ ಮೈದಾನಕ್ಕೆ ಆಗಮಿಸುವರು. ಬಳಿಕ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ ಮೂಲಕ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‍ಗೆ ಬಂದು ತಲುಪುವರು. ಅಲ್ಲಿ ಬೆಂಗಳೂರು- ಬೆಳಗಾವಿ ನಡುವಿನ ವಂದೇ ಭಾರತ್ ರೈಲಿನ ಉದ್ಘಾಟನೆ ನೆರವೇರಿಸುವರು ಎಂದು ವಿವರಿಸಿದರು.
ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‍ನಿಂದ ಸೌತ್ ಎಂಡ್ ವೃತ್ತದ ಮೂಲಕ ರಾಗಿಗುಡ್ಡ ತಲುಪುವರು. ಇಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್‍ನಲ್ಲೂ ಕಾರ್ಯಕ್ರಮ ಇದೆ. ಪ್ರಧಾನಿಯವರು ಬರುವ ಸಂದರ್ಭವನ್ನು ಬೆಂಗಳೂರಿನ ಮಹಾಜನತೆ ಕಾತುರದಿಂದ ಕಾಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರೂ ಪ್ರಧಾನಿಯವರನ್ನು ಬಹಳ ಸಂತೋಷದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗುವ ನಿಟ್ಟಿನಲ್ಲಿ ಬೆಂಗಳೂರಿನ ಮಹಾಜನತೆ ಕೈಜೋಡಿಸಬೇಕೆಂದು ವಿನಂತಿಸಿದರು.
ಮೆಟ್ರೊ ಕಾಮಗಾರಿಯು ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಇದ್ದಾಗ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ವೇಗ ಪಡೆದಿತ್ತು. ಈಗ ಬೆಂಗಳೂರಿನಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಇದೆ ಎಂದು ವಿಶ್ಲೇಷಿಸಿದರು. ಭಾರತದ ಪ್ರಧಾನಮಂತ್ರಿಯವರು ಮೆಟ್ರೊ ಲೋಕಾರ್ಪಣೆಗೆ ಬರುತ್ತಿದ್ದಾರೆ ಎಂಬುದನ್ನು ಡಿ.ಕೆ.ಶಿವಕುಮಾರ್ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನೆಗೆ ಉತ್ತರಿಸಿದರು.

ಪ್ರಧಾನಿಯವರ ಸ್ವಾಗತಕ್ಕೆ ಬಿಜೆಪಿ ಸಿದ್ಧತೆ..
ಪ್ರಧಾನಿಯವರನ್ನು ಬೆಂಗಳೂರಿನ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸೌತ್‍ಎಂಡ್ ಸರ್ಕಲ್, ರಾಗೀಗುಡ್ಡ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್‍ಗಳ ಬಳಿ ಮತ್ತು ಮೆಟ್ರೋ ಹಳದಿ ಮಾರ್ಗದ ಎಲ್ಲ ಮೆಟ್ರೋ ಸ್ಟೇಷನ್‍ಗಳಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಮಾನ್ಯ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ ಎಂದು ವಿಜಯೇಂದ್ರ ಅವರು ತಿಳಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎಸ್.ಆರ್.ವಿಶ್ವನಾಥ್, ಸಿ.ಕೆ.ರಾಮಮೂರ್ತಿ, ಎಸ್. ಮುನಿರಾಜು ಅವರು ಉಪಸ್ಥಿತರಿದ್ದರು

Prev Post ಬೆಂಗಳೂರು ಭೇಟಿಗಾಗಿ ಆಗಮಿಸಿದ ಫಿಲಿಪೈನ್ಸ್ ದೇಶದ ಅಧ್ಯಕ್ಷ ಪರ್ಡಿನ್ಯಾಂಡ್ ರೊಮುಡ್ಜ್ ಮಾರ್ಕೋಸ್ ಜ್ಯೂನಿಯರ್ - ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಂದ ಆತ್ಮೀಯ ಸ್ವಾಗತ
Next Post ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 07-08-2025 ರಂದು ನಡೆದ ಸಚಿವ ಸಂಪುಟಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು