ಗ್ಯಾರಂಟಿ ಬಂಡವಾಳ ಹೊರತುಪಡಿಸಿ ಬೇರೆ ಸಾಧನೆ ಇಲ್ಲ- ಎಚ್.ಡಿ.ಕುಮಾರಸ್ವಾಮಿ
ದಾವಣಗೆರೆ: 5 ಗ್ಯಾರಂಟಿಗಳ ಬಂಡವಾಳ ಹೊರತುಪಡಿಸಿ ಕಳೆದ ಸುಮಾರು 3 ವರ್ಷದಲ್ಲಿ ಯಾವುದೇ ಸಾಧನೆ ಆಗಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿಕೆ ಗಮನಿಸಿದರೆ, ದೃಶ್ಯ ಮಾಧ್ಯಮಗಳನ್ನು ಗಮನಿಸುತ್ತ ಸಾಗಿದರೆ ಗ್ಯಾರಂಟಿ ಬಿಟ್ಟು ಬೇರೆ ಸಾಧನೆಯನ್ನು ಹುಡುಕಲು ಸಾಧ್ಯವಿಲ್ಲ ಎಂದು ನುಡಿದರು. ರಾಜ್ಯದ ಮುಖ್ಯಮಂತ್ರಿಗಳೂ ಬಿಜೆಪಿ ಬಗ್ಗೆ ಮುಖ್ಯಮಂತ್ರಿ ಪದವಿಯ ಘನತೆಗೆ ಮೀರಿ ಪದ ಬಳಸುವುದನ್ನು ನಾವು ಗಮನಿಸಿದ್ದೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಕುರ್ಚಿಗೆ ಪ್ರಾಮುಖ್ಯತೆ ಕೊಟ್ಟದ್ದನ್ನು ಹೊರತುಪಡಿಸಿದರೆ, ಭ್ರಷ್ಟಾಚಾರಕ್ಕೆ ಪ್ರೇರಣೆ ಕೊಟ್ಟ ಘಟನೆಗಳನ್ನು ನಾವು ಕಾಣುತ್ತಿದ್ದೇವೆ ಎಂದು ವಿವರಿಸಿದರು. ಅಹಿಂದ ವರ್ಗದ ನಾಯಕ ನಾನು, ಅಹಿಂದ ವರ್ಗದ ಜನತೆಗೆ ದೊಡ್ಡ ಕೊಡುಗೆ ಕೊಟ್ಟಿದ್ದಾಗಿ ಹೇಳುತ್ತಾರೆ. ವಾಲ್ಮೀಕಿ ನಿಗಮದ್ದೇ ಹೇಳುವುದಾದರೆ, ಅಲ್ಲಿ ಲೂಟಿ ಹೊಡೆದುದನ್ನು ಮುಖ್ಯಮಂತ್ರಿಯೇ ಸದನದಲ್ಲಿ ಒಪ್ಪಿದ್ದಾರೆ. ನೀವು ಹೇಳಿದಷ್ಟು ದುಡ್ಡು ಹೊಡೆದಿಲ್ಲ; ಆದರೆ, ದುಡ್ಡು ಹೊಡೆದುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು.
ಗಂಗಾ ಕಲ್ಯಾಣ ಯೋಜನೆಯಲ್ಲೂ ಲೂಟಿ ಆಗಿದೆ..
ಬಡವರಿಗೆ ಕೊಡುವ ಗಂಗಾ ಕಲ್ಯಾಣ ಯೋಜನೆಯಲ್ಲೂ ಲೂಟಿ ಆಗಿದೆ. ಕಾಂತರಾಜು ವರದಿಯನ್ನು ಕುಮಾರಸ್ವಾಮಿ ತಡೆಹಿಡಿದರೆಂದು ಮುಖ್ಯಮಂತ್ರಿ ಹೇಳುತ್ತಾರೆ. ಕಾಂತರಾಜು- ಜಯಪ್ರಕಾಶ್ ಹೆಗ್ಡೆ ವರದಿ ಸ್ವೀಕರಿಸಿ ಎಷ್ಟು ತಿಂಗಳು, ಎಷ್ಟು ವರ್ಷಗಳಾಗಿವೆ? ಯಾತಕ್ಕೆ ಇನ್ನೂ ಅದನ್ನು ಕೋಲ್ಡ್ ಸ್ಟೋರೇಜ್ನಲ್ಲಿ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಅದನ್ನು ನೀವಿನ್ನೂ ಯಾಕೆ ಅನುಷ್ಠಾನ ಮಾಡಿಲ್ಲ ಎಂದು ಕೇಳಿದರು.
ಒಳ ಮೀಸಲಾತಿ ವಿಚಾರದಲ್ಲಿ ಮೌನವೇಕೆ?
ಒಳ ಮೀಸಲಾತಿ ವಿಚಾರದಲ್ಲಿ ಬೀದಿಯಲ್ಲಿ ಹಲವಾರು ಪ್ರತಿಭಟನೆಗಳು ನಡೆಯುತ್ತಿವೆ. ಯಾತಕ್ಕೆ ಮೌನವಾಗಿದ್ದೀರಿ ಎಂದು ಪ್ರಶ್ನೆ ಹಾಕಿದರು. ಗ್ಯಾರಂಟಿ ದೊಡ್ಡ ಸಾಧನೆಯೇನಲ್ಲ; ತುಳಿತಕ್ಕೆ ಒಳಗಾದವರನ್ನು ಮೇಲಕ್ಕೆ ತರಲು ಸ್ವಾತಂತ್ರ್ಯಾನಂತರ ಬೇಕಾದಷ್ಟು ಸ್ಕೀಂಗಳನ್ನು ತಂದಿದ್ದೇವೆ. ಇದು ಯಾರೂ ಮಾಡದ ಕಾರ್ಯಕ್ರಮ ಇದಲ್ಲ ಎಂದರು.
ತಲಾದಾಯದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಎನ್ನುತ್ತೀರಿ. ಹಾಗಿದ್ದರೆ, ಕರ್ನಾಟಕದ ಪ್ರತಿ ಕುಟುಂಬಗಳು ಆರ್ಥಿಕವಾಗಿ ಸದೃಢ ಎಂಬುದು ನಿಮ್ಮ ಹೇಳಿಕೆಯ ಅರ್ಥ. ಆರ್ಥಿಕ ಸುಭದ್ರತೆ ಇದ್ದರೆ 2 ಸಾವಿರ ಕೊಡುವ ಈ ರೀತಿಯ ಉಚಿತ ಗ್ಯಾರಂಟಿಗಳ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.






Comments
Leave a Comment