113 ವರ್ಷದ ಇತಿಹಾಸವಿರುವ ಎಂ. ಸಿ.ಸಿ. ಬ್ಯಾಂಕಿನ 20 ನೇ ಶಾಖೆ ಆಗಸ್ಟ್ 3 ರಂದು ಬೈಂದೂರಿನಲ್ಲಿ ಉದ್ಘಾಟನೆ.

Mangalore:

Font size:

113 ವರ್ಷದ ಇತಿಹಾಸವಿರುವ ಎಂ. ಸಿ.ಸಿ. ಬ್ಯಾಂಕಿನ 20 ನೇ ಶಾಖೆ ಆಗಸ್ಟ್ 3 ರಂದು ಬೈಂದೂರಿನಲ್ಲಿ ಉದ್ಘಾಟನೆ.

From Jayram Udupi

ಮಂಗಳೂರು :

113 ವರ್ಷದ ಇತಿಹಾಸವಿರುವ ಎಂ. ಸಿ.ಸಿ. ಬ್ಯಾಂಕಿನ 20 ನೇ ಶಾಖೆ ಆಗಸ್ಟ್ 3 ರಂದು ಬೈಂದೂರಿನಲ್ಲಿ ಉದ್ಘಾಟನೆಯಾಗಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಮಂಗಳೂರಿನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಮ್.ಸಿ.ಸಿ ಬ್ಯಾಂಕ್ 2025 ರ ಮಾರ್ಚಿಗೆ ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾಪನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ‌ ಎಂದು ಅವರು ವಿವರಿಸಿದರು.

ಕೇವಲ ಕರ್ನಾಟಕದ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಪ್ರಸ್ತುತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಸಂತರ ಇಡೀ ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಿದೆ. ಎಮ್.ಸಿ.ಸಿ. ಬ್ಯಾಂಕ್ ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇತರ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ ಗಳಲ್ಲಿ ಲಭ್ಯವಿರುವ ಎಲ್ಲಾ ಸೇವೆ ಮತ್ತು ಸೌಲಭ್ಯಗಳು ಎಮ್.ಸಿ.ಸಿ. ಬ್ಯಾಂಕಿನಲ್ಲಿ ದೊರೆಯುತ್ತಿವೆ. ಬ್ಯಾಂಕ್ ಕರ್ನಾಟಕ ರಾಜ್ಯದಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದೆ ಎಂದರು.

ಮಂಗಳೂರಿನಲ್ಲಿ ನವೀಕೃತಗೊಂಡ ಸುಸಜ್ಜಿತ ಆಡಳಿತ ಕಛೇರಿಯೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 19 ಶಾಖೆಗಳನ್ನು ಹೊಂದಿದೆ ಎಂದವರು ಹೇಳಿದರು.

ಸಹಕಾರ ರತ್ನ ಅನಿಲ್ ಲೋಬೊರವರ ಆಡಳಿತ ಮಂಡಳಿಯು 2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 2018ರಿಂದ 2025ರ ವಿತ್ತೀಯ ವರ್ಷದಲ್ಲಿ ಅಭೂತಪೂರ್ವ ಪ್ರಗತಿಯನ್ನು ದಾಖಲಿಸಿದೆ. ರೂ. 304 ಕೋಟಿ ಇದ್ದ ಬ್ಯಾಂಕಿನ ಠೇವಣಿಯು 2025ರಲ್ಲಿ ರೂ. 728 ಕೋಟಿಗೆ ತಲುಪಿದ್ದು, ಶೇಕಡಾ 139ರಷ್ಟು ಪ್ರಗತಿಯನ್ನು ದಾಖಲಿಸಿದೆ. ರೂ. 191 ಕೋಟಿ ಇದ್ದ ಸಾಲ ಮತ್ತು ಮುಂಗಡಗಳು ರೂ. 572 ಕೋಟಿಗೆ ತಲುಪಿದ್ದು, ಶೇಕಡಾ 199ರಷ್ಟು ಪ್ರಗತಿಯನ್ನು ದಾಖಲಿಸಿದೆ. ರೂ. 13 ಕೋಟಿ ಇದ್ದ ಪಾಲು ಬಂಡವಾಳ ರೂ. 33 ಕೋಟಿಗೆ ತಲುಪಿದ್ದು, ಶೇಕಡಾ 154ರಷ್ಟು ಪ್ರಗತಿಯನ್ನು ದಾಖಲಿಸಿದೆ. ಬ್ಯಾಂಕಿನ ರಿಸರ್ವ್ ರೂ. 29 ಕೋಟಿಯಿಂದ ರೂ. 79 ಕೋಟಿಗೆ ತಲುಪಿದ್ದು, ಶೇಕಡಾ 172ರಷ್ಟು ಪ್ರಗತಿಯನ್ನು ದಾಖಲಿಸಿದೆ. ರೂ. 496 ಕೋಟಿ ಇದ್ದ ವ್ಯವಹಾರ ರೂ. 1300 ಕೋಟಿಗೆ ತಲುಪಿದ್ದು, ಶೇಕಡಾ 162ರಷ್ಟು ಪ್ರಗತಿಯನ್ನು ದಾಖಲಿಸಿದೆ. ಶೇಕಡಾ 11.70 ಇದ್ದ ಬ್ಯಾಂಕಿನ CRAR (Capital to Risk Assets Ratio) ಪ್ರಮಾಣವು ಶೇಕಡಾ 19.82 ತಲುಪಿದ್ದು ಶೇಕಡಾ 62 ರಷ್ಟು ಪ್ರಗತಿಯನ್ನು ದಾಖಲಿಸಿದೆ ಎಂದೂ ಅವರು ತಿಳಿಸಿದರು.ಶೇಕಡಾ 0.56 ಇದ್ದ ಬ್ಯಾಂಕಿನ ರಿಟರ್ನ್ ಆನ್ ಅಸೆಟ್ಸ್ ಮೌಲ್ಯವು ಶೇಕಡಾ 1.40 ಗೆ ತಲುಪಿ ಶೇಕಡಾ 150 ಪ್ರಗತಿಯನ್ನು ದಾಖಲಿಸಿದೆ ಎಂದರು.

