ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿರುವ ಸುಳ್ಳು ಸುದ್ದಿ ಹಾಗೂ ದ್ವೇಷ ಭಾಷಣಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಇದೇ ಅಧಿವೇಶದಲ್ಲಿ ಹೊಸ ಕಾನೂನು
From Jayaram Udupi
ಮಂಗಳೂರು: ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿರುವ ಸುಳ್ಳು ಸುದ್ದಿ ಹಾಗೂ ದ್ವೇಷ ಭಾಷಣಗಳಿಗೆ
ಸಂಪೂರ್ಣ ಕಡಿವಾಣ ಹಾಕಲು ಇದೇ ಅಧಿವೇಶದಲ್ಲಿ ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು
ಗೃಹ ಸಚಿವ ಡಾ.ಪರಮೇಶ್ವರ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ ಶಾಂತಿ
ಸೌಹಾರ್ದ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಕೆಲವು ಸಮಯದಿಂದ ಕರಾವಳಿಯಲ್ಲಿ ಶಾಂತಿ ಕದಡುವ ವಾತಾವರಣ ಕಂಡುಬಂದಿದ್ದು,
ಅದನ್ನು ನಿಯಂತ್ರಣಕ್ಕೆ ತರಲಾಗಿದೆ. ಮುಂದೆ ಅಂತಹ ಘಟನೆಗಳು ಮರುಕಳಿಸದೆ, ಸೌಹಾರ್ದತೆಯ
ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲರೂ
ಭಾಗವಹಿಸಿ, ಸಲಹೆಗಳನ್ನು ನೀಡುವ ಮೂಲಕ ಯಶಸ್ವಿಗೊಳಿಸಲಾಗಿದೆ. ಇಲ್ಲಿ ಪ್ರಸ್ತಾಪಗೊಂಡ
ವಿಚಾರಗಳನ್ನು ಮುಖ್ಯಮಂತ್ರಿ, ಸಂಬಂಧಿತ ಸಚಿವರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ
ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಡಾ.ಪರಮೇಶ್ವರ ಹೇಳಿದರು.
ಅಕ್ರಮ ಗೋ ಸಾಗಾಟ, ಗೋ ಹತ್ಯೆಗೆ ಸಂಬಂಧಿಸಿ ಈಗಾಗಲೇ ಇರುವ ಕಾನೂನನ್ನು ಅವಶ್ಯವಾದರೆ
ಬಲಪಡಿಸಲಾಗುವುದು. ಕಾನೂನು ಪ್ರಕಾರ ಏನೇ ನಡೆದರೂ ನಾವು ಮಾತನಾಡುವುದಿಲ್ಲ. ಆದರೆ
ಉಲ್ಲಂಘನೆ ಆದರೆ ಬಿಡುವುದಿಲ್ಲ. ಗೋ ಸಾಗಾಟದ ಹೆಸರಿನಲ್ಲಿ ಪೊಲೀಸ್ಗಿರಿ ಮಾಡಬಾರದು.
ಅಕ್ರಮಗಳು ನಡೆಯುತ್ತಿದ್ದರೆ ಅದ್ನು ಪೊಲೀಸರಿಗೆ ತಿಳಿಸಿ. ಕಾನೂನು
ಕೈಗೆತ್ತಿಕೊಳ್ಳಬೇಡಿ ಎಂದು ಅವರು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಕರಾವಳಿಯ ಜನಪ್ರತಿನಿಧಿಗಳ ಜೊತೆ ಪ್ರತ್ಯೇಕ ಸಭೆ ನಡೆಸಲಾಗುವುದು.
