"ಇಡಿ ಇಲಾಖೆಯನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿರುವ ಬಿಜೆಪಿ ದೇಶದ ಸಂವಿಧಾನವನ್ನು ಗಾಳಿಗೆ ತೂರಿದೆ; ಐವನ್ ಡಿಸೋಜಾ
FRom Jayaram Udupi
ಮಂಗಳೂರು:
"ಇಡಿ ಇಲಾಖೆಯನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿರುವ ಬಿಜೆಪಿ ದೇಶದ ಸಂವಿಧಾನವನ್ನು ಗಾಳಿಗೆ ತೂರಿದೆ. ಬಿಜೆಪಿಗೆ ದೇಶದಲ್ಲಿ ಆಡಳಿತ ನಡೆಸಲು ಅರ್ಹತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಐವನ್ ಡಿಸೋಜಾ ಅವರು ಸುಪ್ರೀಂ ಕೋರ್ಟ್ ಇಡಿ ದುರ್ಬಳಕೆ ಮಾಡಿರುವುದನ್ನು ಹೇಳಿದ್ದರಿಂದ ಈ ಸಂಗತಿ ಜಗಜ್ಜಾಹೀರಾಗಿದೆ ಎಂದರು.
ಇಡಿಯನ್ನು ಮುಂದಿಟ್ಟುಕೊಂಡು ಮುಡಾ ಹಗರಣದಲ್ಲಿ ಮುಖ್ಯಮಂತ್ರಿಯವರ ಶ್ರೀಮತಿಯವರ ಹೆಸರನ್ನು ದುರ್ಬಳಕೆ ಮಾಡಲಾಯಿತು. ಮುಡಾ ಪ್ರಕರಣದಲ್ಲಿ ಮನಿ ಲಾಂಡ್ರಿಂಗ್ ನಡೆದಿಲ್ಲ, ಹಣ ತೆಗೆದುಕೊಂಡ ದೂರಿಲ್ಲ ಹೀಗಿರುವಾಗ ಮುಖ್ಯಮಂತ್ರಿಯವರ ಶ್ರೀಮತಿ ವಿರುದ್ಧ ಆರೋಪ ಮಾಡಿದ್ದು ಹೇಗೆ? ಎಂದವರು ಪ್ರಶ್ನಿಸಿದರು.
ಸಿವಿಲ್ ಪ್ರಕರಣದಲ್ಲಿ ಇಡಿ ಮಧ್ಯಪ್ರವೇಶ ಮಾಡುವ ಹಕ್ಕು ಹೊಂದಿಲ್ಲ . ಇದನ್ನು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಹೀಗಿರುವಾಗ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಡಾ. ಜಿ. ಪರಮೇಶ್ವರ್ ವಿರುದ್ಧ ಇಡಿ ತನಿಖೆ ಹೇಗೆ ಆಯ್ತು? ಇ.ಡಿ ದುರ್ಬಳಕೆ ಮಾಡಿರುವ ಕೇಂದ್ರ ಸರಕಾರದ ವಿರುದ್ಧ ಕೋರ್ಟ್ ಮೆಟ್ಟಿಲು ಏರುತ್ತೇವೆ. ಇದಕ್ಕೆ ದೇಶದ ಗೃಹ ಸಚಿವ ಮತ್ತು ಪ್ರಧಾನಿ ಅವರೇ ನೇರ ಹೊಣೆ" ಎಂದು ಐವನ್ ಡಿಸೋಜ ಆಕ್ರೋಶದಿಂದ ನುಡಿದರು.
"ನಾವು ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತೇವೆ, ಈಗ ನಡೆಯುತ್ತಿರುವ ಸಂಸತ್ ಕಲಾಪದಲ್ಲಿ ಈ ಕುರಿತ ಚರ್ಚೆಗೆ ಅವಕಾಶ ನೀಡಬೇಕು. ಜೆಡಿಎಸ್ ಬಿಜೆಪಿ, ನಾಯಕರು ಮಾನ ಮರ್ಯಾದೆ ಇದ್ದರೆ ಕ್ಷಮೆ ಯಾಚಿಸಬೇಕು, ಅಧಿಕಾರದಲ್ಲಿ ಇದ್ದವರು ರಾಜೀನಾಮೆ ನೀಡಬೇಕು" ಎಂದರು.