ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ
ಬೆಂಗಳೂರು, ಮಾರ್ಚ್ 13:
“ನಾನು ಒಡಿಶಾ ಶಾಸಕರನ್ನು ಕರೆಸಿಲ್ಲ, ಅವರೇ ಬೆಂಗಳೂರಿಗೆ ಬಂದಿದ್ದಾರೆ. ಅಧಿವೇಶನ ಕಲಾಪ ಮುಗಿದ ಬಳಿಕ ನಾನು ಹೋಗಿ ಅವರನ್ನು ಭೇಟಿ ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಎಂದು ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಒಡಿಶಾ ಶಾಸಕರು ರಾಮನಗರದ ರೆಸಾರ್ಟ್ ನಲ್ಲಿದ್ದು, ನೀವೇ ಅವರನ್ನು ಕರೆಸಿದ್ದೀರಿ ಎಂದು ಕೇಳಿದಾಗ ಅವರು ಈ ರೀತಿ ಉತ್ತರಿಸಿದರು.
“ಅವರು ಯಾವ ಕಾರಣಕ್ಕೆ ಬಂದಿದ್ದಾರೆ ಎಂದು ಗೊತ್ತಿಲ್ಲ. ಆ ರಾಜ್ಯದ ನಮ್ಮ ಪಿಸಿಸಿ ಅಧ್ಯಕ್ಷರು ಕರೆ ಮಾಡಿ ನಮ್ಮ ಶಾಸಕರು ಬರುತ್ತಿದ್ದಾರೆ ಎಂದು ಕೇಳಿದರು. ಪಕ್ಷದ ವಿಚಾರ ಇರಬೇಕು, ನಾನೇ ಹೋಗಿ ಭೇಟಿ ಮಾಡುವೆ ಎಂದು ಹೇಳಿದ್ದೇನೆ. ಅವರಿಗೆ ಮೈಸೂರು ನೋಡುವ ಆಸೆ ಇದೆ. ಅವರು ನಾವು ಬರುತ್ತೇವೆ ಎಂದು ತಿಳಿಸಿದಾಗ, ನಾನು ಬನ್ನಿ ಎಂದು ಹೇಳಿದೆ. ಆರಾಮಾಗಿ ಇರುವ ಜಾಗ ಬೇಕು ಎಂದು ಕೇಳಿದರು, ಹೀಗಾಗಿ ಅವರಿಗೆ ವ್ಯವಸ್ಥೆ ಮಾಡಿದ್ದೇವೆ” ಎಂದು ಹೇಳಿದರು.
ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡಮತದಾನವಾಗದಂತೆ ತಡೆಯಲು ನಿಮಗೆ ಪಕ್ಷ ಟಾಸ್ಕ್ ನಿಡಿದೆಯೇ ಎಂದು ಕೇಳಿದಾಗ, “ಪಕ್ಷ ಹೇಳಿದ್ದನ್ನು ಮಾಡಬೇಕು. ಎಲ್ಲಾ ರಾಜ್ಯಗಳಲ್ಲೂ ಈ ರೀತಿ ನಡೆಯುತ್ತಿರುತ್ತದೆ. ಇದು ಹೊಸತೇನಲ್ಲ. ನನ್ನ ಭೇಟಿಗೆ ಸಮಯ ಕೇಳಿದರು. ನಾನು ಅಧಿವೇಶನ ನಡೆಯುತತಿದೆ. ಇಲ್ಲಿಗೆ ಬರಬೇಡಿ ಕಲಾಪ ಮುಗಿಸಿಕೊಂಡು ನಾನೇ ಬರುತ್ತೇನೆ ಎಂದು ಹೇಳಿರುವೆ” ಎಂದು ಹೇಳಿದೆ.