ಉಡ್ತಾ ಪಂಜಾಬ್ ರೀತಿ ಕರ್ನಾಟಕ ಆಗಬಾರದು ಎಂಬ ದಿಶೆಯಲ್ಲಿ ರಾಜ್ಯದಲ್ಲಿ ಡ್ರಗ್ಸ್
ವಿರುದ್ಧ ಸರ್ಕಾರ ಸಮರ ಸಾರಿದೆ. ದ.ಕ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 2.50
ಕೋಟಿ ರು.ಗಳ 500 ಕೇಜಿಯಷ್ಟು ಮಾದಕದ್ರವ್ಯಗಳನ್ನು ವಶಪಡಿಸಲಾಗಿದೆ. ಮಂಗಳೂರು
ಪೊಲೀಸರು ಬೆಂಗಳೂರಲ್ಲಿ 80 ಕೋಟಿ ರು. ಮೌಲ್ಯದ ಡ್ರಗ್ಸ್ ಪತ್ತೆ ಮಾಡಿದ್ದಾರೆ.
ಡ್ರಗ್ಸ್ ಜಾಲವನ್ನು ಬೇಧಿಸಿ, ಅದನ್ನು ಮಟ್ಟಹಾಕುವುದರಲ್ಲಿ ಹಿಂದೇಟು ಹಾಕುವುದಿಲ್ಲ.
ಪೊಲೀಸ್ ಇಲಾಖೆ ತನ್ನ ಕೆಲಸ ಮಾಡುತ್ತಿದೆ. ಜೊತೆಗೆ ಜನರು ಕೂಡಾ ತಮ್ಮ ಜವಾಬ್ಧಾರಿ
ನಿರ್ವಹಿಸಬೇಕು ಎಂದರು.
ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್ ವಿರೋಧಿ ಸಮಿತಿ ರಚಿಸಿ:
ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್ ವಿರೋಧಿ ಸಮಿತಿ ರಚಿಸುವಂತೆ ಈಗಾಗಲೇ
ಸೂಚನೆ ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಪೊಲೀಸರಿಗೂ ಸೂಚಿಸಲಾಗಿದೆ.
ಆ್ಯಂಟಿ ರ್ಯಾಗಿಂಗ್ ಮಾದರಿಯಲ್ಲಿ ಆ್ಯಂಟಿ ಡ್ರಗ್ಸ್ ಸಮಿತಿ ರಚಿಸುವುದು
ಕಡ್ಡಾಯವಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಸೌಹಾರ್ದ ಸಮಿತಿ ರಚನೆ ಬಗ್ಗೆ
ಉಸ್ತುವಾರಿ ಸಚಿವರು ಸಾಧಕ, ಬಾಧಕ ಬಗ್ಗೆ ಚರ್ಚಿಸಿ ತೀರ್ಮಾನಿಸಲಿದ್ದಾರೆ. ಸರ್ವಪಕ್ಷ,
ಸಮುದಾಯಗಳು, ನಾಗರಿಕರು ಸೇರಿ ಜಿಲ್ಲಾ ಮಟ್ಟದಲ್ಲಿ ಬೃಹತ್ ಸೌಹಾರ್ದ ಸಮಾವೇಶ ನಡೆಸಲು
ಯಾವುದೇ ಅಭ್ಯಂತರ ಇಲ್ಲ ಎಂದರು.
ಕರಾವಳಿಯಲ್ಲಿ ಶಾಂತಿಯ ವಾತಾವರಣ ಬರಬೇಕು. ಭಯದ ವಾತಾವರಣ ದೂರವಾಗಬೇಕು. ಅಹಿತಕರ ಘಟನೆ
ಕಾರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅನಿವಾರ್ಯತೆ ಬರಲೇ ಬಾರದು. ಈಗಾಗಲೇ
ಪೊಲೀಸ್ ಅಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ.
ಶಾಂತಿ ಕದಡುವ ಮೂಲಕ ಮತ್ತಷ್ಟು ಕಠಿಣ ಕ್ರಮಕ್ಕೆ ಅವಕಾಶ ನೀಡಬಾರದು. ಈ ಹಿಂದಿನಂತೆ
ಕರಾವಳಿಯಲ್ಲಿ ಸೌಹಾರ್ದತೆ ಮರಳಬೇಕು ಎಂದು ಸಚಿವರು ಹೇಳಿದರು.