ಬ್ಯಾಂಕಿನ ಪ್ರಗತಿಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಸಮರ್ಥ ಆಡಳಿತ ಮಂಡಳಿ, ಅದಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದ ಶ್ರಮ ಹಾಗೂ ಬ್ಯಾಂಕಿನ ಆರ್ಥಿಕ ಪ್ರಗತಿಯತ್ತ ಗಮನಹರಿಸಿ ಕಾರ್ಯಯೋಜನೆಯನ್ನು ಹಮ್ಮಿಕೊಂಡಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕಿನ ಎಲ್ಲಾ ಮಾನದಂಡಗಳನ್ನು ಪೂರೈಸಿ ಎಮ್.ಸಿ.ಸಿ. ಬ್ಯಾಂಕ್ 22 ವರ್ಷಗಳ ನಂತರ ಬ್ರಹ್ಮಾವರ, ಬೆಳ್ತಂಗಡಿ ಮತ್ತು ಬೆಳ್ಳಣ್‌ನಲ್ಲಿ ಮೂರು ಶಾಖೆಗಳನ್ನು ತೆರೆದಿದೆ. ಬೈಂದೂರಿನಲ್ಲಿ ತನ್ನ 20ನೇ ಶಾಖೆಯನ್ನು ದಿನಾಂಕ 03.08.2025ರಂದು ಉದ್ಘಾಟಿಸಲಿದೆ ಎಂದ ಅವರು ಮುಂದುವರಿದು ಅಕ್ಟೋಬರ್ 5, 2025 ರಂದು 21ನೇ ಶಾಖೆಯನ್ನು ಸಂತೆಕಟ್ಟೆಯಲ್ಲಿ ತೆರೆಯಲಾಗುವುದು ಎಂದು ತಿಳಿಸಿದರು.

ಬೈಂದೂರು ಶಾಖೆಯ ಉದ್ಘಾಟಣನಾ ಕಾರ್ಯಕ್ರಮದಲ್ಲಿ ಬೈಂದೂರಿನ ಹೋಲಿ ಕ್ರಾಸ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ವಿನ್ಸೆಂಟ್ ಕುವೆಲ್ಲೊ , ಶಾಸಕ ಶ್ರೀ ಗುರುರಾಜ್ ಗಂಟಿಹೊಳೆ , ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರಿನ ಆಡಳಿತ ಧರ್ಮದರ್ಶಿ ಶ್ರೀ ಬಾಬು ಶೆಟ್ಟಿ, ಬೈಂದೂರು ಕೇಂಟ್ ಥಾಮಸ್ ರೆಸಿಡೆನ್ಸಿಯಲ್ ಸ್ಕೂಲ್ ಪ್ರಾಂಶುಪಾಲ ವಂದನೀಯ ಫಿಲಿಪ್ ನೆಲಿದಿಲ್ಲ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ರಾಜು , ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಶ್ರೀ ಸದಾಶಿವ ಡಿ. ಪಡುವರಿ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ಕಾಪ್ಪಿನೂರ್ ಮೊಹಮ್ಮದ್, ನಾಡದೋಣಿ ರಾಜ್ಯ ಸಂಘದ ಅಧ್ಯಕ್ಷ ಶ್ರೀ ನಾಗೇಶ್ ಖಾರ್ವಿ, ಬೈಂದೂರಿನ ವಕೀಲರ ಸಂಘದ ಅಧ್ಯಕ್ಷ ಶ್ರೀ ಮೋಬಿ ಪಿ.ಸಿ. ಭಾಗವಹಿಸಲಿದ್ದಾರೆ.

