ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ಎಸ್ಸಿ ಸಮುದಾಯದ ಒಳ ಮೀಸಲಾತಿ ಜಾರಿ ಮಾಡಲು ವಿಶೇಷ ಸಂಪುಟ ಸಭೆ ಅಗತ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬದ್ದತೆ ಇದ್ದರೆ, ಸುಪ್ರೀಂ ಕೊರ್ಟ್ ನಿರ್ದೇಶನದಂತೆ ನ್ಯಾ.ನಾಗಮೋಹನ್ ದಾಸ್ ವರದಿ ಆಧರಿಸಿ ಒಳಮೀಸಲಾತಿ ಜಾರಿ ಮಾಡಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಸ್ಸಿ ಎಸ್ಟಿಗಳಿಗೆ ಸದಾ ಕಾಲ ಅನ್ಯಾಯ ಮಾಡುತ್ತ ಬಂದಿದೆ. ಅವರ ವಿಚಾರ ಬಂದಾಗ ಯಾವುದೇ ಸ್ಪಷ್ಡವಾಗಿರುವ ನಿಲುವು ನಿರ್ಧಾರ ತೆಗೆದುಕೊಂಡಿಲ್ಲ ಹಿಂದೆ ಐದು ವರ್ಷ ಸಿದ್ದರಾಮಯ್ಯ ಸಿಎಂ ಆದಾಗ ಒಳ ಮೀಸಲಾತಿ ಹೋರಾಟ, ಎಸ್ಟಿ ಎಸ್ಸಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಕೂಗು ಕೇಳಿತು. ಸ್ವಾಮೀಜಿಗಳು ಪಾದಯಾತ್ರೆ ಮಾಡಿದರು. ಹಿಂದುಳಿದ ವರ್ಗದ ಸ್ವಾಮೀಜಿಗಳು ಪಾದಯಾತ್ರೆ ಮಾಡಿದರು. ಅಹಿಂದ ನಾಯಕ ಅಂತ ಹೇಳುವ ಸಿಎಂ ಮುಸ್ಲೀಮರನ್ನು ಬಿಟ್ಟು ಅಹಿಂದ ವರ್ಗಕ್ಕೆ ಬದುಕಿನಲ್ಲಿ ಬದಲಾಗುವ ಯಾವುದೇ ಯೋಜನೆ ಮಾಡಿಲ್ಲ ಎಂದು ಆರೋಪಿಸಿದರು.
ಎಸ್ಸಿ ಎಸ್ಟಿ ಹಣ ಬೇರೆಡೆ ಖರ್ಚು
ಎಸ್ಸಿ ಎಸ್ಟಿ ಗೆ ಮೀಸಲಿಟ್ಟ ಅನುದಾನ ವರ್ಗಾಯಿಸಿ ಬೇರೆ ಕಡೆ ಖರ್ಚು ಮಾಡುತ್ತೀರಿ ಅದರ ಬಗ್ಗೆ ಏನೂ ಅನಿಸುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಸುಮಾರು 60 ಸಾವಿರ ಕೋಟಿ ಹಣ ಬೇರೆ ಕಡೆಗೆ ಖರ್ಚಾಗಿದೆ. ಬಜೆಟ್ ನಲ್ಲಿ ಒಬಿಸಿಗೆ 441ಕೋಟಿ ರೂ. ಇಟ್ಟಿದ್ದರು. ಅದನ್ನು ಜಾತಿ ಗಣತಿ ಮಾಡಲು ಇಟ್ಟರು. ಅದನ್ನು ರಾಜ್ಯದ ಬೊಕ್ಕಸದಿಂದ ಖರ್ಚು ಮಾಡಬೇಕಿತ್ತು. ನಿಗಮ ಮಂಡಳಿಗಳಲ್ಲಿ ಎಸ್ಸಿ ಎಸ್ಟಿ ಶಾಸಕರೆ ಗಂಗಾ ಕಲ್ಯಾಣಕ್ಕೆ ಹಣ ನಿಡಿಲ್ಲ ಅಂತ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಒಳ ಮೀಸಲಾತಿಯ ಬಗ್ಗೆ ಸ್ಪಷ್ಟತೆ ಇಲ್ಲ ಈ ಜನಾಂಗದ ಬಗ್ಗೆ ಕಳಕಳಿ ಇಲ್ಲ. ನಾವು ಮಿಸಲಾತಿ ಹೆಚ್ಚಳ ಮಾಡಿದ್ದು ಚುನಾವಣೆ ಗಿಮಿಕ್ ಅಂದರು, ನಾವು ನವೆಂಬರ್ ನಲ್ಲಿ ಮೀಸಲಾತಿ ಹೆಚ್ಚಳ ಮಾಡಿದ್ದೇವು ಚುನಾವಣೆ ಎಪ್ರಿಲ್ ನಲ್ಲಿ ನಡೆಯಿತು. ಅಂಬೇಡ್ಕರ್ ಅವರು ಎಸ್ಸಿ ಎಸ್ಡಿ ಜನಾಂಗಕ್ಕೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂದು ಹೇಳಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಮೀಸಲಾತಿ ಹೆಚ್ಚಳ ಮಾಡಲು ನ್ಯಾ. ನಾಗಮೊಹನ್ ದಾಸ್ ಸಮಿತಿ ವರದಿ ನೀಡಿತ್ತು. ಆ ವರದಿಯಂತೆ ನಾವು ಸಂಪುಟದಲ್ಲಿ ಒಪ್ಪಿಗೆ ಪಡೆದು ಕಾನೂನು ಮಾಡಿ ಜಾರಿ ಮಾಡಿದ್ದೇವೆ. ಒಳ ಮೀಸಲಾತಿ ಹೆಚ್ಚಳವನ್ನೂ ನಾವು ಮಾಡಿದ್ದೇವು. ಅದರ ಬಗ್ಗೆ ಎರಡು ತೀರ್ಪುಗಳಿದ್ದವು. ಇವರಿಗೆ ಬದ್ದತೆ ಇದ್ದಿದ್ದರೆ 2013 ರಲ್ಲಿಯೇ ಮಾಡಬಹುದಿತ್ತು. ಒಳ ಮೀಸಲಾತಿ ಜಾರಿ ಮಾಡಲು ಸಂವಿಧಾನ ತಿದ್ದುಪಡಿ ಅಗತ್ಯ ಇಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿತು. ನಾವು ಮಾಡಿದಂತೆ ಸುಪ್ರೀಂ ಕೋರ್ಟ್ ಹೇಳಿತು. ಅದರಂತೆ ಮತ್ತೆ ನ್ಯಾ. ನಾಗಮೊಹನ ದಾಸ್ ಸಮಿತಿ ಮಾಡಿದರು. ಅವರು ವರದಿ ಕೊಟ್ಟರು ಆ ವರದಿಯಂತೆಯೂ ಜಾರಿ ಮಾಡದೇ ಸಂಪುಟದಲ್ಲಿ ತಮಗೆ ಬೇಕಾದಂತೆ ಮಾಡಿದರು. ಹೈಕೋರ್ಟ್ ನಲ್ಲಿ ನಿಮ್ಮ ಅಡ್ವಕೇಟ್ ಜನರಲ್ ಅವರೇ ಬರೆದು ಕೊಟ್ಡಿದ್ದಾರೆ. ಒಳ ಮೀಸಲಾತಿಯನ್ನು ಕಾನೂನು ಮಾಡಿದ್ದೀರಿ ಅದಕ್ಕೆ ರಾಜ್ಯಪಾಲರ ಒಪ್ಪಿಗೆ ಇದೆ. ಆದರೆ, ರಾಜ್ಯ ಸರ್ಕಾರ ತಾವೇ ಮಾಡಿದ ಕಾನೂನು ಜಾರಿ ಮಾಡಲು ಆಗುತ್ತಿಲ್ಲ. ಅದಕ್ಕೆ ವಿಶೇಷ ಸಂಪುಟ ಸಭೆ ಏಕೆ ಬೇಕು. ಅವರ ಮಂತ್ರಿ ಮಂಡಲದಲ್ಲಿಯೇ ಎರಡು ಗುಂಪಿದೆ. ಒಳ ಮಿಸಲಾತಿಯೇ ಬೇಡ ಎನ್ನುವ ಗುಂಪಿದೆ. ಸಿಎಂ ಒಳ ಮೀಸಲಾತಿ ಬೇಡ ಎನ್ನುವ ಗುಂಪಿನ ಸಚಿವರ ಒತ್ತಡಕ್ಕೆ ಮಣಿದಿದ್ದಾರೆ ಎಂದು ಆರೋಪಿಸಿದರು.
