ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಕುಟುಂಬಕ್ಕೆ ೫೦ ಲಕ್ಷ ಪರಿಹಾರ
ಬೆಂಗಳೂರು, ಏ. 4 – ಕರ್ನಾಟಕ ಸರ್ಕಾರದ ಆರಕ್ಷಕ ಇಲಾಖೆಯು ಮಹತ್ವದ ಆದೇಶ ಹೊರಡಿಸಿದ್ದು, ಕರ್ತವ್ಯ ನಿರ್ವಹಿಸುತ್ತಿರುವಾಗ ಆಕಸ್ಮಿಕ ಅಥವಾ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕುಟುಂಬಗಳಿಗೆ ವಿಶೇಷ ಗುಂಪು ವಿಮಾ ಮೊತ್ತವಾಗಿ ರೂ. 50 ಲಕ್ಷ ಮಂಜೂರು ಮಾಡುವ ಪ್ರಕ್ರಿಯೆ ನಡೆದಿದೆ.
ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ರವರ ಕಾರ್ಯಾಲಯ ಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ವಿಜಯಪುರ, ಗದಗ, ಶಿವಮೊಗ್ಗ, ದಾವಣಗೆರೆ, ಹಾವೇರಿ, ಕೋಲಾರ, ಹಾಸನ, ರಾಮನಗರ ಮತ್ತು ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳಿಗೆ ಇದಕ್ಕೆ ಅಗತ್ಯ ದಾಖಲೆಗಳನ್ನು ಒಂದು ವಾರದಲ್ಲಿ ಸಲ್ಲಿಸುವಂತೆ ಸೂಚಿಸಿದೆ.
ಆದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅಪಘಾತಕ್ಕೊಳಗಾಗಿ ಮೃತಪಟ್ಟ 20ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹೆಸರು, ಠಾಣೆ, ಅಪಘಾತ ದಿನಾಂಕ ಹಾಗೂ ಮೃತ ದಿನಾಂಕಗಳನ್ನು ವಿವರಗಳನ್ನು
ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಅ ಪ್ರಕಾರ ಕರ್ತವ್ಯ ನಿರ್ವಹಿಸುತ್ತಿರುವಾಗ ಅಪಘಾತಕ್ಕೊಳಗಾಗಿ ಮೃತಪಟ್ಟ ಅಧಿಕಾರಿಗಳಾದ ಡಿವೈಎಸ್ಪಿ ಹರ್ಷವರ್ಧನ್, ಮಂಗಳೂರಿನ ಕಂಕನಾಡಿ ಠಾಣೆಯ ಹರೀಶ್ ಜಿ.ಎನ್, ವಿಜಯಪುರದ ಮಹಾದೇವಪ್ಪ ಬಿ. ದ್ಯಾಬೇರಿ, ದಾವಣಗೆರೆಯ ರಾಮಪ್ಪ ಪೂಜಾರ್, ಶಿವಮೊಗ್ಗದ ಬಸವರಾಜ್ ಬಿ.ಬಿ., ಗದಗದ ಕೆ.ಡಿ. ಹರಿವಾಣ, ತುಮಕೂರಿನ ವಿ. ಜಯದೀಪ್, ಬೆಂಗಳೂರಿನ ಮಾರುತಿ ಎಸ್. ನಾಟಿಕರ್, ರಾಮನಗರದ ಲಕ್ಷ್ಮಣ ಆರ್., ಹಾವೇರಿಯ ಸುನೀಲ ಕಿಳ್ಳಿಕ್ಯಾತರ, ಹುಬ್ಬಳ್ಳಿ-ಧಾರವಾಡದ ಶಿವಾನಂದ ಬಸಪ್ಪ, ಮೈಸೂರಿನ ಮಂಜುನಾಥ ಕೆ.ಸಿ., ಹಾಸನದ ಬೀರಲಿಂಗ, ಕೋಲಾರದ ಎಂ. ಆನಂದ್ ಬಾಬು, ಬೆಂಗಳೂರಿನ ಮಂಜುನಾಥ, ಅಮರೇಶ್ ಮತ್ತು ಸಚಿನ್ ಸೇರಿದಂತೆ ಹಲವರ ಹೆಸರುಗಳು ಪಟ್ಟಿಯಲ್ಲಿ ಸೇರಿವೆ.
ಮೃತರಾದ ಅಧಿಕಾರಿಗಳ ಕುಟುಂಬಗಳಿಗೆ ಪರಿಹಾರ ಬಿಡುಗಡೆ ಮಾಡಲು ಅಗತ್ಯ ದಾಖಲೆಗಳನ್ನು 7 ದಿನಗಳೊಳಗೆ ಸಲ್ಲಿಸುವಂತೆ ಕಚೇರಿಯಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಕ್ರಮವು ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಕುಟುಂಬಗಳಿಗೆ ಸರ್ಕಾರದಿಂದ ಭದ್ರತೆ ಒದಗಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಈ ಆದೇಶವು ಪೊಲೀಸ್ ಇಲಾಖೆಯ ಒಳಾಂಗಣ ವ್ಯವಸ್ಥೆಯಲ್ಲಿಯೂ ಮಹತ್ವ ಪಡೆದಿದ್ದು, ಅಧಿಕಾರಿಗಳ ಕುಟುಂಬಗಳಿಗೆ ತುರ್ತು ನೆರವು ತಲುಪುವಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೇರ ಸೂಚನೆ ನೀಡಲಾಗಿದೆ. ಇದರಿಂದಾಗಿ, ಕರ್ತವ್ಯ ನಿರ್ವಹಿಸುತ್ತಿರುವಾಗ ಜೀವ ತ್ಯಾಗ ಮಾಡಿದ ಅಧಿಕಾರಿಗಳ ಕುಟುಂಬಗಳಿಗೆ ಆರ್ಥಿಕ ಭದ್ರತೆ ದೊರಕಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.






Comments
Leave a Comment