ಇದರ ಜೊತೆಗೆ, 09.08.2025ರಂದು ಬೆಳ್ಳಣ್ ನಲ್ಲಿ 9ನೇ ಎಟಿಎಮ್. 10.08.2025ರಂದು ಸುರತ್ಕಲ್‌ ನಲ್ಲಿ 10ನೇ ಎಟಿಎಮ್. 17.08.2025ರಂದು ಕುಲಶೇಖರ ಶಾಖೆಯ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮತ್ತು ಉದ್ಘಾಟನೆ ಹಾಗೂ 11ನೇ ಎಟಿಎಮ್ ಉದ್ಘಾಟನೆ, 14.09.2025ರಂದು ಕಿನ್ನಿಗೋಳಿಯಲ್ಲಿ 12ನೇ ಎಟಿಎಮ್, 27.09.2025ರಂದು ಉಡುಪಿ ಶಾಖೆಯಲ್ಲಿ 13ನೇ ಎಟಿಎಮ್, ಮತ್ತು 05.10.2025ರಂದು 14ನೇ ಎಟಿಎಮ್ ಸಂತೆಕಟ್ಟೆಯಲ್ಲಿ ಉದ್ಘಾಟನೆಗೊಳ್ಳಲಿದೆ.

ಪ್ರಸ್ತುತ ಬ್ಯಾಂಕಿನಲ್ಲಿ ಗ್ರಾಹಕರಿಗೆ ಕಡಿಮೆ ಬಾಡಿಗೆ ದರದಲ್ಲಿ ಲಾಕರ್ ಸೌಲಭ್ಯ, ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ದೇಶ ವಿದೇಶ ವಿಧ್ಯಾ ಭವಿಷ್ಯ ಶಿಕ್ಷಣ ಸಾಲ, ಎಮ್.ಎಸ್.ಎಮ್.ಇ ವ್ಯವಹಾರ ಸಾಲ, ವಾಹನ ಸಾಲ, ವಸತಿ ಸಾಲ, ಮನೆ ಖರೀದಿ, ದುರಸ್ತಿ, ಮದುವೆ, ಗ್ರಹ ಉಪಯೋಗಿ ವಸ್ತು ಖರೀದಿ ಸಾಲವನ್ನು ತ್ವರಿತವಾಗಿ ನೀಡುತ್ತಿದೆ. ಸೇವಾ ಶುಲ್ಕವಿಲ್ಲದೆ ಚಿನ್ನಾಭರಣ ಸಾಲವನ್ನು ನೀಡುತ್ತಿದೆ. ಎಟಿಎಮ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದೆ. ಬ್ಯಾಂಕಿನಲ್ಲಿರುವ ಠೇವಣಿಗಳಿಗೆ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳಂತೆಯೇ ಭಾರತೀಯ ರಿಸರ್ವ್ ಬ್ಯಾಂಕಿನ ಡಿಪಾಜಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ (DICGC) ವಿಮಾ ಸೌಲಭ್ಯವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿ'ಸಿಲ್ವಾ , ಅಂದ್ರೂ ಡಿಸೋಜಾ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜಾ, ಕಿರಣ್ ಕ್ರಾಸ್ಪೋ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ದಾನ್ಹಾ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜಾ, ಆಲ್ವಿನ್ ಮೊಂತೇರೊ, ಫೆಲಿಕ್ಸ್ ಡಿ'ಕ್ರೂಜ್, ಶರ್ಮಿಳಾ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.

Prev Post 12ರಂದು ಸಾಧಕ ಯುವಜನರಿಗೆ ಕಲಾಂ ಯುವ ಸ್ಟಾರ್ಟಪ್ ಪ್ರಶಸ್ತಿ ಪ್ರದಾನ: ಜಮಾಲ್ ಸಿದ್ದಿಕಿ
Next Post ಸ್ಪೇಸ್‌ ಪಾರ್ಕ್‌ ಸಹಿತ ಹಲವು ಯೋಜನೆಗಳಿಗೆ ವಿಶೇಷ ಪ್ರೋತ್ಸಾಹನಾ ನೀತಿ, ವಾರದಲ್ಲಿ ಸಿಎಂ ಜತೆ ಚರ್ಚೆ