ರಾಜ್ಯಾದ್ಯಂತ ಹೋರಾಟ
ಮೀಸಲಾತಿಯ ಬಗ್ಗೆ ಸ್ಪಷ್ಟತೆ ಇಲ್ಲದೇ 56 ಸಾವಿರ ಪೋಸ್ಟ್ ತುಂಬಿಕೊಳ್ಳಲು ತೀರ್ಮಾನಿಸಿದ್ದಾರೆ. ಈಗಗಾಕೇ ಶೇ 56% ಮೀಸಲಾತಿ ಶಿಕ್ಷಣ ಕ್ಷೇತ್ರದಲ್ಲಿ ಜಾರಿಯಲ್ಲಿದೆ. ಇವರು ಗಟ್ಟಿಯಾಗಿ ಜಾರಿ ಮಾಡಿದರೆ ಸುಪ್ರೀಂ ಕೋರ್ಟ್ ಬಿಟ್ಟರೆ ಯಾರೂ ಅಡ್ಡಿ ಮಾಡುವುದಿಲ್ಲ. ಶೇ 56% ಮೀಸಲಾತಿಗೆ ಯಾರೂ ತಡೆ ಕೊಟ್ಟಿಲ್ಲ. ಸುಪ್ರೀಂ ಕೊರ್ಟ್ ನಿರ್ದೇಶನದಂತೆ ನಾಗಮೋಹನ್ ದಾಸ್ ಅವರ ಸಮಿತಿ ನೀಡಿರುವ ವರದಿಯಂತೆ ಒಳ ಮಿಸಲಾತಿ ಜಾರಿ ಮಾಡಬೇಕು. ಅಲೆಮಾರಿಗಳು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ. ಅವರಿಗೆ ಮನೆ ಇಲ್ಲ. ಕಾಡಿನಲ್ಲಿದ್ದಾರೆ ಅವರು ಸಂಘಟಿತ ಆಗಿಲ್ಲ ಎನ್ನುವ ಕಾರಣಕ್ಕೆ ಅವರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಾವು ಈ ಬಗ್ಗೆ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡುತ್ತೆವೆ. ಈಗಾಗಲೇ ಒಂದು ಹೋರಾಟ ಆಗಿದೆ. ಇದು ರಾಜ್ಯಾದ್ಯಂತ ಆಗುತ್ತದೆ. ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು. ವಿಳಂಬ ಮಾಡುತ್ತಿರುವುದನ್ನು ಖಂಡಿಸುತ್ತೇನೆ ಎಂದು ಹೇಳಿದರು.
ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಂವಿಧಾನದ ಸೆಡ್ಯೂಲ್ 9 ರಲ್ಲಿ ಸೇರಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನದ ಸೆಡ್ಯೂಲ್ 9 ನಲ್ಲಿ ಮೊದಲಿನಂತೆ ರಕ್ಷಣೆ ಇಲ್ಲ. ಅದನ್ನು ಪ್ರಶ್ನೆ ಮಾಡಲು ಅವಕಾಶ ಇದೆ. ತಮಿಳು ನಾಡಿನ ಮೀಸಲಾತಿಯನ್ನೂ ಪ್ರಶ್ನಿಸಲಾಗಿದೆ. ಒಳ ಮೀಸಲಾತಿ ವಿಚಾರದಲ್ಲಿ ತೆಲಂಗಾಣದ ಸರ್ಕಾರದಲ್ಲಿ ಗೊಂದಲ ಇಲ್ಲ ಇಲ್ಲಿ ಸರ್ಕಾರಕ್ಕೆ ಮಾಡಲು ಮನಸಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ರಾಜುಗೌಡ, ಶಿವನಗೌಡ ನಾಯಕ್ ಹಾಗೂ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಹಾಜರಿದ್ದರು.



Comments
Leave a Comment