ಆಪರೇಷನ್ ಕಮಲ ತಪ್ಪಿಸಲು ಈ ಪ್ರಯತ್ನವೇ ಎಂದು ಕೇಳಿದಾಗ, “ನನಗೆ ಈ ಬಗ್ಗೆ ಗೊತ್ತಿಲ್ಲ. ಬೆಂಗಳೂರು ಸುರಕ್ಷಿತ ಹೀಗಾಗಿ ಅವರು ಇಲ್ಲಿಗೆ ಬಂದು ವೀಕ್ಷಣೆ ಮಾಡಬೇಕು ಎಂದು ಹೇಳಿದರು, ನಾನು ಅವರನ್ನು ಭೇಟಿಯಾಗಿಲ್ಲ. ಅವರು ನಮ್ಮ ಸಹೋದ್ಯೋಗಿಗಳು, ಅವರು ಬರುತ್ತಾರೆ ಎಂದಾಗ ಹಾಗೂ ಪಿಸಿಸಿ ಅಧ್ಯಕ್ಷರು ನನಗೆ ಈ ವಿಚಾರವಾಗಿ ಕೇಳಿದಾಗ, ನಾನು ಬನ್ನಿ ಎಂದು ಹೇಳಿರುವೆ. ಅವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನಾನು ಇದನ್ನು ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಸಮಯದಿಂದಲೂ ಮಾಡಿಕೊಂಡು ಬರುತ್ತಿರುವೆ. ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ, ಮಧ್ಯಪ್ರದೇಶ ಸೇರಿದಂತೆ ಅನೇಕ ಬಾರಿ ಈ ಕೆಲಸ ಮಾಡಿದ್ದೇನೆ” ಎಂದರು.
ಪಕ್ಷಕ್ಕೆ ಈ ರೀತಿ ಟ್ರಬಲ್ ಆದಾಗೆಲ್ಲಾ ನೀವೇ ತಲೆ ಕೊಡುತ್ತೀರಿ, ನಿಮ್ಮ ಸಮಸ್ಯೆ ಬಗೆಹರಿಯುತ್ತಿಲ್ಲವಲ್ಲ ಎಂದು ಕೇಳಿದಾಗ, “ಕಾಲ ನಿರ್ಣಯ ಮಾಡುತ್ತದೆ” ಎಂದು ತಿಳಿಸಿದರು.
ಪಕ್ಷ ಈ ವಿಚಾರದಲ್ಲಿ ನಿಮಗೆ ಜವಾಬ್ದಾರಿ ನೀಡಿದೆಯೇ ಎಂದು ಕೇಳಿದಾಗ, “ಯಾವುದೇ ರೀತಿಯ ಜವಾಬ್ದಾರಿ ನೀಡಿಲ್ಲ. ನಮ್ಮ ಪಿಸಿಸಿ ಅಧ್ಯಕ್ಷರು ಶಾಸಕರು ಬರುತ್ತಿದ್ದಾರೆ ಎಂದು ಹೇಳಿದ್ದು, ನೀವು ನಮ್ಮ ಅತಿಥಿಗಳು ಬನ್ನಿ” ಎಂದು ತಿಳಿಸಿದರು.
ಸಚಿವ ಸಂಪುಟ ಪುನಾರಚನೆಗೆ ಒತ್ತಡ ಹೆಚ್ಚುತ್ತಿರುವ ಬಗ್ಗೆ ಕೇಳಿದಾಗ, “ಮಂತ್ರಿಯಾಗುವ ಆಸೆ ಇರುತ್ತದೆ. ನಾನು ಮೊದಲ ಬಾರಿಗೆ ಮಂತ್ರಿಯಾಗಿದ್ದೆ. ಈಗ ನಮಗೆ ವಯಸ್ಸಾಗಿದೆ. ಹಿರಿಯ ನಾಗರೀಕರಾಗಿದ್ದೇವೆ. ಅವರಿಗೂ ಆಸೆ ಇದೆ” ಎಂದರು.
ಬಜೆಟ್ ಕುರಿತಾಗಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರ ಅಸಮಾಧಾನ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಜಿಲ್ಲಾ ನ್ಯಾಯಾಲಯ ಬೇಕು ಎಂದು ಕೇಳಿದ್ದರು, ನಾವು ಅದನ್ನು ನೀಡಿದ್ದೇವೆ. ಬೇಕಾದಷ್ಟು ಕೆಲಸವನ್ನು ನೀಡಿದ್ದೇವೆ. ಅವುಗಳನ್ನು ಘೋಷಣೆ ಮಾಡುತ್ತೇವೆ” ಎಂದು ತಿಳಿಸಿದರು.


Comments
Leave a Comment