ಕಂಠೀರವ ಸ್ಟುಡಿಯೋಸ್ ಆವರಣದಲ್ಲಿ ಟಿ.ಎಸ್. ಕರಿಬಸಯ್ಯ ಪುತ್ಥಳಿ ಅನಾವಣಗೊಳಿಸಿ, ವಜ್ರಮಹೋತ್ಸವ ಆಚರಿಸಬೇಕು : ಕಲಾ ಕಂಠೀರವ ದಿ. ಟಿ.ಎಸ್. ಕರಿಬಸಯ್ಯ ಸೇವಾ ಟ್ರಸ್ಟ್ ಆಗ್ರಹ
ಕಂಠೀರವ ಸ್ಟುಡಿಯೋಸ್ ಆವರಣದಲ್ಲಿ ಟಿ.ಎಸ್. ಕರಿಬಸಯ್ಯ ಪುತ್ಥಳಿ ಅನಾವಣಗೊಳಿಸಿ, ವಜ್ರಮಹೋತ್ಸವ ಆಚರಿಸಬೇಕು : ಕಲಾ ಕಂಠೀರವ ದಿ. ಟಿ.ಎಸ್. ಕರಿಬಸಯ್ಯ ಸೇವಾ ಟ್ರಸ್ಟ್ ಆಗ್ರಹ
ಬೆಂಗಳೂರು,ಮಾ.16: ಬೆಂಗಳೂರಿನ ಕಂಠೀರವ ಸ್ಟುಡಿಯೋ ಸ್ಥಾಪನೆಯ ರೂವರಿ ತಿಪಟೂರಿನ ಟಿ.ಎಸ್ ಕರಿಬಸಯ್ಯ ಅವರ ಕೊಡುಗೆಯನ್ನು ಕನ್ನಡ ಚಿತ್ರೋದ್ಯಮ ಕಡೆಗಣಿಸಿದ್ದು, ಸ್ಟುಡಿಯೋ ಆವರಣದಲ್ಲಿ ಸಿದ್ಧವಾಗಿರುವ ಟಿ.ಎಸ್ ಕರಿಬಸಯ್ಯ ಪುತ್ಥಳಿಯನ್ನು ಈ ತಿಂಗಳ 18 ರಂದು ಅನಾವರಣಗೊಳಿಸಬೇಕು ಎಂದು ಕಲಾ ಕಂಠೀರವ ದಿ. ಟಿ.ಎಸ್. ಕರಿಬಸಯ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದೆ. ಮಂಡಳಿ ಪ್ರಧಾನ ಕಾರ್ಯದರ್ಶಿ ಸುಂದರ್ ರಾಜ್, ಕಾರ್ಯದರ್ಶಿ ಗಣೇಶ್ ಅವರಿಗೆ ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಹಾಗೂ ಹಿರಿಯ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿಂಗಳು 18 ಕ್ಕೆ ಕಂಠೀರವ ಸ್ಟುಡಿಯೋ ಸ್ಥಾಪನೆಯಾಗಿ 60 ವರ್ಷ ತುಂಬಲಿದೆ. ಜೊತೆಗೆ ಕರಿ ಬಸವಯ್ಯ ಅವರಿಗೆ 115 ವರ್ಷ ತುಂಬಲಿದ್ದು, ಅವರ ಜನ್ಮ ಶತಮಾನೋತ್ಸವನ್ನು ಸಹ ಆಚರಿಸಬೇಕು. ಕರಿಬಸಯ್ಯ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವಂತಾಗಬೇಕು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕಂಠೀರವ ಸ್ಟುಡಿಯೋ ವಜ್ರ ಮಹೋತ್ಸವ ಆಚರಿಸಬೇಕು. ವಾರ್ತಾ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುಪರ್ದಿಯಲ್ಲಿದ್ದು, ಇಲಾಖೆಯಿಂದ ಈ ಬಗ್ಗೆ ಆಸಕ್ತಿ ವ್ಯಕ್ತವಾಗಿಲ್ಲ. ವಜ್ರ ಮಹೋತ್ಸವ ಆಚರಣೆಗೆ ನಿಷ್ಕಾಳಜಿ ವ್ಯಕ್ತವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತಿತರ ಅಂಗ ಸಂಸ್ಥೆಗಳು ಒಗ್ಗೂಡಿ ವಜ್ರ ಮಹೋತ್ಸವ ಆಚರಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ಚಿತ್ರ ರಂಗಕ್ಕೆ ಕರಿಬಸಯ್ಯ ಅಪಾರ ಕೊಡುಗೆ ನೀಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಹೆಸರು ಇಂದು ಮರೆಯಾಗುತ್ತಿದ್ದು, ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಸರಕಾರ ಹಾಗೂ ಕನ್ನಡ ಚಿತ್ರರಂಗ ಅದ್ಧೂರಿ ಯಿಂದ ಆಚರಿಸಬೇಕು. ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಹೆಸರು ಗಳಿಸಿದೆ. ಅಂತಯೇ ರಂಗ ಭೂಮಿ ಹಾಗೂ ಚಿತ್ರರಂಗಕ್ಕೆ ನಗರದ ಟಿ.ಎಸ್.ಕರಿಬಸಯ್ಯ ಕೊಡುಗೆ ಅಪಾರವಾಗಿದೆ. ಕನ್ನಡ ಚಿತ್ರರಂಗ ಆರಂಭವಾದ ದಿನದಿಂದಲೂ 1966ರವರೆಗೆ ಕನ್ನಡ ಚಿತ್ರರಂಗದ ಸಿನಿಮಾಗಳ ಚಿತ್ರಿಕರಣಕ್ಕೆ ಮದರಾಸಿಗೆ ತೆರಳಬೇಕಿತ್ತು, ಆ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಸುಸಜ್ಜಿತ ಸ್ಟುಡಿಯೋಗಳು ಇರಲಿಲ್ಲ. ಇಂತಹ ಸ್ಥಿತಿಯನ್ನು ಮನಗಂಡ ಕಲಾರಾಧಕ ಟಿ.ಎಸ್ ಕರಿಬಸಯ್ಯ ಅವರು ಗುಬ್ಬಿವೀರಣ್ಣನವರ ಜತೆಗೂಡಿ 1966 ರಲ್ಲಿ ಬೆಂಗಳೂರಿನಲ್ಲಿ ಕಂಠೀರವ ಸ್ಟುಡಿಯೊ ಸ್ಥಾಪಿಸಿ ಚಿತ್ರರಂಗದ ಅನೇಕ ಕಲಾವಿದರಿಗೆ ನಿರ್ದೇಶಕರಿಗೆ, ನಿರ್ಮಾಪಕರಿಗೆ, ಆಶ್ರಯದಾತರಾಗಿದ್ದರು ಎಂದರು.
ರಂಗಭೂಮಿ ಹಾಗೂ ಚಿತ್ರರಂಗದ ಏಳಿಗಾಗಿ ತಮ್ಮ ಜೀವನವನ್ನೇ ಮುಡಪಾಗಿಟ್ಟಿದ್ದ ಟಿ.ಎಸ್. ಕರಿಬಸಯ್ಯ ಅವರ ಕಲಾ ಸೇವೆಯನ್ನು ಇಂದು ಕನ್ನಡ ಚಿತ್ರರಂಗ ಮತ್ತು ಸರಕಾರ ಮರೆತಿರುವಂತೆ ಕಾಣುತ್ತಿದೆ. ಸ್ಟುಡಿಯೋ ಸರಕಾರದ ಸುಪರ್ದಿಗೆ ತೆಗೆದು ಕೊಂಡು ಹಲವು ವರ್ಷಗಳೇ ಕಳೆದಿದ್ದರೂ ಈವರೆಗೆ ಸರಕಾರವು ಕನಿಷ್ಠ ಟಿ.ಎಸ್.ಕರಿಬಸಯ್ಯ ಅವರ ಸ್ಮರಣೆ ಕಾರ್ಯಕ್ರಮ ಆಚರಿಸಿಲ್ಲ. ಇದೀಗ ಅವರ ಪುತ್ಥಳಿ ಸಿದ್ಧವಾಗಿದ್ದರೂ ಅನಾವರಣಗೊಳಿಸಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಉಪಾಧ್ಯಕ್ಷ ತಿಪಟೂರು ದಯಾನಂದ್ ಸಾಗರ್, ಕರ್ನಾಟಕ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರು ಡಿಂಗ್ರಿ ನಾಗರಾಜು, ಕನ್ನಡ ರಾಜು ಮತ್ತಿತರರು ಉಪಸ್ಥಿತರಿದ್ದರು.






Comments
Leave a Comment