ಮರಳು ಮತ್ತು ಕೆಂಪು ಕಲ್ಲಿನ ಕೊರತೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಭೆ
ನಡೆಸಿದ್ದಾರೆ ಎಂದು ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ಡಾ.ಪರಮೇಶ್ವರ
ಪ್ರತಿಕ್ರಿಯಿಸಿದರು.
ಪಕ್ಷದ ಕೆಲವು ಶಾಸಕರ ಹೇಳಿಕೆಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ
ಅವರು, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕೆಲವು ಶಾಸಕರು ಅವರ
ಕ್ಷೇತ್ರದ ವಿಚಾರದಲ್ಲಿ ಮಾತ್ರ ಮಾತನಾಡಿದ್ದಾರೆ. ಕ್ಷೇತ್ರಕ್ಕೆ ಹಣ ಬಿಡುಗಡೆ
ಆಗಿಲ್ಲ ಎಂಬ ಅವರ ಅನಿಸಿಕೆ ಹೇಳಿದ್ದಾರೆ ಎಂದರು.
ನಮ್ಮ ಗಮನಕ್ಕೆ ಬಂದಿಲ್ಲ
ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತಿರುವುದಾಗಿ ಅನಾಮಧೇಯ
ವ್ಯಕ್ತಿಯೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದು ನೀಡಿರುವ ದೂರಿನ
ವಿಚಾರ ಗಮನಕ್ಕೆ ಬಂದಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಪೊಲೀಸ್ ಠಾಣೆಗಳಿಗೆ
ಬರುವ ದಿನನಿತ್ಯದ ದೂರುಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲ. ನಮಗೆ ಆ ವಿಚಾರ
ಬಂದಿಲ್ಲ. ಠಾಣೆಗಳಲ್ಲಿ ಎಫ್ಐಆರ್ ಆದಾಗ ಪೊಲೀಸ್ ಅಧಿಕಾರಿಗಳು ಆ ಬಗ್ಗೆ ಕ್ರಮ
ವಹಿಸುತ್ತಾರೆ. ಸರ್ಕಾರದ ಗಮನ ಸೆಳೆಯುವ ವಿಚಾರವಾದಾಗ ನಮ್ಮ ಗಮನಕ್ಕೆ ಬರುತ್ತದೆ ಎಂದು
ಗೃಹ ಸಚಿವ ಡಾ. ಪರಮೇಶ್ವರ್ ಸ್ಪಷ್ಟಪಡಿಸಿದರು.
ಸಿಎಂ ಬದಲಾವಣೆ ವಿಚಾರ-ಗೊತ್ತಿಲ್ಲ!
ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಗೊತ್ತಿಲ್ಲ
ಎಂದಷ್ಟೇ ಉತ್ತರಿಸಿದ ಡಾ.ಪರಮೇಶ್ವರ, ಸಿಎಂ ಮತ್ತು ಡಿಸಿಎಂ ದೆಹಲಿ ಭೇಟಿಯೂ
ಗೊತ್ತಿಲ್ಲ, ಅವರನ್ನೇ ಕೇಳಿ ಎಂದರು. ಪಕ್ಷದಲ್ಲಿ ಸಿಎಂ ಬದಲಾವಣೆ ಕುರಿತ ಹೇಳಿಕೆ
ಹಾಗೂ ಸಿಎಂ ಸ್ಥಾನಕ್ಕೆ ನಿಮ್ಮ ಹೆಸರು ಕೂಡ ಪ್ರಸ್ತಾಪವಾಗುತ್ತಿದೆ ಎಂಬ ಮಾತಿಗೂ
ಡಾ.ಪರಮೇಶ್ವರ ಅವರ ಉತ್ತರ-ಗೊತ್ತಿಲ್ಲ, ಅದನ್ನು ಬಿಟ್ಟು ಬೇರೆ ಕೇಳಿ ಎಂಬುದಾಗಿತ್ತು
--